ನೇಪಾಳ ಭೂಕಂಪಕ್ಕೆ ರಾಹುಲ್ ಕೇದಾರ್ ಪ್ರವಾಸ ಕಾರಣ!
ರೈತನ ಸಾವೇ ಇರಲಿ, ಅತಿವೃಷ್ಟಿ, ಅನಾವೃಷ್ಟಿಯಿರಲಿ, ಭೂಕಂಪವೇ ಇರಲಿ ಎಲ್ಲದರಲ್ಲೂ ರಾಜಕೀಯ ಬೆರೆಸಿ ಬೇಕಾಬಿಟ್ಟಿ ಹೇಳಿಕೆ ನೀಡುವ ನಮ್ಮ ದೇಶದ ರಾಜಕಾರಣಿಗಳಿಗೆ ಕೇದಾರನಾಥನೇ ಬುದ್ದಿ ನೀಡಲಿ.
ನಾಲ್ಕು ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ನೇಪಾಳದ ಭೂಕಂಪಕ್ಕೆ ವಿಶ್ವವೇ ಮರುಗುತ್ತಿದ್ದರೆ, ಬಿಜೆಪಿಯ ಸಂಸದರೊಬ್ಬರು ಬಾಯಿಗೆ ಬಂದಂತೆ ಹೇಳಿಕೆ ನೀಡಿ ತನ್ನ ಬಾಯಿ ಚಪಲ ತೀರಿಸಿಕೊಂಡಿದ್ದಾರೆ. (ನೇಪಾಳದಲ್ಲಿ ಆಪರೇಶನ್ ಮೈತ್ರಿ)
ವಿವಾದವನ್ನೇ ತನ್ನ ರಾಜಕೀಯ ಜೀವನದ ಅವಿಭಾಜ್ಯ ಅಂಗದಂತೆ ಅಳವಡಿಸಿಕೊಂಡಿರುವ ಉತ್ತರಪ್ರದೇಶದ ಉನ್ನಾವ್ ಕ್ಷೇತ್ರದ ಸಂಸದ ಸಾಕ್ಷಿ ಮಹಾರಾಜ್ ಪ್ರಕಾರ, ನೇಪಾಳದ ಭೂತಾಯಿಯ ರುದ್ರ ನರ್ತನಕ್ಕೆ ಎಐಸಿಸಿ ಉಪಾಧ್ಯಕ್ಷರೇ ಕಾರಣವಂತೆ.
ಇತ್ತೀಚೆಗೆ ಪಾದಯಾತ್ರೆಯ ಮೂಲಕ ಕೇದಾರನಾಥನ ದರುಶನ ಪಡೆದ ರಾಹುಲ್ ಗಾಂಧಿ, ಆ ಪವಿತ್ರ ದೇವಾಲಯಕ್ಕೆ ಹೋಗಿದ್ದೇ ಭೂಕಂಪಕ್ಕೆ ಕಾರಣ ಎಂದು ಹೇಳುವ ಮೂಲಕ ಬಿಜೆಪಿ ಸಂಸದ ಮಗುದೊಮ್ಮೆ ತನ್ನ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಿದ್ದಾರೆ.
ರಾಹುಲ್ ದನದ ಮಾಂಸ ತಿಂದಿದ್ದೇ ನೇಪಾಳದ ಭೂಕಂಪಕ್ಕೆ ಕಾರಣ..
ವೈಜ್ಞಾನಿಕ ಕಾರಣವೇನೂ ಇಲ್ಲ
ಭೂಗರ್ಭದ ತಿಕ್ಕಾಟವೇ ಭೂಕಂಪಕ್ಕೆ ಕಾರಣ ಎನ್ನುವ ವೈಜ್ಞಾನಿಕ ಕಾರಣ ನೀಡಬೇಡಿ ಎಂದು ಮಾಧ್ಯಮದವರ ಬಾಯಿ ಮುಚ್ಚಿಸಿದ ಸಾಕ್ಷಿ ಮಹಾರಾಜ್, ನೇಪಾಳದ ಭೂಕಂಪಕ್ಕೆ ರಾಹುಲ್ ಗಾಂಧಿ ಪವಿತ್ರ ಕೇದಾರನಾಥಕ್ಕೆ ಭೇಟಿ ನೀಡಿದ್ದೇ ಕಾರಣ ಎಂದಿದ್ದಾರೆ.
ದನದ ಮಾಂಸ ತಿಂದಿದ್ದು ಕಾರಣ
ರಾಹುಲ್ ಗಾಂಧಿಗೆ ದನದ ಮಾಂಸ ತಿನ್ನುವ ಅಭ್ಯಾಸವಿದೆ. ದನದ ಮಾಂಸ ತಿಂದು ಶುದ್ದೀಕರಣಗೊಳ್ಳದೇ ಕೇದಾರನಾಥಕ್ಕೆ ಭೇಟಿ ನೀಡಿದರೆ ಭೂಕಂಪವಾಗದೇ ಇನ್ನೇನು ಆಗುತ್ತೆ. ನೇಪಾಳದ ಭೂಕಂಪಕ್ಕೆ ವೈಜ್ಞಾನಿಕ ಕಾರಣ ನೀಡುವ ಅವಶ್ಯಕತೆಯಿಲ್ಲ, ಇದಕ್ಕೆ ರಾಹುಲ್ ಗಾಂಧಿಯ ಕೇದಾರ ಪ್ರವಾಸವೇ ಕಾರಣ - ಸಾಕ್ಷಿ ಮಹಾರಾಜ್.
ತಿರುಗಿಬಿದ್ದ ಕಾಂಗ್ರೆಸ್
ಸಾಕ್ಷಿ ಮಹಾರಾಜ್ ಹೇಳಿಕೆಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತ ಪಡಿಸಿದೆ. ಸಾಕ್ಷಿ ಮಹಾರಾಜ್ ಕ್ಷಮೆಯಾಚಿಸ ಬೇಕು ಮತ್ತು ಬಿಜೆಪಿ ಈ ಸಂಬಂಧ ಅಧಿಕೃತ ಹೇಳಿಕೆ ನೀಡಬೇಕೆಂದು ಕಾಂಗ್ರೆಸ್ ವಕ್ತಾರರು ಆಗ್ರಹಿಸಿದ್ದಾರೆ.
ನಾಲ್ಕು ಮಕ್ಕಳು
ದೇಶದಲ್ಲಿ ಹಿಂದೂಗಳ ಪ್ರಾಭಲ್ಯ ಹೆಚ್ಚಾಗ ಬೇಕಾದರೆ ಹಿಂದೂಗಳು ಕನಿಷ್ಟ ನಾಲ್ಕು ಮಕ್ಕಳನ್ನು ಹೆರಬೇಕೆಂದು ವಿವಾದಕಾರಿ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ತಂದಿದ್ದ ಸಾಕ್ಷಿ ಮಹಾರಾಜ್ ಗೆ ಬಿಜೆಪಿ ಶೋಕಾಸ್ ನೋಟೀಸ್ ನೀಡಿತ್ತು.
ಸರಕಾರವನ್ನೇ ಬೀಳಿಸುತ್ತೇನೆ
ನಾನು ಮನಸ್ಸು ಮಾಡಿದರೆ ಸರಕಾರವನ್ನೇ ಬೀಳಿಸಬಲ್ಲೆ ಎಂದು ತನ್ನದೇ ಪಕ್ಷದ ಸರಕಾರದ ವಿರುದ್ದ ಹರಿಹಾಯ್ದಿದ್ದ ಮಹಾರಾಜ್, ಒಂದೇ ದಿನದಲ್ಲಿ ಯೂಟರ್ನ್ ಆಗಿ ನಾನು ಪ್ರಧಾನಿ ಮೋದಿಯ ಶಿಸ್ತಿನ ಸಿಪಾಯಿ ಎಂದು ವಿವಾದಕ್ಕೆ ತೆರೆಯೆಳೆದಿದ್ದರು.