ಭಾರತಕ್ಕೆ ಬರುವ ಯಾವುದೇ ಯೋಜನೆಗಳಿಲ್ಲ: ಝಾಕೀರ್ ನಾಯಕ್ ಸ್ಪಷ್ಟನೆ
ನವದೆಹಲಿ, ಜುಲೈ 4: ನಾನು ಭಾರತಕ್ಕೆ ಬರುತ್ತಿದ್ದೇನೆ ಎಂಬ ಸುದ್ದಿಗಳು ಆಧಾರ ರಹಿತ ಎಂದು ವಿವಾದಿತ ಮುಸ್ಲಿಂ ಧಾರ್ಮಿಕ ಮುಖಂಡ ಝಾಕೀರ್ ನಾಯಕ್ ಸ್ಪಷ್ಟಪಡಿಸಿದ್ದಾರೆ.
"ನಾನು ಭಾರತಕ್ಕೆ ಬರುತ್ತಿದ್ದೇನೆ ಎಂಬ ಸುದ್ದಿ ಶುದ್ಧ ಆಧಾರ ರಹಿತ ಮತ್ತು ಸುಳ್ಳು. ಭಾರತದಲ್ಲಿ ನಡೆಯುತ್ತಿರುವ ಅನ್ಯಾಯದ ವಿಚಾರಣೆಯ ಬಗ್ಗೆ ನನಗೆ ಸುರಕ್ಷಿತ ಭಾವ ಮೂಡದೇ ನಾನು ಬರುವ ಯಾವ ಯೋಜನೆಯೂ ಇಲ್ಲ. ಭಾರತ ಸರಕಾರ ನ್ಯಾಯೋಚಿತವಾಗಿದೆ ಎಂದು ಅನಿಸಿದವತ್ತು ನಾನು ನನ್ನ ತಾಯ್ನಾಡಿಗೆ ಮರಳುತ್ತೇನೆ," ಎಂದು ಝಾಕೀರ್ ನಾಯಕ್ ತಿಳಿಸಿದ್ದಾರೆ.
ಝಾಕೀರ್ ನಾಯಕ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ ಎನ್ಐಎ
ಇನ್ನು ಝಾಕೀರ್ ನಾಯಕ್ ರನ್ನು ಮಲೇಷ್ಯಾದಿಂದ ಭಾರತಕ್ಕೆ ಕರೆ ತರಲಿದ್ದಾರೆ ಎಂಬುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎನ್ಐಎ ವಕ್ತಾರ ಅಲೋಕ್ ಮಿತ್ತಲ್, "ಸದ್ಯಕ್ಕೆ ನಮಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ," ಎಂದಿದ್ದಾರೆ.
"ಅವರು (ಝಾಕೀರ್ ನಾಯಕ್) ಭಾರತಕ್ಕೆ ಬರುತ್ತಿಲ್ಲ. ಈ ಸುದ್ದಿ ಸಂಪೂರ್ಣವಾಗಿ ಸುಳ್ಳು ಮತ್ತು ಆಧಾರರಹಿತವಾಗಿದೆ. ಹಸ್ತಾಂತರ ಪ್ರಕ್ರಿಯೆಗೆ ಸಂಬಂಧಿಸಿದಂತೆ ಈ ಹಿಂದೆಯೇ ಭಾರತೀಯ ಸರ್ಕಾರ ಪ್ರಕ್ರಿಯೆಗಳನ್ನು ಪ್ರಾರಂಭಿಸಿದೆ ಎಂದು ವರದಿಯಾಗಿತ್ತು. ಆದರೆ ಈ ಬಗ್ಗೆ ಯಾವುದೇ ಪ್ರಗತಿಯಿಲ್ಲ," ಎಂಬುದಾಗಿ ಝಾಕೀರ್ ನಾಯಕ್ ವಕೀಲ ಮುಬಿನ್ ಸೋಲ್ಕಾರ್ ಹೇಳಿದ್ದಾರೆ.