ಉಗ್ರರಿಂದ ಪೊಲೀಸರ ಹತ್ಯೆ : ಅಧಿಕಾರಿಗಳ ರಾಜೀನಾಮೆ ಸುದ್ದಿ ಸುಳ್ಳು
ಬೆಂಗಳೂರು, ಸೆಪ್ಟೆಂಬರ್ 21 : ಮೂವರು ಪೊಲೀಸರನ್ನು ಉಗ್ರರು ಹತ್ಯೆ ಮಾಡಿದ್ದಾರೆ ಎಂಬ ಸುದ್ದಿ ಹೊರಬರುತ್ತಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಆರು ಸ್ಪೆಷಲ್ ಪೊಲೀಸ್ ಅಧಿಕಾರಿಗಳು ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಸುಳ್ಳು ಎಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.
ಇಲ್ಲಿ 30 ಸಾವಿರಕ್ಕೂ ಹೆಚ್ಚು ವಿಶೇಷ ಪೊಲೀಸ್ ಅಧಿಕಾರಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಕೆಲ ಆಡಳಿತಾತ್ಮಕ ಕಾರಣಗಳಿಂದಾಗಿ ಕೆಲವರ ಸೇವೆಯನ್ನು ನವೀಕರಣಗೊಳಿಸಿಲ್ಲ. ಅಂಥವರು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇದೇ ಸಂಗತಿಯನ್ನು ಅವರು ರಾಜೀನಾಮೆ ನೀಡಿದ್ದಾರೆ ಎಂದು ಹೇಳಿ ಕೆಲವು ಕುತಂತ್ರಿಗಳು ದಾರಿ ತಪ್ಪಿಸುತ್ತಿದ್ದಾರೆ ಎಂದೂ ಸಚಿವಾಲಯ ಸ್ಪಷ್ಟನೆ ನೀಡಿದೆ.
ಉಗ್ರರಿಂದ ಜಮ್ಮು ಮತ್ತು ಕಾಶ್ಮೀರದ ಅಪಹೃತ ಪೊಲೀಸರ ಬರ್ಬರ ಹತ್ಯೆ
ಕೆಲ ದಿನಗಳ ಹಿಂದೆ ಅಪಹರಣಗೊಂಡಿದ್ದ ಮೂವರು ಪೊಲೀಸ್ ಸಿಬ್ಬಂದಿಗಳನ್ನು ಹಿಜ್ಬುಲ್ ಮುಜಾಹಿದ್ದಿನ್ ಸಂಘಟನೆಯ ಉಗ್ರರು ಹತ್ಯೆ ಮಾಡಿರುವ ಹಿನ್ನೆಲೆಯಲ್ಲಿ, ಈ ಘಟನೆಯಿಂದ ಆಘಾತಗೊಂಡು 6 ಜನ ವಿಶೇಷ ಪೊಲೀಸ್ ಅಧಿಕಾರಿಗಳು ರಾಜೀನಾಮೆ ನೀಡಿದ್ದಾರೆ ಎಂದು ಸುದ್ದಿ ಹರಿದಾಡುತ್ತಿತ್ತು. ಇದನ್ನು ಗೃಹ ಸಚಿವಾಲಯ ಅಲ್ಲಗಳೆದಿದೆ.
There are over 30000 SPOs and their services are reviewed from time to time. Some mischievous elements are trying to project that those SPOs whose services are not renewed due to administrative reasons, have resigned.
— गृहमंत्री कार्यालय, HMO India (@HMOIndia) September 21, 2018
ಪೊಲೀಸ್ ವಶದಲ್ಲಿರುವ ಹನ್ನೆರಡು ಉಗ್ರರನ್ನು ಬಿಡುಗಡೆ ಮಾಡಬೇಕೆಂದು ಉಗ್ರ ಸಂಘಟನೆ ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಿತ್ತು. ಇದಕ್ಕೆ ಮೂರು ದಿನಗಳ ಗಡುವನ್ನೂ ನೀಡಿತ್ತು. ಆದರೆ, ಪೊಲೀಸ್ ವಶದಲ್ಲಿರುವ ಉಗ್ರರನ್ನು ಬಿಡುಗಡೆ ಮಾಡದಿದ್ದರಿಂದ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರನ್ನು ಉಗ್ರರು ಅಪಹರಿಸಿದ್ದರು. ಈಗ ಅವರನ್ನೇ ಹತ್ಯೆ ಮಾಡಲಾಗಿದ್ದು, ಶೋಪಿಯನ್ ಜಿಲ್ಲೆಯಲ್ಲಿ ಅವರ ದೇಹವನ್ನು ವಶಕ್ಕೆ ಪಡೆಯಲಾಗಿದೆ.
ಮುಸ್ಲಿಮರ ಸ್ಮಶಾನದಲ್ಲಿ ಭಯೋತ್ಪಾದಕರ ಶವಸಂಸ್ಕಾರಕ್ಕೆ ಸಿಗಲಿಲ್ಲ ಜಾಗ!
ಉಗ್ರರನ್ನು ಬಿಡುಗಡೆ ಮಾಡದಿದ್ದರೆ ಮತ್ತು ಪೊಲೀಸರು ತಮ್ಮ ಹುದ್ದೆಗೆ ರಾಜೀನಾಮೆ ನೀಡದಿದ್ದರೆ ಕಾಶ್ಮೀರದಲ್ಲಿರುವ ಪ್ರತಿ ಸರಕಾರಿ ನೌಕರರನ್ನು ಹತ್ಯೆ ಮಾಡುವುದಾಗಿ ಉಗ್ರರು ಬೆದರಿಕೆ ಒಡ್ಡಿರುವುದಾಗಿಯೂ ಸುದ್ದಿ ಹಬ್ಬಿತ್ತು. ಈ ಹಿನ್ನೆಲೆಯಲ್ಲಿಯೇ ಆರು ವಿಶೇಷ ಪೊಲೀಸ್ ಅಧಿಕಾರಿಗಳು ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿಯನ್ನು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಇಲಾಖೆ ಕೂಡ ಅಲ್ಲಗಳೆದಿದೆ.