ಇಸ್ಲಾಂ ಧರ್ಮಬೋಧಕ ಜಾಕಿರ್ ವಿಚಾರಣೆಗೆ ಕೊನೆ ಅವಕಾಶ?
ಕಳೆದೊಂದು ತಿಂಗಳಿನಿಂದ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಒಂದರ ಮೇಲೊಂದರಂತೆ ಸಮನ್ಸ್ ಜಾರಿಗೊಳಿಸಲಾಗಿದ್ದರೂ ವಿಚಾರಣೆಗೆ ಹಾಜರಾಗದ ಜಾಕಿರ್.
ನವದೆಹಲಿ, ಏಪ್ರಿಲ್ 4: ವಿಚಾರಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಆಯೋಗ (ಎನ್ ಐಎ) ನೀಡುತ್ತಿರುವ ಯಾವುದೇ ಸಮನ್ಸ್ ಗೆ ಜಗ್ಗದ ಇಸ್ಲಾಂ ಧರ್ಮ ಬೋಧಕ ಜಾಕಿರ್ ನಾಯಕ್ ಅವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ಜಾಕಿರ್ ಅವರ ಮೇಲೆ ಹಣಕಾಸು ಅಕ್ರಮಗಳ ಆರೋಪಗಳಿರುವುದರಿಂದ ಎನ್ ಐಎ, ಜಾಕಿರ್ ಅವರನ್ನು ವಿಚಾರಣೆಗೊಳಪಡಿಸಲು ತೀರ್ಮಾನಿಸಿದೆ. ಹಾಗಾಗಿ, ಕಳೆದೊಂದು ತಿಂಗಳಿನಿಂದ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಒಂದರ ಮೇಲೊಂದರಂತೆ ಸಮನ್ಸ್ ಜಾರಿಗೊಳಿಸಲಾಗಿದ್ದರೂ ಅವರು ವಿಚಾರಣೆಗೆ ಹಾಜರಾಗಿಲ್ಲ.
ಈಗ ಮೂರನೇ ಬಾರಿಗೆ ಮತ್ತೊಂದು ಸಮನ್ಸ್ ಜಾರಿಗೊಂಡಿದೆ. ಈ ಬಾರಿ, ಏಪ್ರಿಲ್ 17ರಂದು ವಿಚಾರಣೆಗೆ ಹಾಜರಾಗಬೇಕೆಂದು ಅದು ಸೂಚಿಸಿದೆ.
ಈ ಬಾರಿಯೂ ಅವರು ವಿಚಾರಣೆಗೆ ಹಾಜರಾಗದಿದ್ದಲ್ಲಿ, ಎನ್ ಐಎಯು ನ್ಯಾಯಾಲಯದ ಮೊರೆ ಹೋಗುವುದಲ್ಲದೆ, ನ್ಯಾಯಾಲಯದ ನಿರ್ದೇಶನವನ್ನು ಪಡೆದು ಅದನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ರವಾನಿಸಲಿದೆ. ಆನಂತರ, ಕೇಂದ್ರ ಗೃಹ ಸಚಿವಾಲಯದಿಂದ ಜಾಕಿರ್ ಬಂಧನದ ವಾರಂಟ್ ಜಾರಿಯಾಗಲಿದೆ.
ಇದು ಜಾರಿಗೊಳ್ಳುತ್ತಲೇ, ಎನ್ ಐಎಯು ಜಾಕಿರ್ ಹಸ್ತಾಂತರ ಪ್ರಕ್ರಿಯೆಗೆ ಚಾಲನೆ ನೀಡಲಿದೆ ಎಂದು ಮೂಲಗಳು ತಿಳಿಸಿವೆ.
ವಿಚಾರಣೆಗೆ ಹಾಜರಾಗದ ಜಾಕಿರ್: ಜಾಕಿರ್ ಅವರು ಕಳೆದ ಹತ್ತು ತಿಂಗಳಿನಿಂದಲೂ ಸೌದಿ ಅರೇಬಿಯಾದಲ್ಲಿ ನೆಲೆಸಿರುವುದಾಗಿ ಹೇಳಲಾಗಿದೆ. ಹಾಗಾಗಿ, ಅವರ ಇ-ಮೇಲ್ ವಿಳಾಸಕ್ಕೂ ಈ ಹಿಂದೆ ಸಮನ್ಸ್ ಗಳನ್ನು ಜಾರಿಗೊಳಿಸಲಾಗಿತ್ತು. ವಿಚಾರಣೆಗಾಗಿ ಖುದ್ದಾಗಿ, ಭಾರತಕ್ಕೆ ಆಗಮಿಸಬೇಕೆಂದೂ ಸೂಚಿಸಲಾಗಿತ್ತು.
ಈ ಹಿಂದೆ ಕಳುಹಿಸಲಾದ ಎರಡು ಸಮನ್ಸ್ ಗಳಲ್ಲಿ ಕ್ರಮವಾಗಿ ಮಾರ್ಚ್ 14 ಹಾಗೂ ಮಾರ್ಚ್ 30ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು.
ಆ ಎರಡು ಸಮನ್ಸ್ ಗಳಲ್ಲಿ ಒಂದಕ್ಕೆ ಮಾತ್ರ ಸ್ಪಂದಿಸಿದ್ದ ಜಾಕಿರ್, ''ತಾವು ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೊಳಗಾಗುವುದಾಗಿ ಎನ್ ಐಎಗೆ ಮನವಿ ಸಲ್ಲಿಸಿದ್ದರು. ಆದರೆ, ಆ ಮನವಿಯನ್ನು ಎನ್ ಐಎ ಮಾನ್ಯ ಮಾಡಿರಲಿಲ್ಲ. ಜಾಕಿರ್ ಖುದ್ದು ಹಾಜರಾಗಬೇಕೆಂಬುದೇ ಎನ್ ಐಎನ ನಿಲುವಾಗಿದೆ.