ಎನ್ಐಎಯಿಂದ ಎಲ್ಲ ಪ್ರಕರಣಕ್ಕೂ 'ಕೇಸರಿ ಬಣ್ಣ'
ನವದೆಹಲಿ, ಏಪ್ರಿಲ್ 17: ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ಪ್ರತಿ ಪ್ರಕರಣಕ್ಕೂ ಹಿಂದೂ ಭಯೋತ್ಪಾದನೆಯ ಆಯಾಮದ ಬಣ್ಣವನ್ನೇ ಹಚ್ಚುತ್ತಿತ್ತು ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಮಾಜಿ ಅಧೀನ ಕಾರ್ಯದರ್ಶಿ ಆರ್.ವಿ.ಎಸ್. ಮಣಿ ಹೇಳಿದ್ದಾರೆ.
ಮೂಲ ಪ್ರಕರಣವನ್ನು ಸಿಬಿಐ ನಿರ್ವಹಿಸುತ್ತಿರುತ್ತದೆ. ಅದು ಎಲ್ಲ ಸಾಕ್ಷ್ಯಗಳನ್ನೂ ಸಂಗ್ರಹಿಸಿ ಚೆನ್ನಾಗಿ ತನಿಖೆ ನಡೆಸುತ್ತಿರುತ್ತದೆ. ಆಗ ಗೃಹ ಸಚಿವಾಲಯದ ರಾಜಕೀಯ ನಾಯಕತ್ವವು ಪ್ರಕರಣವನ್ನು ಒಂದು ಸಂಸ್ಥೆಯಿಂದ ಮತ್ತೊಂದು ಸಂಸ್ಥೆಗೆ ವರ್ಗಾಯಿಸುತ್ತದೆ. ಪ್ರಮುಖ ಪ್ರಕರಣವನ್ನು ಎನ್ಐಎ ಒಪ್ಪಿಸುತ್ತದೆ. ಅವರು ಅಸಲಿ ಸಾಕ್ಷ್ಯಗಳನ್ನು ಏನು ಮಾಡುತ್ತಾರೋ ಗೊತ್ತಿಲ್ಲ. ಆದರೆ, ಆ ಪ್ರಕರಣಕ್ಕೆ ಕೇಸರಿ ಭಯೋತ್ಪಾದನೆಯ ಕಥೆ ಕಟ್ಟಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಮೆಕ್ಕಾ ಮಸೀದಿ ಸ್ಫೋಟ ಪ್ರಕರಣ: ಎಲ್ಲ ಐವರು ಆರೋಪಿಗಳ ಖುಲಾಸೆ
ಆರಂಭದಲ್ಲಿ ಎನ್ಐಎ ಕೇವಲ ಕೇಸರಿ ಭಯೋತ್ಪಾದನೆಯ ಪ್ರಕರಣಗಳನ್ನು ಮಾತ್ರ ನಿರ್ವಹಿಸಿತ್ತು. ಅದು ತನಿಳಖಾ ಸಂಸ್ಥೆ ಎನ್ನುವುದಕ್ಕಿಂತ ಪೈಂಟಿಂಗ್ ಸಂಸ್ಥೆ ಎಂದು ಕರೆಯಬಹುದು. ಪ್ರತಿ ಪ್ರಕರಣಕ್ಕೂ ಕೇಸರಿ ಬಣ್ಣ ಬಳಿಯುತ್ತಿದ್ದರು ಎಂದಿದ್ದಾರೆ.
'ನಾನು ಸಚಿವಾಲಯದಿಂದ ವರ್ಗಾವಣೆಯಾದ ಬಳಿಕ ದೇಶದ ಅನೇಕ ಭಯೋತ್ಪಾದನಾ ಕೃತ್ಯ ಪ್ರಕರಣಗಳಲ್ಲಿ ಗೃಹ ಸಚಿವಾಲಯದಲ್ಲಿನ ಧರ್ಮ ರಾಜಕೀಯ ಕೆಲಸ ಮಾಡಿದೆ. ನನ್ನ ವರ್ಗಾವಣೆಯ ಬಳಿಕ ಗೃಹ ಸಚಿವಾಲಯದಲ್ಲಿ ಹಿಂದೂ ಭಯೋತ್ಪಾದನೆಯ ಬೀಜ ಬಿತ್ತಲಾಯಿತು. ನಾನು 22 ತಿಂಗಳಿಗೆ ಮುನ್ನವೇ ಸ್ವಯಂ ನಿವೃತ್ತಿ ತೆಗೆದುಕೊಂಡೆ. ನಾನು ಸತ್ಯದೊಂದಿಗೆ ಇದ್ದೇನೆ. ಹುದ್ದೆಗಳ ಬೆನ್ನತ್ತುವುದು ರಾಜಕಾರಣಿಗಳ ಕೆಲಸ. ನನ್ನದಲ್ಲ' ಎಂದು ಹೇಳಿದ್ದಾರೆ.