ಭಾರತದ ಜನರನ್ನು ನಿರ್ಲಕ್ಷಿಸಿ ಲಸಿಕೆ ರಫ್ತು ಮಾಡಿಲ್ಲ; ಅದಾರ್ ಪೂನಾವಾಲಾ
ನವದೆಹಲಿ, ಮೇ 18: ಭಾರತದ ಜನರನ್ನು ನಿರ್ಲಕ್ಷಿಸಿ ತಮ್ಮ ಸಂಸ್ಥೆ ಕೊರೊನಾ ಲಸಿಕೆಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡಿಲ್ಲ. ದೇಶದಲ್ಲಿ ಕೊರೊನಾ ಲಸಿಕಾ ಅಭಿಯಾನಕ್ಕೆ ನೆರವಾಗಲು ತಮ್ಮಿಂದ ಸಾಧ್ಯವಾಗುವ ಎಲ್ಲಾ ಪ್ರಯತ್ನಗಳನ್ನು ಮಾಡುವಲ್ಲಿ ಬದ್ಧವಾಗಿರುವುದಾಗಿ ಕೋವಿಶೀಲ್ಡ್ ಕೊರೊನಾ ಲಸಿಕೆಗಳ ಉತ್ಪಾದನೆಯಲ್ಲಿ ತೊಡಗಿಕೊಂಡಿರುವ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯ ಸಿಇಒ ಅದಾರ್ ಪೂನಾವಾಲಾ ತಿಳಿಸಿದ್ದಾರೆ.
ಬೇರೆ ದೇಶಗಳಿಗೆ ಲಸಿಕೆಗಳನ್ನು ರಫ್ತು ಮಾಡುವ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಅವರು, ಈ ಜನವರಿಯಲ್ಲಿ ನಮ್ಮ ಸಂಸ್ಥೆಯಲ್ಲಿ ಹೆಚ್ಚು ಲಸಿಕೆಗಳನ್ನು ಉತ್ಪಾದಿಸಲಾಗಿತ್ತು. ಆಗ ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯೂ ಕಡಿಮೆಯಿತ್ತು. ಇದೇ ಸಮಯದಲ್ಲಿ ಬೇರೆ ದೇಶಗಳಲ್ಲಿ ಲಸಿಕೆಗಳ ಅವಶ್ಯಕತೆ ತೀವ್ರವಾಗಿತ್ತು. ಹೀಗಾಗಿ ರಫ್ತು ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತು. ದೇಶ ದೇಶಗಳ ನಡುವೆ ಸಹಕಾರ ನೀಡುವುದು ಮುಖ್ಯವಾಗಿದೆ. ಭಾರತ ಬೇರೆ ದೇಶಗಳಿಗೆ ನೆರವಾಗಿದ್ದ ಕಾರಣಕ್ಕೆ ಇಂದು ಭಾರತಕ್ಕೂ ಬೇರೆ ದೇಶಗಳು ನೆರವು ನೀಡುತ್ತಿವೆ ಎಂದು ತಿಳಿಸಿದರು.
ಅದಾರ್ ಪೂನಾವಾಲಾರಿಂದ ಬ್ರಿಟನ್ನಲ್ಲಿ 300 ಮಿಲಿಯನ್ ಡಾಲರ್ ಹೂಡಿಕೆ
ಕೊರೊನಾ ಸೋಂಕನ್ನು ಜಾಗತಿಕವಾಗಿ ಸೋಲಿಸದ ಹೊರತು ಯಾರೂ ಸುರಕ್ಷಿತವಾಗಿರಲು ಸಾಧ್ಯವಿಲ್ಲ" ಎಂದು ಹೇಳಿದರು. ಭಾರತದಲ್ಲಿನ ಇಡೀ ಜನಸಂಖ್ಯೆಗೆ ಲಸಿಕೆ ನೀಡುವಲ್ಲಿ ಹಲವು ಸವಾಲುಗಳಿವೆ ಎಂದಿರುವ ಅವರು, ಎರಡು ಮೂರು ತಿಂಗಳುಗಳಲ್ಲೇ ಲಸಿಕಾ ಕಾರ್ಯಕ್ರಮಗಳು ಮುಗಿಯುವಂಥದ್ದಲ್ಲ. ಇದು ವರ್ಷಗಟ್ಟಲೆ ಹಿಡಿಯಬಹುದು ಎಂದರು.
ಭಾರತ ಒಳಗೊಂಡಂತೆ ಜಾಗತಿಕವಾಗಿ ಹಲವು ದೇಶಗಳು ಕೊರೊನಾ ಸೋಂಕಿನಿಂತ ತತ್ತರಿಸುತ್ತಿವೆ. ಕಳೆದ ಕೆಲವು ದಿನಗಳಿಂದ ಲಸಿಕೆಗಳ ರಫ್ತಿನ ಸಂಬಂಧ ಸರ್ಕಾರ ಹಾಗೂ ಲಸಿಕಾ ಉತ್ಪಾದನಾ ಸಂಸ್ಥೆಗಳ ನಡುವೆ ಚರ್ಚೆ ನಡೆದಿದೆ ಎಂದು ತಿಳಿಸಿದರು. ಆದರೆ ಭಾರತದ ಜನರನ್ನು ಆದ್ಯತೆಯಾಗಿಟ್ಟುಕೊಂಡೇ ಲಸಿಕೆಗಳ ರಫ್ತು ನಡೆಯುತ್ತದೆ. ಕೊರೊನಾ ಸೋಂಕಿನ ವಿರುದ್ಧ ಒಗ್ಗಟ್ಟಾಗಿ ಹೋರಾಡುವುದು ಈಗ ತುರ್ತಾಗಿದೆ ಎಂದು ಹೇಳಿದರು.