ನೂತನ ರಾಜ್ಯಪಾಲರನ್ನು ನೇಮಕ ಮಾಡಿದ ಕೇಂದ್ರ ಸರ್ಕಾರ
ನವದೆಹಲಿ, ಅಕ್ಟೋಬರ್ 25: ದೀಪಾವಳಿಗೂ ಮುನ್ನ ಕೇಂದ್ರ ಸರ್ಕಾರ ವಿವಿಧ ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಇತ್ತೀಚೆಗಷ್ಟೇ 370ನೇ ವಿಧಿ ತೆರವುಗೊಳಿಸಿ, ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಲಾಗಿರುವ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಕ್ಗಳಿಗೆ ಸಹ ನೂತನ ಲೆಫ್ಟನೆಂಟ್ ಗವರ್ನರ್ಗಳನ್ನು ನೇಮಿಸಲಾಗಿದೆ. ಜತೆಗೆ ಮಿಜೋರಾಂ ರಾಜ್ಯಕ್ಕೆ ಕೂಡ ನೂತನ ರಾಜ್ಯಪಾಲರನ್ನು ನೇಮಿಸಲಾಗಿದೆ.
ರಾಜಸ್ಥಾನ, ಮಹಾರಾಷ್ಟ್ರ, ಕೇರಳ, ತೆಲಂಗಾಣಕ್ಕೆ ಹೊಸ ರಾಜ್ಯಪಾಲರ ನೇಮಕ
2018ರ ಆಗಸ್ಟ್ 21ರಂದು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿ ನೇಮಕವಾಗಿದ್ದ ಸತ್ಯಪಾಲ್ ಮಲಿಕ್ ಅವರನ್ನು ಗೋವಾದ ರಾಜ್ಯಪಾಲರನ್ನಾಗಿ ವರ್ಗಾಯಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ವಿಭಜಿಸಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳೆಂದು ವಿಭಜಿಸಿರುವ ತೀರ್ಮಾನವು ಇದೇ ಅ.31ರಿಂದ ಜಾರಿಯಾಗಲಿದೆ. ಅದಕ್ಕೆ ಮುನ್ನವೇ ಈ ಎರಡೂ ಕೇಂದ್ರಾಡಳಿತ ಪ್ರದೇಶಗಳಿಗೆ ಹೊಸ ಲೆಫ್ಟಿನೆಂಟ್ ಗವರ್ನರ್ಗಳನ್ನು ನೇಮಿಸಲಾಗಿದೆ.
ಗಿರೀಶ್ ಚಂದ್ರ ಮುರ್ಮು ನೇಮಕ
ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಗಿರೀಶ್ ಚಂದ್ರ ಮುರ್ಮು ಅವರನ್ನು ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಿಸಲಾಗಿದೆ. ಒಡಿಶಾ ಮೂಲದ ಗಿರೀಶ್ ಅವರು, 1985ನೇ ಬ್ಯಾಚ್ನ ಗುಜರಾತ್ ಕೇಡರ್ ಐಎಎಸ್ ಅಧಿಕಾರಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರ ಮುಖ್ಯ ಕಾರ್ಯದರ್ಶಿಯಾಗಿದ್ದರು. ಪ್ರಸ್ತುತ ಅವರು ಭಾರತ ಸರ್ಕಾರದ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯ ಕಾರ್ಯದರ್ಶಿಯಾಗಿದ್ದಾರೆ. ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದಾರೆ. ನರೇಂದ್ರ ಮೋದಿ ಅವರ ಆಪ್ತರಾಗಿರುವ ಮುರ್ಮು ಅವರಿಗೆ ಹೊಸ ಹುದ್ದೆ ನೀಡಲಾಗಿದೆ.
ಕರ್ನಾಟಕದ ರಾಜ್ಯಪಾಲರು ಯಾರಾಗಬಹುದು? ಉಮಾ ಹೆಸರು ಮುಂಚೂಣಿಗೆ?
ಆರ್ಕೆ ಮಾಥೂರ್ ಲಡಾಖ್ ಗವರ್ನರ್
ಹೊಸ ಕೇಂದ್ರಾಡಳಿತ ಪ್ರದೇಶವಾಗಿ ಅಸ್ತಿತ್ವಕ್ಕೆ ಬರುತ್ತರುವ ಲಡಾಕ್ಗೆ ಲೆಫ್ಟಿನೆಂಟ್ ಗವರ್ನರ್ ಆಗಿ ರಾಧಾಕೃಷ್ಣ ಮಾಥೂರ್ ನೇಮಕವಾಗಿದ್ದಾರೆ. ತ್ರಿಪುರಾ ಕೇಡರ್ನ 1977ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿರುವ ಆರ್ಕೆ ಮಾಥೂರ್, 2018ರ ನವೆಂಬರ್ನಲ್ಲಿ ಮುಖ್ಯ ಮಾಹಿತಿ ಆಯುಕ್ತರಾಗಿ ನಿವೃತ್ತರಾಗಿದ್ದಾರೆ. 2013ರ ಮೇನಿಂದ ಎರಡು ವರ್ಷ ಅವರು ಭಾರತೀಯ ರಕ್ಷಣಾ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. ಹಾಗೆಯೇ ರಕ್ಷಣಾ ಉತ್ಪಾದನಾ ಕಾರ್ಯದರ್ಶಿ, ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಕಾರ್ಯದರ್ಶಿ ಹಾಗೂ ತ್ರಿಪುರಾದ ಮುಖ್ಯ ಕಾರ್ಯದರ್ಶಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ. ಐಐಟಿ ಕಾನ್ಪುರದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್,, ಐಐಟಿ ದೆಹಲಿಯಲ್ಲಿ ಇಂಡಸ್ಟ್ರಿಯಲ್ ಎಂಜಿನಿಯರಿಂಗ್ ಜತೆಗೆ ಸ್ಲೊವೇನಿಯಾದಲ್ಲಿ ಎಂಬಿಎ ಪದವಿ ಪಡೆದಿದ್ದಾರೆ.
ಶ್ರೀಧರನ್ ಪಿಳ್ಳೈ ಮಿಜೋರಾಂ ರಾಜ್ಯಪಾಲ
ಕೇರಳ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಪಿಎಸ್ ಶ್ರೀಧರನ್ ಪಿಳ್ಳೈ ಅವರನ್ನು ಮಿಜೋರಾ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. 1953ರ ಡಿ.1ರಂದು ಜನಿಸಿದ ಪಿಳ್ಳೈ ಅವರು ವೃತ್ತಿಯಿಂದ ವಕೀಲರೂ ಹೌದು. ಇಂದಿರಾ ಗಾಂಧಿ ಆಡಳಿತದಲ್ಲಿ ತುರ್ತು ಪರಿಸ್ಥಿತಿ ವಿರೋಧಿಸಿ ಕಾಲೇಜು ನಿಯತಕಾಲಿಕೆಯಲ್ಲಿ ಬರೆದ ಬರಹ ಸಾಕಷ್ಟು ಸುದ್ದಿ ಮಾಡಿತ್ತು. ಎಬಿವಿಪಿಯಿಂದ ತಮ್ಮ ರಾಜಕೀಯ ನಂಟು ಆರಂಭಿಸಿದ್ದ ಪಿಳ್ಳೈ, 1978ರಲ್ಲಿ ಎಬಿವಿಪಿ ರಾಜ್ಯ ಕಾರ್ಯದರ್ಶಿಯಾಗಿದ್ದರು. ಪಿಳ್ಳೈ ಅವರ ನಾಯಕತ್ವದಲ್ಲಿ 2004ರಲ್ಲಿ ಬಿಜೆಪಿ ಎನ್ಡಿಎ ಮೈತ್ರಿಕೂಟ ಮೊದಲ ಬಾರಿಗೆ ಕೇರಳದಲ್ಲಿ ಎರಡು ಲೋಕಸಭೆ ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.
ಗೋವಾಕ್ಕೆ ಮಲಿಕ್ ವರ್ಗಾವಣೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ಪತನಗೊಂಡ ಬಳಿಕ 2018ರ ಆಗಸ್ಟ್ನಲ್ಲಿ ರಾಜ್ಯಪಾಲರಾಗಿ ನೇಮಕರಾದ ಸತ್ಯಪಾಲ್ ಮಲಿಕ್ ಅವರ ಅಧಿಕಾರಾವಧಿಯಲ್ಲಿಯೇ 370ನೇ ವಿಧಿ ರದ್ದುಗೊಳಿಸುವ ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸುವ ನಿರ್ಧಾರವನ್ನು ಜಾರಿಗೊಳಿಸಲಾಗಿತ್ತು. ರಾಜ್ಯ ವಿಭಜನೆಯ ನಿರ್ಧಾರ ಅನುಷ್ಠಾನಗೊಳ್ಳುವ ಮೊದಲೇ ಅವರು ಗೋವಾ ರಾಜ್ಯಪಾಲರಾಗಿ ವರ್ಗಾವಣೆಯಾಗಿದ್ದಾರೆ. 2014ರಿಂದ ಮೃದುಲಾ ಸಿನ್ಹಾ ಗೋವಾ ರಾಜ್ಯಪಾಲರಾಗಿದ್ದರು. ಇದಕ್ಕೂ ಮುನ್ನ 2017ರಲ್ಲಿ ಮಲಿಕ್ ಅವರು ಬಿಹಾರ ರಾಜ್ಯಪಾಲರಾಗಿದ್ದರು. 2018ರಲ್ಲಿ ಕೆಲವು ತಿಂಗಳು ಒಡಿಶಾದ ರಾಜ್ಯಪಾಲರಾಗಿಯೂ ಹೆಚ್ಚುವರಿ ಹೊಣೆಗಾರಿಕೆ ನಿಭಾಯಿಸಿದ್ದರು.