ಸಿಂಗಪುರ ರೂಪಾಂತರ ಸೋಂಕಿನ ಕುರಿತು ಹೇಳಿಕೆ; ನೆಟ್ಟಿಗರ ಆಕ್ರೋಶ
ನವದೆಹಲಿ, ಮೇ 19: ಸಿಂಗಪುರದಲ್ಲಿ ಪತ್ತೆಯಾಗಿರುವ ಕೊರೊನಾ ರೂಪಾಂತರ ಸೋಂಕು ಅತ್ಯಂತ ಅಪಾಯಕಾರಿಯಾಗಿದ್ದು, ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂಬ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿಕೆಗೆ ಆಕ್ರೋಶ ವ್ಯಕ್ತಗೊಂಡಿದ್ದು, ಅರವಿಂದ್ ಕೇಜ್ರಿವಾಲ್ ತಪ್ಪು ಮಾಹಿತಿ ಹರಡುತ್ತಿದ್ದಾರೆ. ಅವರ ಹೇಳಿಕೆಗೆ ಕ್ಷಮೆ ಯಾಚಿಸಬೇಕು ಎಂದು ಸಿಂಗಪುರದ ನೆಟ್ಟಿಗರು ಆಗ್ರಹಿಸಿದ್ದಾರೆ.
"ಸಿಂಗಪುರದಲ್ಲಿ ಪತ್ತೆಯಾಗಿರುವ ಕೊರೊನಾ ರೂಪಾಂತರ ಸೋಂಕು ಭಾರತದಲ್ಲಿ ಮೂರನೇ ಅಲೆಗೆ ಕಾರಣವಾಗಬಹುದು. ಮಕ್ಕಳ ಮೇಲೆ ಇದು ಹೆಚ್ಚಿನ ಪರಿಣಾಮ ಬೀರುತ್ತದೆ. ಹೀಗಾಗಿ ಕೂಡಲೇ ಸಿಂಗಪುರ-ಭಾರತದ ನಡುವಿನ ವಿಮಾನ ಯಾನವನ್ನು ರದ್ದುಪಡಿಸಬೇಕು. ಮಕ್ಕಳಿಗೆ ಶೀಘ್ರವೇ ಲಸಿಕೆ ಅಭಿವೃದ್ಧಿ ಪಡಿಸುವತ್ತ ಚಿಂತನೆ ನಡೆಸಬೇಕು" ಎಂದು ಕೇಂದ್ರಕ್ಕೆ ಆಗ್ರಹಿಸಿ ಟ್ವೀಟ್ ಮಾಡಿದ್ದರು.
"ಸಿಂಗಪುರ ರೂಪಾಂತರ ಸೋಂಕು ಭಾರತದಲ್ಲಿ ಮೂರನೇ ಅಲೆಗೆ ಕಾರಣವಾಗಬಹುದು ಹುಷಾರ್"
ಈ ಹೇಳಿಕೆಗೆ ಸಿಂಗಪುರದ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. B.1.617 ಕೊರೊನಾ ರೂಪಾಂತರ ನಿಮ್ಮ ದೇಶದಿಂದಲೇ ಬಂದಿರುವುದು ಎಂದು ಪ್ರತಿಕ್ರಿಯಿಸಿದ್ದಾರೆ.
ಸಿಂಗಪುರ ವಿದೇಶಾಂಗ ಸಚಿವ ವಿವಿಯನ್ ಬಾಲಕೃಷ್ಣನ್ ಅವರು ಕೂಡ ಟ್ವೀಟ್ ಮಾಡಿದ್ದು, "ಸಿಂಗಪುರ ಕೊರೊನಾ ರೂಪಾಂತರ ಸೋಂಕು ಎಂಬುದೇ ಇಲ್ಲ. ರಾಜಕಾರಣಿಗಳು ಸತ್ಯ ಅರಿತು ಮಾತನಾಡಬೇಕು. ಕೇಜ್ರಿವಾಲ್ ಹೇಳಿಕೆಯಿಂದ ಉಂಟಾದ ಗೊಂದಲ ನಿವಾರಿಸಿದ್ದಕ್ಕೆ ಭಾರತೀಯ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಧನ್ಯವಾದ" ಎಂದು ಟ್ವೀಟ್ ಮಾಡಿದ್ದಾರೆ.
ಸಿಂಗಪುರದ ಭಾರತೀಯ ರಾಯಭಾರಿ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ್ದ ವಿದೇಶಾಂಗ ಸಚಿವ ಎಸ್ ಜೈಶಂಕರ್, ಕೊರೊನಾ ವಿರುದ್ಧದ ಹೋರಾಟದಲ್ಲಿ ಸಿಂಗಪುರ ಮತ್ತು ಭಾರತ ಜೊತೆಯಾಗಿದೆ. ಆಮ್ಲಜನಕ ಸರಬರಾಜು ಮೊದಲಾದ ವಿಚಾರದಲ್ಲಿ ಸಿಂಗಪುರದ ಸಹಾಯ ಶ್ಲಾಘನಾರ್ಹ. ಕೆಲವರ ಬೇಜವಾಬ್ದಾರಿ ಹೇಳಿಕೆಗಳು ಉಭಯ ದೇಶಗಳ ಸಂಬಂಧಕ್ಕೆ ಹಾನಿ ಉಂಟು ಮಾಡುತ್ತದೆ. ಆದ್ದರಿಂದ ದೆಹಲಿ ಸಿಎಂ ಭಾರತದ ಪರವಾಗಿ ಮಾತನಾಡುತ್ತಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ ಎಂದು ಹೇಳಿದ್ದರು.