ವೈಷ್ಣೋದೇವಿ ದರ್ಶನಕ್ಕೆ ಕತ್ತರಿ ಪ್ರಯೋಗಿಸಿದ ಹಸಿರು ನ್ಯಾಯಮಂಡಳಿ
ನವದೆಹಲಿ, ನವೆಂಬರ್ 13: ಇನ್ನು ಮುಂದೆ ದಿನಕ್ಕೆ ಕೇವಲ 50,000 ಭಕ್ತರಿಗೆ ಮಾತ್ರ ಜಮ್ಮುವಿನ ಪ್ರಸಿದ್ಧ ಹಿಂದೂ ಧಾರ್ಮಿಕ ಕ್ಷೇತ್ರ ವೈಷ್ಣೋದೇವಿಯ ದರ್ಶನ ಸಿಗಲಿದೆ. 50,000 ಕ್ಕಿಂತ ಹೆಚ್ಚುನ ಜನರ ಒತ್ತಡವನ್ನು ವೈಷ್ಣೋದೇವಿ ಭವನ ತಡೆದುಕೊಳ್ಳುವುದಿಲ್ಲ ಎಂಬ ಕಾರಣಕ್ಕೆ ಇಂಥಹದ್ದೊಂದು ಮಿತಿಯನ್ನಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಹೇರಿದೆ.
ವೈಷ್ಣೋ ದೇವಾಲಯಕ್ಕೆ ತೆರಳಲು ಕುದುರೆ, ಕತ್ತೆ ಹಾಗೂ ಇತರೇ ಪ್ರಾಣಿಗಳನ್ನು ಬಳಕೆ ಮಾಡುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಎನ್ಜಿಟಿ ಈ ತೀರ್ಮಾನ ತೆಗೆದುಕೊಂಡಿದೆ.
ಒಂದೊಮ್ಮ 50 ಸಾವಿರಕ್ಕಿಂತ ಹೆಚ್ಚು ಭಕ್ತರು ಆಗಮಿಸಿದ್ದಲ್ಲಿ ಅವರಿಗೆ ಅರ್ಧಕುಮಾರಿ ಅಥವಾ ಕತ್ರ ನಗರದಲ್ಲಿ ತಂಗಲು ವ್ಯವಸ್ಥೆ ಮಾಡಿಕೊಡಬೇಕೆಂದು ಎನ್.ಜಿ.ಟಿ ಸೂಚಿಸಿದೆ.
ನವೆಂಬರ್ 24ರಿಂದ ಪ್ರವಾಸಿಗರಿಗಾಗಿ ನಿರ್ಮಾಣವಾಗಿರುವ 40ಕೋಟಿ ರೂಪಾಯಿ ವೆಚ್ಚದ ಹೊಸ ಮಾರ್ಗ ಉದ್ಘಾಟನೆಯಾಗಲಿದ್ದು, ಕೇವಲ ಪಾದಚಾರಿಗಳು ಹಾಗೂ ಬ್ಯಾಟರಿ ಚಾಲಿತ ಕಾರುಗಳ ಓಡಾಟಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈ ನಿಯಮ ಉಲ್ಲಂಘಿಸಿದಲ್ಲಿ ರೂ. 2,000 ದಂಡ ವಿಧಿಸಲು ಆಡಳಿತ ಮಂಡಳಿ ನಿರ್ದೇಶನ ನೀಡಿದೆ.
ಕಳೆದ ವರ್ಷ ವೈಷ್ಣೋ ದೇವಿ ದೇಗುಲಕ್ಕೆ 77ಲಕ್ಷ ಭಕ್ತರು ಆಗಮಿಸಿದ್ದರು. ಕುದುರೆ, ಕತ್ತೆ ಹಾಗೂ ಇತರೆ ಪ್ರಾಣಿಗಳ ಬಳಕೆ ಮಾಡುವಂತಿಲ್ಲ ಎಂದು ಎನ್.ಜಿ.ಟಿ ಹೇಳಿದೆ. ಮತ್ತು ಹಳೆ ಮಾರ್ಗಗಳಿಂದಲೂ ಇವುಗಳನ್ನು ನಿಧಾನಕ್ಕೆ ನಿಲ್ಲಿಸುವಂತೆ ಸೂಚಿಸಿದೆ.