ಶಬರಿಮಲೆ ಪಾವಿತ್ರ್ಯತೆಗೆ ಧಕ್ಕೆ ತರಲು ಮುಂದಾದರೆ ದುಷ್ಕರ್ಮಿಗಳು?
ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದ ಧ್ವಜಸ್ಥಂಭ ವಿರೂಪಗೊಂಡ ಘಟನೆ ವರದಿಯಾಗಿದೆ. ಚಿನ್ನಲೇಪಿತ ಧ್ವಜಸ್ಥಂಭ ಭಾನುವಾರ (ಜೂ 25) ಉದ್ಘಾಟನೆಗೊಂಡಿತ್ತು, ಉದ್ಘಾಟನೆಯ ಪೂರ್ವಭಾವಿ ಸಿದ್ದತೆಗಾಗಿ ಧ್ವಜಸ್ಥಂಭದ ಬಟ್ಟೆ ತೆಗೆದ ವೇಳೆ ಧ್ವಜಸ್ಥಂಭ ವಿರೂಪಗೊ
ಶಬರಿಮಲೆ, ಜೂ 26 (ಪಿಟಿಐ): ದೇಶದ ಪುರಾಣಪ್ರಸಿದ್ದ ಹಿಂದೂ ಧಾರ್ಮಿಕ ಕ್ಷೇತ್ರ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದ ಧ್ವಜಸ್ಥಂಭ ವಿರೂಪಗೊಂಡ ಘಟನೆ ವರದಿಯಾಗಿದೆ.
ಚಿನ್ನಲೇಪಿತ ಈ ಧ್ವಜಸ್ಥಂಭ ಭಾನುವಾರ (ಜೂ 25) ಪೂರ್ವಾಹ್ನ11.30 ರಿಂದ12.30ಕ್ಕೆ ಉದ್ಘಾಟನೆಗೊಂಡಿತ್ತು, ಉದ್ಘಾಟನೆಯ ಪೂರ್ವಭಾವಿ ಸಿದ್ದತೆಗಾಗಿ ಧ್ವಜಸ್ಥಂಭದ ಬಟ್ಟೆ ತೆಗೆದ ವೇಳೆ ಧ್ವಜಸ್ಥಂಭ ವಿರೂಪಗೊಂಡಿದ್ದು ಕಂಡುಬಂದಿದೆ.
ದೇವಾಲಯದ ಆಡಳಿತ ಮಂಡಳಿ, ರಾಜ್ಯ ಸಚಿವ ಕಡಂಕಪಲ್ಲಿ ಸುರೇಂದ್ರನ್ ಮತ್ತು ಅಸಂಖ್ಯಾತ ಭಕ್ತರು ಇದನ್ನು ದುಷ್ಕರ್ಮಿಗಳ ಕೃತ್ಯ ಎಂದರೆ, ತಜ್ಞರು ಮತ್ತು ಬುದ್ದಿಜೀವಿಗಳ ಪ್ರಕಾರ ಇದು ಧ್ವಜಸ್ಥಂಭ ತಯಾರಿಸುವಾಗ ರಾಸಾಯನಿಕ ಪದಾರ್ಥಗಳು ಬಿದ್ದು ಆಗಿರುವಂತದ್ದು.
ಕೇರಳ ಸರಕಾರ ಈ ಸಂಬಂಧ ತನಿಖೆಗೆ ಆದೇಶಿಸಿದೆ. ಪೊಲೀಸರು ಇದುವರೆಗೆ ಮೂವರನ್ನು ಬಂಧಿಸಿದ್ದಾರೆಂದು ಟಿಡಿಬಿ (ಟ್ರಾವಂಕೂರು ದೇವಸ್ಥಾನಂ ಬೋರ್ಡ್) ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತನಿಖೆ ನಡೆಸಿ, ಸಮಗ್ರ ವರದಿ ನೀಡುವಂತೆ ಸೂಚಿಸಿರುವ ಹಿನ್ನಲೆಯಲ್ಲಿ, ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ತಜ್ಞರು, ಶಬರಿಮಲೆ ದೇವಾಲಯಕ್ಕೆ ದೌಡಾಯಿಸಿದ್ದಾರೆ.
ತೇಗದ ಮರದಿಂದ ನಿರ್ಮಿಸಿ ಅದಕ್ಕೆ 9.16 ಕೆಜಿ ಚಿನ್ನ, 300 ಕೆಜಿ ತಾಮ್ರ ಮತ್ತು 17ಕೆಜಿ ಬೆಳ್ಳಿಯನ್ನು ಬಳಸಿ ನಿರ್ಮಿಸಲಾಗಿದ್ದ ಧ್ವಜಸ್ಥಂಭವನ್ನು ಭಾನುವಾರವಷ್ಟೇ ವಿದಿವಿಧಾನದ ಮೂಲಕ ಉದ್ಘಾಟನೆಗೊಳಿಸಲಾಗಿತ್ತು.
ಮೂವರು ಧ್ವಜಸ್ಥಂಭಕ್ಕೆ ಪಾದರಸ ಸಿಂಪಡಿಸುತ್ತಿದ್ದದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ, ಹಾಗಾಗಿ ಧ್ವಜಸ್ಥಂಭದ ಬುಡ ಸ್ವಲ್ಪಮಟ್ಟಿಗೆ ಸುಟ್ಟುಹೋಗಿದೆ. ಮೂವರನ್ನೂ ಪೊಲೀಸರ ವಶಕ್ಕೆ ನೀಡಲಾಗಿದೆ ಎಂದು ಟಿಡಿಬಿ ಅಧ್ಯಕ್ಷ ಗೋಪಾಲಕೃಷ್ಣನ್ ಪಿಟಿಐಗೆ ತಿಳಿಸಿದ್ದಾರೆ.
ಧ್ಜಜಸ್ಥಂಭ ನಿರ್ಮಾಣದ ಕಾರ್ಯಕ್ಕೆ ಬಂದಿದ್ದ ಆಂಧ್ರದ ಕಾರ್ಮಿಕರು, ಉದ್ಘಾಟನೆಗೆ ಮೊದಲೇ ದೇವಾಲಯದಿಂದ ಹೊರಟಿದ್ದದ್ದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದರೆ, ಧ್ವಜಸ್ಥಂಭ ನಿರ್ಮಾಣದ ಆಂಧ್ರಪ್ರದೇಶದ ದಾನಿಯ ವಿರೋಧಿಗಳು ಈ ಕೃತ್ಯ ಎಸಗಿದ್ದಾರೆನ್ನುವ ಮಾತೂ ಚಾಲ್ತಿಯಲ್ಲಿದೆ.