PFI ಕಚೇರಿ, ನಿವಾಸದಲ್ಲಿ NIA ಶೋಧ- ಸಿಕ್ಕಿದ್ದೇನು? ಯಾರೆಲ್ಲಾ ಬಂಧನ- ಇಲ್ಲಿದೆ ಸಂಪೂರ್ಣ ವಿವರ
ಬೆಂಗಳೂರು, ಸೆಪ್ಟೆಂಬರ್ 22: ಭಾರತದಾದ್ಯಂತ ED, NIA ಮತ್ತು ರಾಜ್ಯ ಪೊಲೀಸ್ ಪಡೆಗಳು ಜಂಟಿಯಾಗಿ ಪಿಎಫ್ಐ ಕಚೇರಿ, ನಾಯಕ ನಿವಾಸಗಳ ಮೇಲೆ ಸಂಘಟಿತ ಶೋಧಗಳನ್ನು ನಡೆಸಿವೆ. ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿ, ಅಸ್ಸಾಂ, ಮಧ್ಯಪ್ರದೇಶ, ಮಹಾರಾಷ್ಟ್ರ, ಗೋವಾ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಮಣಿಪುರ ಸೇರಿದಂತೆ ಭಾರತದ 15 ರಾಜ್ಯಗಳ 93 ಸ್ಥಳಗಳಲ್ಲಿ ಎನ್ಐಎ ಶೋಧ ನಡೆಸಿ 45 ಆರೋಪಿಗಳನ್ನು ಬಂಧಿಸಲಾಗಿದೆ.
ಪಿಎಫ್ಐ ನಾಯಕರು ಮತ್ತು ಕಾರ್ಯಕರ್ತರು ಭಯೋತ್ಪಾದನೆ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಧನಸಹಾಯ ಮತ್ತು ತರಬೇತಿ ಶಿಬಿರಗಳನ್ನು ಆಯೋಜಿಸುತ್ತಿದ್ದರು ಎಂದು ತಿಳಿದುಬಂದಿತ್ತು. ಈ ವಿಚಾರದಲ್ಲಿ ದಾಖಲೆ ಸಿಕ್ಕ ಬಳಿಕ ಎನ್ಐಎ ದಾಖಲಿಸಿದ 5 ಪ್ರಕರಣಗಳಿಗೆ ಸಂಬಂಧಿಸಿದಂತೆ ಪಿಎಫ್ಐ ಉನ್ನತ ನಾಯಕರು ಮತ್ತು ಸದಸ್ಯರ ಮನೆ ಮತ್ತು ಕಚೇರಿಗಳಲ್ಲಿ ಈ ಶೋಧಗಳನ್ನು ನಡೆಸಲಾಗಿದೆ.
ಪಿಎಫ್ಐ ಕಚೇರಿ ಮೇಲೆ ದಾಳಿ ಧರ್ಮಾಧರಿತವಲ್ಲ- ಗೃಹ ಸಚಿವ ಆರಗ ಜ್ಞಾನೇಂದ್ರ
ಸಶಸ್ತ್ರ ತರಬೇತಿಯನ್ನು ನೀಡುವುದು ಮತ್ತು ನಿಷೇಧಿತ ಸಂಸ್ಥೆಗಳಿಗೆ ಸೇರಲು ಜನರನ್ನು ಭಯೋತ್ಪಾದಕರನ್ನಾಗಿಸುವುದು. ತೆಲಂಗಾಣದ ದಾಖಲಾಗಿದ್ದ ಪ್ರಕರಣ ಸಂಬಂಧ ತನಿಖೆಯನ್ನು ನಡೆಸಲಾಗಿದೆ. ತೆಲಂಗಾಣದ ನಿಜಾಮಾಬಾದ್ ಪೊಲೀಸ್ ಠಾಣೆಯಲ್ಲಿ 25 ಕ್ಕೂ ಹೆಚ್ಚು ಪಿಎಫ್ಐ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತೆಲಂಗಾಣ ಪೊಲೀಸರ ತನಿಖೆಯ ವೇಳೆಯಲ್ಲಿ ಆರೋಪಿಗಳು ತರಬೇತಿ ನೀಡಲು ಶಿಬಿರಗಳನ್ನು ಆಯೋಜಿಸುತ್ತಿದ್ದಾರೆ ಎಂಬ ವಿಚಾರ ಬಯಲಾಗಿತ್ತು. ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಉದ್ದೇಶದಿಂದ ಹಿಂಸಾತ್ಮಕ ಮತ್ತು ಭಯೋತ್ಪಾದಕ ಕೃತ್ಯಗಳನ್ನು ಮಾಡಿಸಲು ಸಜ್ಜಾಗಿರುವುದು ತಿಳಿದು ಬಂದಿತ್ತು. ಇದರಿಂದಾಗಿ ಎನ್ಐಎ ಏಕಕಾಲದಲ್ಲಿ ದೇಶದಾದ್ಯಂತ ದಾಳಿಯನ್ನು ನಡೆಸಿದೆ.
ಪ್ರಜೆಗಳ ಮನಸ್ಸಿನಲ್ಲಿ ಆತಂಕದ ಪರಿಣಾಮ
ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಪಿಎಫ್ಐ ಮತ್ತು ಅದರ ನಾಯಕರು ಮತ್ತು ಸದಸ್ಯರ ವಿರುದ್ಧ ಕಳೆದ ಕೆಲವು ವರ್ಷಗಳಿಂದ ವಿವಿಧ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಕಾಲೇಜು ಪ್ರಾಧ್ಯಾಪಕರ ಕೈ ಕತ್ತರಿಸುವುದು, ಇತರ ಧರ್ಮಗಳನ್ನು ಪ್ರತಿಪಾದಿಸುವ ಸಂಸ್ಥೆಗಳಿಗೆ ಸಂಬಂಧಿಸಿದ ವ್ಯಕ್ತಿಗಳ ಕೊಲೆಗಳು, ಪ್ರಮುಖ ವ್ಯಕ್ತಿಗಳು ಮತ್ತು ಸ್ಥಳಗಳನ್ನು ಗುರಿಯಾಗಿಸಲು ಸ್ಫೋಟಕಗಳ ಸಂಗ್ರಹ, ಇಸ್ಲಾಮಿಕ್ ಸ್ಟೇಟ್ಗೆ ಬೆಂಬಲ ಮತ್ತು ಸಾರ್ವಜನಿಕ ಆಸ್ತಿ ನಾಶದಂತಹ ಕ್ರಿಮಿನಲ್ ಹಿಂಸಾತ್ಮಕ ಕೃತ್ಯಗಳನ್ನು PFI ನಡೆಸುತ್ತದೆ. ಪ್ರಜೆಗಳ ಮನಸ್ಸಿನಲ್ಲಿ ಭಯೋತ್ಪಾದನೆಯ ಆತಂಕದ ಪರಿಣಾಮವನ್ನು ಬೀರಿವೆ.
ದೇಶದಲ್ಲಿ ದಾಳಿ ಬಳಿಕ ಬಂಧನವೆಷ್ಟು?
ಸೆ.22ರ ಬೆಳಗ್ಗೆಯಿಂದಲೇ ED, NIA ಸೇರಿದಂತೆ ಸ್ಥಳೀಯ ಪೊಲೀಸರ ಸಹಕಾರದಿಂದ ನಡೆದ ದಾಳಿ ವೇಳೆಯಲ್ಲಿ ಹಲವು ಅಮೂಲ್ಯ ದಾಖಲೆ ಸಿಕ್ಕಿವೆ. ದಾಖಲೆಯ ಜೊತೆಗೆ ನಗದು, ಹರಿತವಾದ ಆಯುಧಗಳು ಮತ್ತು ಹೆಚ್ಚಿನ ಸಂಖ್ಯೆಯ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣಗಳಲ್ಲಿ ಎನ್ಐಎ 45 ಮಂದಿಯನ್ನು ಬಂಧಿಸಲಾಗಿದೆ. ಕೇರಳದಿಂದ 19 ಆರೋಪಿಗಳನ್ನು ಬಂಧಿಸಲಾಗಿದ್ದು, ತಮಿಳುನಾಡಿನಿಂದ 11, ಕರ್ನಾಟಕದಿಂದ 7, ಆಂಧ್ರಪ್ರದೇಶದಿಂದ 4, ರಾಜಸ್ಥಾನದಿಂದ 2, ಯುಪಿ ಮತ್ತು ತೆಲಂಗಾಣದಿಂದ ತಲಾ ಒಬ್ಬರನ್ನು ಬಂಧಿಸಲಾಗಿದೆ ಎಂದು ಎನ್ಐಎ ತಿಳಿಸಿದೆ.
5 ಪ್ರಕರಣಗಳ ತನಿಖೆಯಿಂದ ದೇಶಾದ್ಯಂತ ದಾಳಿ
NIA ಅಧಿಕಾರಿಗಳು PFIಗೆ ಸಂಬಂಧಿಸಿದಂತೆ 19 ಪ್ರಕರಣಗಳನ್ನು ತನಿಖೆಯನ್ನು ನಡೆಸುತ್ತಿದೆ. ಇದರಲ್ಲಿ ಪ್ರಮುಖ 5 ಕೇಸ್ಗಳಿಗೆ ಸಂಬಂಧಿಸಿದಂತೆ ದೇಶಾದ್ಯಂತ ಏಕಕಾಲದಲ್ಲಿ ದಾಳಿಯನ್ನು ನಡೆಸಲಾಗಿದೆ. ಎನ್ಐಎ ನಡೆಸಿದ ದಾಳಿಯಲ್ಲಿ 45 ಆರೋಪಿಗಳನ್ನು ಬಂಧಿಸಲಾಗಿತ್ತು. ದಾಖಲೆಗಳನ್ನು ವಶಕ್ಕೆ ಪಡೆದು ತನಿಖೆಯನ್ನು ತೀವ್ರಗೊಳಿಸಲಾಗಿದೆ.
ಯಾವ ರಾಜ್ಯದ ಎಷ್ಟು ಆರೋಪಿಗಳ ಬಂಧನ
ಕೇರಳದಲ್ಲಿ 8 ಆರೋಪಿಗಳನ್ನು ಬಂಧಿಸಲಾಗಿದೆ. 1. ಒ.ಎಂ.ಎ. ಸಲಾಂ @ ಒ.ಎಂ. ಅಬ್ದುಲ್ ಸಲಾಂ, 2. ಜಸೀರ್ ಕೆ.ಪಿ., 3. ವಿ.ಪಿ. ನಜರುದ್ದೀನ್ ಎಲಮರಮ್ @ ನಜರುದ್ದೀನ್ ಎಲಮರಮ್ , 4. ಮೊಹಮ್ಮದ್ ಬಶೀರ್, 5. ಶಫೀರ್ ಕೆ.ಪಿ. 6. ಇ ಅಬುಬಕರ್, 7. ಪ್ರೊ.ಪಿ.ಕೋಯಾ @ ಕಲೀಂ ಕೋಯಾ, 8. ಇ.ಎಂ. ಅಬ್ದುಲ್ ರಹಿಮಾನ್ @ ಇ ಎಂ ಸಿಕ್ಕಿಬಿದ್ದಿದ್ದಾರೆ.
ಇನ್ನು ಕರ್ನಾಟಕದಲ್ಲಿ 7 ಆರೋಪಿಗಳು ಸಿಕ್ಕಿಬಿದ್ದಿದ್ದು 9. ಅನಿಸ್ ಅಹ್ಮದ್, 10. ಅಫ್ಸರ್ ಪಾಷಾ, 11. ಅಬ್ದುಲ್ ವಾಹಿದ್ ಸೇಟ್, 12. ಯಾಸರ್ ಅರಾಫತ್ ಹಸನ್ 13. ಮೊಹಮ್ಮದ್ ಶಕೀಬ್ @ ಶಾಕಿಫ್, 14. ಮುಹಮ್ಮದ್ ಫಾರೂಕ್ ಉರ್ ರೆಹಮಾನ್, 15. ಶಾಹಿದ್ ನಾಸಿರ್ ಅರೆಸ್ಟ್ ಆಗಿದ್ದಾರೆ.
ತಮಿಳುನಾಡಿನಲ್ಲಿ ಮೂವರು ಸಿಕ್ಕಿಬಿದ್ದಿದ್ದು 16. ಎಂ.ಮೊಹಮ್ಮದ್ ಅಲಿ ಜಿನ್ನಾ, 17. ಮೊಹಮ್ಮದ್ ಯೂಸುಫ್,18. ಎ.ಎಸ್. ಇಸ್ಮಾಯಿಲ್ @ ಅಪ್ಪಮ್ಮ ಇಸ್ಮಾಯಿಲ್ ಬಂಧನವಾಗಿದೆ. ಉತ್ತರ ಪ್ರದೇಶದಲ್ಲಿ 19. ವಸೀಮ್ ಅಹ್ಮದ್ ಎಂಬಾತನನ್ನು ಬಂಧಿಸಲಾಗಿದೆ. ರಾಜಸ್ಥಾನದಲ್ಲಿ 20. ಮೊಹಮ್ಮದ್ ಆಸಿಫ್ @ ಆಸಿಫ್, 21. ಸಾದಿಕ್ ಸರ್ರಾಫ್ ತಲಬ್ಬದ ಎಂಬುವವರ ಅರೆಸ್ಟ್ ಆಗಿದ್ದಾರೆ.
ತಮಿಳುನಾಡಿನ ಮತ್ತೊಂದು ಪ್ರಕರಣದಲ್ಲಿ 22. ಸೈಯದ್ ಇಶಾಕ್, 23. ವಕೀಲ ಖಾಲಿದ್ ಮೊಹಮ್ಮದ್, 24. ಎ.ಎಂ. ಇದ್ರಿಸ್ @ ಅಹಮದ್ ಇದ್ರಿಸ್, 25. ಮೊಹಮ್ಮದ್ ಅಬುತಾಹಿರ್, 26. ಎಸ್.ಖಾಜಾ ಮೈದೀನ್, 27. ಯಾಸರ್ ಅರಾಫತ್ , 28. ಬರಾಕತುಲ್ಲಾ, 29. ಫಯಾಜ್ ಅಹಮದ್ ಸಿಕ್ಕಿಬಿದ್ದಿದ್ದಾರೆ.
ಕೇರಳದ ಮತ್ತೊಂದು ಪ್ರಕರಣದಲ್ಲಿ 30. ನಜುಮುದೀನ್, 31. ಸೈನುದ್ದೀನ್ ಟಿ ಎಸ್ 32. ಯಾಹಿಯಾ ಕೋಯಾ ತಂಗಳ್, 33. ಕೆ ಮುಹಮ್ಮದಲಿ @ ಕುನ್ಹಪ್ಪೋ, 34. ಸಿ ಟಿ ಸುಲೈಮಾನ್ , 35. ಪಿ ಕೆ ಉಸ್ಮಾನ್ @ ಪಳ್ಳಿಕ್ಕರಂಜಲಿಲ್ ಕುಂಜಿಪ್ಪು ಉಸ್ಮಾನ್ @ ಉಸ್ಮಾನ್ ಪೆರುಂಪಿಲಾವು, 36. ಕರಮಾನ ಅಶ್ರಫ್ ಮೌಲವಿ, 37. ಸಾದಿಕ್ ಅಹಮದ್, 38. ಶಿಹಾಸ್, s/o ಹಾಸನ, 39. ಅನ್ಸಾರಿ ಪಿ, 40.M M ಮುಜೀಬ್ S/o ಮುಹಮ್ಮದ್ ಬಂಧನವಾಗಿದೆ.
ಆಂಧ್ರಪ್ರದೇಶದಲ್ಲಿ 41. ಅಬ್ದುಲ್ ರಹೀಮ್, 42. ಅಬ್ದುಲ್ ವಾಹಿದ್ ಅಲಿ, 43. ಶೇಕ್ ಜಫ್ರುಲ್ಲಾ, 44. ರಿಯಾಜ್ ಅಹಮದ್ ಎಂಬುವವರು ಸಿಕ್ಕಿಬಿದ್ದಿದ್ದು ತೆಲಂಗಾಣದ ಮತ್ತೊಂದು ಪ್ರಕರಣದಲ್ಲಿ 45. ಅಬ್ದುಲ್ ವಾರಿಸ್ ಎಂಬಾತ ಸಿಕ್ಕಿಬಿದ್ದಿದ್ದಾನೆ. ದೇಶಾದ್ಯಂತ 45 ಜನರು ಏಕಕಾಲದಲ್ಲಿ ಸಿಕ್ಕಿಬಿದ್ದಿದ್ದಾರೆ.
ಪಿಎಫ್ಐ ವಿರುದ್ದದ ತನಿಖಾ ಪ್ರಗತಿ ಪರಿಶೀಲನೆ
ಪಿಎಫ್ಐ ಕಚೇರಿ ಮತ್ತು ನಾಯಕರ ನಿವಾಸದ ಮೇಲೆ ದಾಳಿಯನ್ನು ನಡೆಸಲಾಗಿದೆ. ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ಉನ್ನತ ಅಧಿಕಾರಿಗಳ ಸಭೆ ನಡೆಸಿದರು. ಫ್ರಂಟ್ ಆಫ್ ಇಂಡಿಯಾ ಮತ್ತು ಭಯೋತ್ಪಾದಕ ಶಂಕಿತರ ವಿರುದ್ಧ ಕ್ರಮ, ಅಧಿಕಾರಿಗಳಿಂದ ವಿವರವನ್ನು ಪಡೆಯಲಾಗಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ಮಹಾನಿರ್ದೇಶಕ ದಿನಕರ್ ಗುಪ್ತಾ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ದೇಶಾದ್ಯಂತ ಭಯೋತ್ಪಾದಕ ಶಂಕಿತರು ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಕಾರ್ಯಕರ್ತರ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ಶಾ ಅವರು ಪರಿಶೀಲನೆ ನಡೆಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.