ದೇಶದಲ್ಲಿ ಬಿಜೆಪಿ ಸರ್ಕಾರ: ಆಕ್ಷೇಪ ವ್ಯಕ್ತಪಡಿಸಿದ ನೇಪಾಳ
ನವದೆಹಲಿ, ಫೆಬ್ರವರಿ 17: ಬಿಜೆಪಿಯು ನೇಪಾಳದಲ್ಲಿ ಕೂಡ ಮುಂದೆ ತನ್ನ ಸರ್ಕಾರ ರಚಿಸಲು ಯೋಚಿಸಲಿದೆ ಎಂದು ಅಮಿತ್ ಶಾ ಹೇಳಿದ್ದರು ಎಂದು ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ನೀಡಿದ ಹೇಳಿಕೆಗೆ ನೇಪಾಳ ಆಕ್ಷೇಪ ವ್ಯಕ್ತಪಡಿಸಿದೆ.
ಭಾರತದ ಆಡಳಿತ ಪಕ್ಷದ ನಾಯಕರ ಈ ಹೇಳಿಕೆಗೆ ನೇಪಾಳ ಸರ್ಕಾರವು ಔಪಚಾರಿಕವಾಗಿ ಆಕ್ಷೇಪಣೆಯನ್ನು ಸಲ್ಲಿಸಿದೆ ಎಂದು ನೇಪಾಳ ವಿದೇಶಾಂಗ ಸಚಿವ ಪ್ರದೀಪ್ ಕುಮಾರ್ ಗ್ಯಾವಾಲಿ ಮಂಗಳವಾರ ಟ್ವಿಟ್ಟರ್ನಲ್ಲಿ ಖಚಿತಪಡಿಸಿದ್ದಾರೆ.
ಬಿಪ್ಲಬ್ ದೇಬ್ ಅವರ ಹೇಳಿಕೆಯನ್ನು ಒಳಗೊಂಡ ಮಾಧ್ಯಮ ವರದಿಯೊಂದನ್ನು ಹಂಚಿಕೊಂಡ ನೇಪಾಳಿ ವ್ಯಕ್ತಿಯೊಬ್ಬರಿಗೆ ಪ್ರತಿಕ್ರಿಯೆ ನೀಡಿರುವ ಗ್ಯಾವಾಲಿ, 'ಗಮನಿಸಿದ್ದೇವೆ. ಈಗಾಗಲೇ ಔಪಚಾರಿಕ ಆಕ್ಷೇಪಣೆಯನ್ನು ಸಲ್ಲಿಸಲಾಗಿದೆ' ಎಂದು ಟ್ವೀಟ್ ಮಾಡಿದ್ದಾರೆ.
ಇದೇ ರೀತಿ ಶ್ರೀಲಂಕಾದ ಚುನಾವಣಾ ಆಯೋಗದ ಅಧ್ಯಕ್ಷ ನಿಮಲ್ ಪುಂಚಿಹೆವಾ ಕೂಡ ಬಿಪ್ಲಬ್ ಹೇಳಿಕೆಯನ್ನು ನಿರಾಕರಿಸಿದ್ದಾರೆ. ದೇಶದ ಚುನಾವಣಾ ಕಾನೂನಿನ ಅಡಿಯಲ್ಲಿ ಅಂತಹ ವ್ಯವಸ್ಥೆಗೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.
ನೇಪಾಳ ರಾಯಭಾರಿ ಆಕ್ಷೇಪ
ಭಾರತದಲ್ಲಿನ ನೇಪಾಳದ ರಾಯಭಾರಿ ನೀಲಾಂಬರ್ ಆಚಾರ್ಯ ಅವರು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನೇಪಾಳ ಮತ್ತು ಭೂತಾನ್ ವ್ಯವಹಾರಗಳ ಉಸ್ತುವಾರಿಯಾಗಿರುವ ಜಂಟಿ ಕಾರ್ಯದರ್ಶಿ ಅರಿಂದಮ್ ಬಗ್ಚಿ ಅವರಿಗೆ ತಮ್ಮ ಆಕ್ಷೇಪಣೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಶ್ರೀಲಂಕಾದಲ್ಲಿ ಅನುಮತಿ ಇಲ್ಲ
'ಶ್ರೀಲಂಕಾದ ಯಾವುದೇ ರಾಜಕೀಯ ಪಕ್ಷ ಅಥವಾ ಗುಂಪುಗಳು ವಿದೇಶದಲ್ಲಿನ ಯಾವುದೇ ಪಕ್ಷ ಅಥವಾ ಗುಂಪುಗಳ ಜತೆಗೆ ಬಾಹ್ಯ ಸಂಬಂಧ ಇರಿಸಿಕೊಳ್ಳಲು ಅನುಮತಿ ಇದೆ. ಆದರೆ ನಮ್ಮ ಚುನಾವಣಾ ಕಾನೂನಿನ ಪ್ರಕಾರ ಯಾವುದೇ ವಿದೇಶಿ ರಾಜಕೀಯ ಪಕ್ಷವು ಇಲ್ಲಿ ಕೆಲಸ ಮಾಡಲು ಅವಕಾಶವಿಲ್ಲ' ಎಂದು ಶ್ರೀಲಂಕಾದ ಚುನಾವಣಾ ಆಯೋಗದ ಅಧ್ಯಕ್ಷ ನಿಮಲ್ ಪುಂಚಿಹೆವಾ ಹೇಳಿದ್ದಾರೆ.
ಬಿಪ್ಲಬ್ ದೇಬ್ ಹೇಳಿಕೆ
2018ರಲ್ಲಿ ಸಭೆಯೊಂದರ ವೇಳೆ ಮಾತನಾಡಿದ್ದ ಅಮಿತ್ ಶಾ ಅವರು ಭಾರತದ ಪ್ರತಿ ರಾಜ್ಯದಲ್ಲಿಯೂ ಸರ್ಕಾರ ರಚಿಸಿದ ಬಳಿಕ ನೆರೆಯ ನೇಪಾಳ ಮತ್ತು ಶ್ರೀಲಂಕಾಗಳಲ್ಲಿ ಸಹ ರಾಜಕೀಯ ಪಕ್ಷ ಸ್ಥಾಪಿಸಿ ಸರ್ಕಾರ ರಚಿಸಲು ಯೋಚಿಸಲಾಗುವುದು ಎಂದು ಹೇಳಿದ್ದರು ಎಂಬುದಾಗಿ ಶನಿವಾರ ಬಿಪ್ಲಬ್ ದೇಬ್ ಹೇಳಿದ್ದರು.
ಲಂಕಾ, ನೇಪಾಳ ಉಳಿದಿವೆ
'ನಾವು ರಾಜ್ಯ ಅತಿಥಿ ಗೃಹದಲ್ಲಿ ಚರ್ಚಿಸುತ್ತಿದ್ದೆವು. ಆಗ ಅಜಯ್ ಜಾಮ್ವಾಲ್ (ಬಿಜೆಪಿಯ ಈಶಾನ್ಯ ವಲಯದ ಕಾರ್ಯದರ್ಶಿ) ಅವರು ಬಿಜೆಪಿ ಅನೇಕ ರಾಜ್ಯಗಳಲ್ಲಿ ಸರ್ಕಾರ ರಚಿಸಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಮಿತ್ ಶಾ, ಇನ್ನು ಶ್ರೀಲಂಕಾ ಮತ್ತು ನೇಪಾಳಗಳು ಉಳಿದಿವೆ ಎಂದು ಹೇಳಿದರು. ನಾವು ನೇಪಾಳ ಮತ್ತು ಶ್ರೀಲಂಕಾಕ್ಕೆ ಪಕ್ಷವನ್ನು ವಿಸ್ತರಿಸಬೇಕು ಹಾಗೂ ಅಲ್ಲಿ ಸರ್ಕಾರ ರಚಿಸಲು ಜಯಗಳಿಸಬೇಕು' ಎಂದು ಅಮಿತ್ ಶಾ ಹೇಳಿದ್ದಾಗಿ ಬಿಪ್ಲಬ್ ಸ್ಮರಿಸಿದ್ದರು.