ಕೇರಳ, ಪಶ್ಚಿಮ ಬಂಗಾಳದಲ್ಲಿ ಉಗ್ರರ ಬೃಹತ್ ಜಾಲದ ಮೇಲೆ ಎನ್ಐಎ ದಾಳಿ, 9 ಶಂಕಿತರ ಬಂಧನ
ನವದೆಹಲಿ, ಸೆಪ್ಟೆಂಬರ್ 19: ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ದಾಳಿಗಳನ್ನು ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಪಾಕಿಸ್ತಾನ ಪ್ರಾಯೋಜಿತ ಅಲ್ ಖೈದಾ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ 9 ಶಂಕಿತ ಉಗ್ರರನ್ನು ಬಂಧಿಸಿದೆ.
ಕೇರಳದ ಎರ್ನಾಕುಳಂ ಮತ್ತು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ನ ಹಲವು ಸ್ಥಳಗಳ ಮೇಲೆ ಸಂಸ್ಥೆಯು ಏಕಕಾಲಕ್ಕೆ ದಾಳಿಗಳನ್ನು ನಡೆಸಿದೆ. ಭಾರತದ ವಿವಿಧ ಸ್ಥಳಗಳಲ್ಲಿ ಅಂತಾರಾಜ್ಯ ಘಟಕದ ಅಲ್ ಖೈದಾ ಚಟುವಟಿಕೆಗಳು ನಡೆಯುತ್ತಿವೆ ಎಂಬ ಖಚಿತ ಮಾಹಿತಿ ಆಧಾರದಲ್ಲಿ ಈ ದಾಳಿ ನಡೆದಿದೆ ಎಂದು ಎನ್ಐಎ ವಕ್ತಾರರು ತಿಳಿಸಿದ್ದಾರೆ.
ISIS ಸೇರಿದ್ದ ಬೆಂಗಳೂರಿನ ಯುವಕ ಸಿರಿಯಾದಲ್ಲಿ ಹತ್ಯೆ
ಅಂತಾರಾಜ್ಯ ಘಟಕದ ಚಟುವಟಿಕೆಗಳು ಹಲವು ಸಮಯದಿಂದ ನಡೆಯುತ್ತಿದ್ದು, ಭಾರತದ ವಿವಿಧ ಪ್ರಮುಖ ಪ್ರದೇಶಗಳಲ್ಲಿ ದೊಡ್ಡ ಮಟ್ಟದ ಉಗ್ರರ ದಾಳಿ ನಡೆಸಲು ಸಿದ್ಧತೆ ನಡೆಸಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.
'ದೇಶದ ಅನೇಕ ಪ್ರಮುಖ ಭಾಗಗಳಲ್ಲಿ ಭಯೋತ್ಪಾದನಾ ದಾಳಿಗಳನ್ನು ನಡೆಸಲು ಈ ಗುಂಪು ಸಂಚು ರೂಪಿಸುತ್ತಿತ್ತು. ಈ ಮೂಲಕ ಅಮಾಯಕ ಜನರನ್ನು ಕೊಲ್ಲುವ ಹಾಗೂ ಅವರ ಮನಸಿನಲ್ಲಿ ಭೀತಿ ಮೂಡಿಸುವ ಉದ್ದೇಶ ಅವರಲ್ಲಿತ್ತು. ಈ ಸಂಬಂಧ ಸೆ. 11ರಂದು ಪ್ರಕರಣ ದಾಖಲಾಗಿತ್ತು' ಎಂದು ತಿಳಿಸಿದ್ದಾರೆ. ಮುಂದೆ ಓದಿ.
ಪುಲ್ವಾಮಾ ದಾಳಿ ಪ್ರಕರಣ: ಚಾರ್ಜ್ ಶೀಟ್ ಸಲ್ಲಿಸಿದ ಎನ್ಐಎ
ಭಾರಿ ಪ್ರಮಾಣದ ವಸ್ತುಗಳ ವಶ
ಮುಂಜಾನೆ ನಡೆಸಿದ ದಾಳಿಗಳಲ್ಲಿ ಪಶ್ಚಿಮ ಬಂಗಾಳದಿಂದ ಆರು ಮಂದಿಯನ್ನು ಬಂಧಿಸಲಾಗಿದ್ದರೆ, ಕೇರಳದಲ್ಲಿ ಮೂವರನ್ನು ಬಂಧಿಸಲಾಗಿದೆ. ದಾಳಿಯ ವೇಳೆ ಡಿಜಿಟಲ್ ಉಪಕರಣಗಳು, ದಾಖಲೆಗಳು, ಜಿಹಾದಿ ಸಾಹಿತ್ಯ, ಹರಿತವಾದ ಆಯುಧಗಳು, ದೇಶಿ ನಿರ್ಮಿತ ಪಿಸ್ತೂಲುಗಳು, ಸ್ಥಳೀಯವಾಗಿ ಮಾಡಿದ ದೇಹ ರಕ್ಷಾ ಕವಚ, ಮನೆಯಲ್ಲಿಯೇ ಸ್ಫೋಟಕ ತಯಾರಿಕೆಯ ಮಾಹಿತಿ ನೀಡುವ ಲೇಖನ ಹಾಗೂ ಬರಹಗಳು ಸೇರಿದಂತೆ ಅಪಾರ ಪ್ರಮಾಣದ ವಸ್ತುಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ.
ಅಲ್ಖೈದಾದಿಂದ ಪ್ರಚೋದನೆ
ಬಂಧಿತರು ಪಾಕಿಸ್ತಾನ ಮೂಲದ ಅಲ್ ಖೈದಾ ಉಗ್ರರಿಂದ ಸಾಮಾಜಿಕ ಮಾಧ್ಯಮಗಳ ಮೂಲಕ ತೀವ್ರಗಾಮಿಗಳಾಗಿದ್ದರು. ರಾಜಧಾನಿ ದೆಹಲಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ದಾಳಿಗಳನ್ನು ನಡೆಸಲು ಪ್ರಚೋದನೆ ಪಡೆದುಕೊಂಡಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ನವದೆಹಲಿಯಲ್ಲಿ ಮದ್ದುಗುಂಡು ಖರೀದಿ
ಈ ಘಟಕವು ನಿಧಿ ಸಂಗ್ರಹದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿತ್ತು. ಜತೆಗೆ ಈ ಗ್ಯಾಂಗ್ನ ಕೆಲವು ಸದಸ್ಯರು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಖರೀದಿಗಾಗಿ ನವದೆಹಲಿಗೆ ಪ್ರಯಾಣಿಸಿದ್ದರು. ಬಂಧಿತರನ್ನು ಕೇರಳ ಮತ್ತು ಪಶ್ಚಿಮ ಬಂಗಾಳ ಪೊಲೀಸರ ವಶಕ್ಕೆ ಹಾಗೂ ಮುಂದಿನ ತನಿಖೆಗಾಗಿ ಸಂಬಂಧಿತ ನ್ಯಾಯಾಲಯಗಳಿಗೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಎಲ್ಲರೂ ಸ್ಥಳೀಯರು
ಕೇರಳದ ಬಂಧಿತ ಉಗ್ರರನ್ನು ಮುರ್ಷಿದ್ ಹಸನ್, ಇಯಾಕುಬ್ ಬಿಸ್ವಾಸ್ ಮತ್ತು ಮೊಸರಫ್ ಹೊಸೆನ್ ಎಂದು ಗುರುತಿಸಲಾಗಿದ್ದು, ಎಲ್ಲರೂ ಎರ್ನಾಕುಲಂ ನಿವಾಸಿಗಳೆಂದು ಗುರುತಿಸಲಾಗಿದೆ.
ನಜ್ಮುಸ್ ಸಾಕಿಬ್, ಅಬು ಸೂಫಿಯಾನ್, ಮೈನುಲ್ ಮೊಂಡಲ್, ಲೀ ಯೀನ್ ಅಹ್ಮದ್, ಅಲ್ ಮಾಮುನ್ ಕಮಲ್ ಮತ್ತು ಅತಿತುರ್ ರೆಹಮಾನ್ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನಿವಾಸಿಗಳಾಗಿದ್ದಾರೆ.