2022ರ ಆರಂಭದಲ್ಲೇ ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರ
ನವದೆಹಲಿ, ನವೆಂಬರ್ 09; ಭಾರತೀಯ ರೈಲ್ವೆ 3ನೇ ಹಂತದ 'ವಂದೇ ಭಾರತ್ ಎಕ್ಸ್ಪ್ರೆಸ್' ರೈಲುಗಳ ಸಂಚಾರಕ್ಕೆ ಸಿದ್ಧತೆ ನಡೆಸುತ್ತಿದೆ. 2022ರ ಆರಂಭದಲ್ಲಿಯೇ ರೈಲುಗಳು ಸಂಚಾರ ನಡೆಸಲಿವೆ. ಈಗಾಗಲೇ ದೇಶದಲ್ಲಿ 3 ಮಾರ್ಗದಲ್ಲಿ ದೇಶದ ಅತಿ ವೇಗದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಓಡುತ್ತಿದೆ.
2022ರ ಆಗಸ್ಟ್ 23ರೊಳಗೆ ಇನ್ನೂ 75 ಹೊಸ 'ವಂದೇ ಭಾರತ್ ಎಕ್ಸ್ಪ್ರೆಸ್' ರೈಲುಗಳನ್ನು ಓಡಿಸುವ ಗುರಿ ಇಲಾಖೆಯದ್ದು. ರೈಲ್ವೆಯ ಇಂಟಗ್ರಲ್ ಕೋಚ್ ಫ್ಯಾಕ್ಟರಿ ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳ ತಯಾರಿಕೆಯ ಅಂತಿಮ ಹಂತದಲ್ಲಿದೆ. ಯಾವ ಮಾರ್ಗದಲ್ಲಿ ಹೊಸ ರೈಲು ಓಡಲಿದೆ ಎಂಬುದು ಇನ್ನೂ ಅಂತಿಮವಾಗಿಲ್ಲ.
ಕರ್ನಾಟಕದಲ್ಲಿ ಶೀಘ್ರವೇ ಓಡಲಿದೆ; ವಂದೇ ಭಾರತ್ ಎಕ್ಸ್ಪ್ರೆಸ್ ರೈಲು
ಪ್ರಸ್ತುತ ದೇಶದಲ್ಲಿ ಸಂಚಾರ ನಡೆಸುತ್ತಿರುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೂ, 3ನೇ ಹಂತದಲ್ಲಿ ಹಳಿಯ ಮೇಲೆ ಓಡುವ ರೈಲಿಗೂ ಹಲವು ವ್ಯತ್ಯಾಸಗಳಿವೆ. 2022ರ ಮಾರ್ಚ್ 31ರೊಳಗೆ ಹೊಸ ಬೋಗಿಗಳು ಕೋಚ್ ಫ್ಯಾಕ್ಟರಿಯಿಂದ ಹೊರ ಬರಲಿವೆ. ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಸ್ಲೀಪರ್ ಕೋಚ್ ಆಳವಡಿಕೆ ಮಾಡುವ ಕುರಿತು ಸಹ ಚರ್ಚೆಗಳು ನಡೆಯುತ್ತಿದೆ. ಆದರೆ ಇದಕ್ಕೆ ಬೋಗಿಯ ನಿರ್ಮಾಣವಾಗಬೇಕಿದೆ.
ಬೆಂಗಳೂರು-ಧಾರವಾಡ ನಡುವೆ ವಂದೇ ಭಾರತ್ ರೈಲು ಸಂಚಾರ
ಕೆಲವು ದಿನಗಳ ಹಿಂದೆ ಭಾರತೀಯ ರೈಲ್ವೆ ಹೌರಾ-ರಾಂಚಿ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳ ಸಂಚಾರ ಆರಂಭಿಸಿದೆ. ದೇಶದಲ್ಲಿ ಒಟ್ಟು ಮೂರು ಮಾರ್ಗದಲ್ಲಿ ಸದ್ಯ ಎಕ್ಸ್ಪ್ರೆಸ್ ರೈಲು ಓಡುತ್ತಿದೆ. ಆತ್ಮ ನಿರ್ಬರ ಪರಿಕಲ್ಪನೆಯಡಿ ದೇಶದ ಅತಿ ವೇಗದ ರೈಲಿನ ನಿರ್ಮಾಣ ನಡೆಯುತ್ತಿದೆ.
ವರ್ಷಗಳ ಬೇಡಿಕೆಗೆ ಮನ್ನಣೆ; ನ.10ರಿಂದ ಕಾರಟಗಿಗೆ ರೈಲು
102 ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರ
ದೆಹಲಿಯ ಕೆಂಪುಕೋಟೆ ಸ್ವತಂತ್ರ ದಿನಾಚರಣೆಯಂದು ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ 75 ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳನ್ನು ಓಡಿಸುವುದಾಗಿ ಘೋಷಣೆ ಮಾಡಿದ್ದರು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾದ ಹಿನ್ನಲೆಯಲ್ಲಿ 75 ರೈಲುಗಳನ್ನು ಘೋಷಣೆ ಮಾಡಲಾಗಿತ್ತು.
ಭಾರತೀಯ ರೈಲ್ವೆ ಈಗಾಗಲೇ 58 ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳ ನಿರ್ಮಾಣಕ್ಕೆ ಟೆಂಡರ್ ಕರೆದಿದೆ. 2024ರ ಹೊತ್ತಿಗೆ 102 ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳ ಸಂಚಾರ ನಡೆಸಬೇಕು ಇಲಾಖೆಯ ಗುರಿ.
ಯಾವ ಮಾರ್ಗದಲ್ಲಿ ಸಂಚಾರ?
ಭಾರತೀಯ ರೈಲ್ವೆ 2019ರ ಫೆಬ್ರವರಿಯಲ್ಲಿ ದೆಹಲಿ-ವಾರಣಾಸಿ ನಡುವೆ ಮತ್ತು 2019ರ ಅಕ್ಟೋಬರ್ನಲ್ಲಿ ದೆಹಲಿ-ಶ್ರೀ ಮಾತಾ ವೈಷ್ಣೋದೇವಿ ಕಟ್ರಾ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರ ಆರಂಭಿಸಿತು. ಕೆಲವು ದಿನಗಳ ಹಿಂದೆ ಹೌರಾ-ರಾಂಚಿ ನಡುವೆ ರೈಲು ಸಂಚಾರ ಆರಂಭಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಕನಸಿನ ಆತ್ಮನಿರ್ಭರ ಭಾರತ ಪರಿಕಲ್ಪನೆಯಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ತಯಾರು ಮಾಡಲಾಗುತ್ತಿದೆ. ಈ ರೈಲಿನ ವೇಗ ಪ್ರಸ್ತುತ 160 ಕಿ. ಮೀ.ಗಳು. ಹೊಸದಾಗಿ ತಯಾರಾಗುತ್ತಿರುವ ರೈಲುಗಳು ಹೊಸ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿವೆ.
ಕರ್ನಾಟಕದಲ್ಲಿಯೂ ಸಂಚಾರ
ಭಾರತೀಯ ರೈಲ್ವೆ ಕರ್ನಾಟಕದಲ್ಲಿಯೂ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರ ಆರಂಭಿಸಲು ಚಿಂತನೆ ನಡೆಸಿದೆ. ಬೆಂಗಳೂರು-ಹುಬ್ಬಳ್ಳಿ ಅಥವ ಬೆಂಗಳೂರು-ಧಾರವಾಡ ಮಾರ್ಗದಲ್ಲಿ ರೈಲು ಸಂಚಾರ ನಡೆಸಲಿದ್ದು, ರಾಜಧಾನಿಯನ್ನು ಉತ್ತರ ಕರ್ನಾಟಕದ ಜೊತೆ ರೈಲು ಬೆಸೆಯಲಿದೆ.
ಧಾರವಾಡದ ಬಿಜೆಪಿ ಸಂಸದ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಈಗಾಗಲೇ ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವ್ ಭೇಟಿ ಮಾಡಿ ಬೆಂಗಳೂರು-ಧಾರವಾಡ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಓಡಿಸಲು ಮನವಿ ಸಲ್ಲಿಕೆ ಮಾಡಿದ್ದಾರೆ.
Recommended Video
ವಂದೇ ಭಾರತ್ ವಿಶೇಷತೆಗಳು
ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ಸೆನ್ಸಾರ್ ಆಧಾರಿತ ಸ್ವಯಂ ಚಾಲಿನ ಬಾಗಿಲುಗಳನ್ನು ಒಳಗೊಂಡಿವೆ. ಮಿನಿ ಪ್ಯಾಂಟ್ರಿ, ಜೈವಿಕ ಶೌಚಾಲಯ ವ್ಯವಸ್ಥೆಯನ್ನು ರೈಲಿನ ಬೋಗಿಗಳು ಹೊಂದಿವೆ. ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, ನಾಲ್ಕು ತುರ್ತು ನಿರ್ಗಮನ ದ್ವಾರಗಳಿವೆ. ಆಧುನಿಕ ಹವಾನಿಯಂತ್ರಿತ ವ್ಯವಸ್ಥೆಯನ್ನು ರೈಲು ಹೊಂದಿದೆ.
ಈಗ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ರೈಲುಗಳನ್ನು ಯಾವ ಮಾರ್ಗದಲ್ಲಿ ಓಡಿಸಲಾಗುತ್ತದೆ ಎಂಬ ಮಾಹಿತಿ ಸಿಕ್ಕಿಲ್ಲ. ದಕ್ಷಿಣ ಭಾರತದಲ್ಲಿ ಸದ್ಯಕ್ಕೆ ಯಾವುದೇ ರೈಲು ಓಡುತ್ತಿಲ್ಲ. ಆದ್ದರಿಂದ ಕರ್ನಾಟಕ ಸೇರಿದಂತೆ ಅಕ್ಕ-ಪಕ್ಕದ ರಾಜ್ಯದ ಮಾರ್ಗಕ್ಕೆ ಆದ್ಯತೆ ನೀಡುವ ನಿರೀಕ್ಷೆ ಇದೆ.