ಭಾರತದಲ್ಲಿ ರೂಪಾಂತರಿ ಕೊರೊನಾ ವೈರಸ್ ಹೆಚ್ಚು ಸಾಂಕ್ರಾಮಿಕವಾಗಬಹುದು: ಏಮ್ಸ್ ಮುಖ್ಯಸ್ಥ
ನವದೆಹಲಿ,ಫೆಬ್ರವರಿ 21: ಭಾರತದಲ್ಲಿ ರೂಪಾಂತರಿ ಕೊರೊನಾ ಸೋಂಕು ಹೆಚ್ಚು ಸಾಂಕ್ರಾಮಿಕವಾಗಬಹುದು ಎಂದು ಏಮ್ಸ್ ಮುಖ್ಯಸ್ಥರು ಹೇಳಿದ್ದಾರೆ.
ಭಾರತದಲ್ಲಿ ಹರ್ಡ್ ಇಮ್ಯುನಿಟಿ ಎನ್ನುವುದು ಒಂದು ಮಿಥ್ ಆಗಿದೆ, ಜನಸಂಖ್ಯೆಯನ್ನು ರಕ್ಷಿಸಲು ಕನಿಷ್ಠ ಶೇ.80ರಷ್ಟು ಮಂದಿಯ ದೇಹದಲ್ಲಿ ಪ್ರತಿಕಾಯಗಳು ಸೃಷ್ಟಿಯಾಗಬೇಕು ಎಂದು ಡಾ. ರಂದೀಪ್ ಗುಲೇರಿಯಾ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಕಂಡು ಬಂದಿರುವ ಹೊಸ ರೂಪಾಂತರಿ ಕೊರೊನಾ ಸೋಂಕು ಹೆಚ್ಚು ಸಾಂಕ್ರಾಮಿಕವಾಗಬಲ್ಲದು. ಇದು ಹೆಚ್ಚು ಬೇಗ ಹರಡುತ್ತದೆ ಮತ್ತು ಅಪಾಯಕಾರಿಯಾಗಿದೆ. ಹಾಗೆಯೇ ಇದು ಮರು ಸೋಂಕಿಗೂ ಕಾರಣವಾಗಬಹುದು ಎಂದು ಅಂದಾಜಿಸಲಾಗಿದೆ.
ಭಾರತದಾದ್ಯಂತ 240 ಹೊಸ ವೈರಸ್ಗಳು ಹರಡಿವೆ. ಕಳೆದ ವಾರದಿಂದ ರಾಜ್ಯದಲ್ಲಿ ಹೊಸದಾಗಿ ಸೋಂಕು ಉತ್ಪತ್ತಿಯಾಗುತ್ತಿದೆ.ಕೇವಲ ಮಹಾರಾಷ್ಟ್ರ ಮಾತ್ರವಲ್ಲದೆ ಕೇರಳ,ಮಧ್ಯಪ್ರದೇಶ,ಪಂಜಾಬ್, ಛತ್ತೀಸ್ಗಢದಲ್ಲೂ ಕೊರೊನಾ ಸೋಂಕು ಹೆಚ್ಚಳವಾಗುತ್ತಿದೆ.
ಕೊರೊನಾ ಲಸಿಕೆಯನ್ನು ಮೊದಲ ಹಂತದಲ್ಲಿ ಮೂರು ಕೋಟಿ ಆರೋಗ್ಯ ಕಾರ್ಯಕರ್ತರು ಸೇರಿದಂತೆ ಮುಂಚೂಣಿ ಕಾರ್ಯಕರ್ತರಿಗೆ ನೀಡಲಾಗುತ್ತಿದೆ. ಭಾರತದಲ್ಲಿ ಮತ್ತೆ ಮೊದಲಿನಂತೆ ಪರೀಕ್ಷೆಗಳು ನಡೆಯಬೇಕು, ಕಾಂಟ್ಯಾಕ್ಟ್ ಟ್ರೇಸಿಂಗ್, ಚಿಕಿತ್ಸೆಯಂತಹ ಕಾರ್ಯಗಳು ನಡೆಯಬೇಕು.
ಅಸ್ಟ್ರಾಜೆನೆಕಾ ಕೊರೊನಾ ಲಸಿಕೆಯನ್ನು ತುರ್ತು ಸಂದರ್ಭದಲ್ಲಿ ಬಳಕೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿಗೆ ಸೂಚಿಸಿದೆ.
ಖ್ಯಾತ ಅಂತಾರಾಷ್ಟ್ರೀಯ ಔಷಧ ತಯಾರಿಕ ಕಂಪನಿ ಅಸ್ಟ್ರಾಜೆನೆಕಾ ಮತ್ತು ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಜಂಟಿಯಾಗಿ ಈ ಲಸಿಕೆಯನ್ನು ತಯಾರಿಸಿದ್ದು, ಭಾರತದಲ್ಲಿ ಸೆರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆ, ಕೊರಿಯಾದಲ್ಲಿ ಎಸ್ಕೆಬಯೊ ಸಂಸ್ಥೆಗಳು ಈ ಲಸಿಕೆಯನ್ನು ಉತ್ಪಾದನೆ ಮಾಡುತ್ತಿವೆ.
ಈ ಕುರಿತು ಅಂತಾರಾಷ್ಟ್ರೀಯ ಸುದ್ದಿಸಂಸ್ಥೆ ವರದಿ ಮಾಡಿದ್ದು, ಕೋವಿಡ್-19 ನಿಯಂತ್ರಣದ ನಿಟ್ಟಿನಲ್ಲಿ ಅಸ್ಟ್ರಾಜೆನೆಕಾ-ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಅಸ್ಟ್ರಾಜೆನೆಕಾ ಲಸಿಕೆಯನ್ನು ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಿದೆ ಎನ್ನಲಾಗಿದೆ.