ನೆಹರೂ ಕಾಲದಲ್ಲಿ ಸಾಮಾಜಿಕ ತಾಣ ಇತ್ತಾ? ಮೋದಿಗೆ ಶಿವಸೇನೆ ಟಾಂಗ್
ಮುಂಬೈ, ಸೆ 29: ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರೂ ಮತ್ತು ಇಂದಿರಾ ಗಾಂಧಿ ಕೂಡಾ ಈ ದೇಶದ ಜನಪ್ರಿಯ ನಾಯಕರು. ಆದರೆ ಅವರ ಕಾಲದಲ್ಲಿ ಸಾಮಾಜಿಕ ತಾಣ ಎನ್ನುವುದು ಇರಲಿಲ್ಲ ಎಂದು ಶಿವಸೇನೆ, ಬಿಜೆಪಿಗೆ ಟಾಂಗ್ ನೀಡಿದೆ.
ಇದು, ಪ್ರಧಾನಿಯಾದ ನಂತರ ಎರಡನೇ ಬಾರಿ ಅಮೆರಿಕಾಕ್ಕೆ ಭೇಟಿ ನೀಡಿ, ಇನ್ನಷ್ಟು ಜನಪ್ರಿಯತೆಯಿಂದ ಸ್ವದೇಶಕ್ಕೆ ಮರಳುತ್ತಿರುವ ನರೇಂದ್ರ ಮೋದಿ ಬಗ್ಗೆ ಶಿವಸೇನೆ ಪರೋಕ್ಷವಾಗಿ ಆಡಿದ ಕೊಂಕು ಮಾತು.
ಮಿತ್ರ ಪಕ್ಷವನ್ನು ವ್ಯಂಗ್ಯವಾಗಿ ಅಣಕವಾಡಿರುವ ಶಿವಸೇನೆ ಪ್ರಮುಖ ಉದ್ಭವ್ ಠಾಕ್ರೆ, ನೆಹರೂ ಮತ್ತು ಇಂದಿರಾ ಗಾಂಧಿಯ ಕಾಲದಲ್ಲಿ ಸಾಮಾಜಿಕ ತಾಣ ಎಲ್ಲಿದ್ದವು. ಆದರೂ ಅವರಿಬ್ಬರೂ ದೇಶದ ಜನಪ್ರಿಯ ನಾಯಕರಾಗಲಿಲ್ಲವೇ ಎಂದು ಹೇಳಿದ್ದಾರೆ. (ಫೇಸ್ ಬುಕ್ ಫ್ರೊಫೈಲ್ ಬದಲಿಸಿ, ಮೋದಿ)
ಮೋದಿ ಹೋದಲೆಲ್ಲಾ ಜನ ಸೇರುತ್ತಾರೆ, ಮೋದಿ..ಮೋದಿ.. ಜೈಕಾರ ಮೊಳಗುತ್ತದೆ. ಅವರೊಬ್ಬ ಜನಪ್ರಿಯ ನಾಯಕ ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ ಎಂದೂ ಠಾಕ್ರೆ ಮಂಗಳವಾರ (ಸೆ 29) ಹೇಳಿದ್ದಾರೆ.
ದೇಶ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದ ಸಂದರ್ಭದಲ್ಲಿ ನಮ್ಮ ವಿರೋಧ ಪಕ್ಷದ ನಾಯಕರ ಕೊಡುಗೆಯನ್ನು ಮರೆಯುವಂತಿಲ್ಲ ಎಂದು ಶಿವಸೇನೆಯ ಮುಖವಾಣಿ 'ಸಾಮ್ನಾ'ದ ಸಂಪಾದಕೀಯ ಲೇಖನದಲ್ಲೂ ಠಾಕ್ರೆ ಅಭಿಪ್ರಾಯ ಪಟ್ಟಿದ್ದಾರೆ.
ಮನಮೋಹನ್ ಸಿಂಗ್ ಅವರನ್ನು ಹಾಡಿ ಹೊಗಳಿದ ಸೇನೆ, ಮುಂದೆ ಓದಿ..
ಸಾಮಾಜಿಕ ತಾಣ
ಪ್ರಸ್ತುತ ಸಾಮಾಜಿಕ ತಾಣದ ಅತಿಯಾದ ಆಕರ್ಷಣೆಯ ಬಗ್ಗೆ ಪರೋಕ್ಷವಾಗಿ ಉಲ್ಲೇಖಿಸುತ್ತಾ ಠಾಕ್ರೆ, ಸಾಮಾಜಿಕ ಜಾಲ ತಾಣಗಳು ಇಲ್ಲದ ಕಾಲದಲ್ಲೂ ನೆಹರೂ ಮತ್ತು ಇಂದಿರಾ ಗಾಂಧಿ ಜನಪ್ರಿಯ ಮುಖಂಡರಾಗಿದ್ದರು.
ಕಾಂಗ್ರೆಸ್ ಪ್ರಧಾನಿಗಳ ಬಗ್ಗೆ ಠಾಕ್ರೆ
ಹಿಂದಿನ ಕಾಂಗ್ರೆಸ್ ಸರಕಾರವನ್ನು ಮುನ್ನಡೆಸುತ್ತಿದ್ದ ರಾಜೀವ್ ಗಾಂಧಿ, ಪಿ ವಿ ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ಅವರ ಕೊಡುಗೆಯನ್ನು ನಾವು ಮರೆಯುವಂತಿಲ್ಲ. ದೇಶ ಎದುರಿಸುತ್ತಿದ್ದ ಸಮಸ್ಯೆಯ ಸಮಯದಲ್ಲಿ ನಮ್ಮ ವಿರೋಧ ಪಕ್ಷದ ಸರಕಾರದ ಆಡಳಿತವನ್ನು ನಾವು ಕಡೆಗಣಿಸಬಾರದು - ಉದ್ಭವ್ ಠಾಕ್ರೆ.
ವಿದೇಶಿ ಬಂಡವಾಳ
ಮೋದಿ ವಿದೇಶದಲ್ಲಿ ಅತ್ಯಂತ ಜನಪ್ರಿಯ ನಾಯಕ. ಅವರಿಂದಾಗಿ ದೇಶಕ್ಕೆ ವಿದೇಶದಿಂದ ಅಪಾರ ಪ್ರಮಾಣದಲ್ಲಿ ಬಂಡವಾಳ ಹರಿದು ಬರುತ್ತಿದೆ. ನಮ್ಮ ದೇಶದ ಆರ್ಥಿಕತೆಗೆ ಭದ್ರ ಬುನಾದಿ ಹಾಕಿದವರು ಮನಮೋಹನ್ ಸಿಂಗ್ ಮತ್ತು ಪಿವಿಎನ್ - ಠಾಕ್ರೆ.
ಇಂದಿರಾ ಗಾಂಧಿ
ದೂರ ಸಂಪರ್ಕ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರ. ಇಂದಿರಾ ಗಾಂಧಿ ಕಾಲದಲ್ಲಿ ಹತ್ತು ಹಲವು ಕ್ರಾಂತಿಕಾರಿ ಬದಲಾವಣೆ ದೇಶದಲ್ಲಾಗಿದೆ. ಅದಾದ ನಂತರ ರಾಜೀವ್ ಗಾಂಧಿ ಅದನ್ನು ಮುಂದುವರಿಸಿಕೊಂಡು ಹೋದರು. ಈಗ ದೇಶದ ಪ್ರತಿ ಹಳ್ಳಿಹಳ್ಳಿಯಲ್ಲೂ ದೂರವಾಣಿ ಸಂಪರ್ಕದ ವ್ಯವಸ್ಥೆಯಿದೆ ಎಂದರೆ ಅದು ಇಂದಿರಾ - ರಾಜೀವ್ ಕೊಡುಗೆ - ಉದ್ಭವ್ ಠಾಕ್ರೆ.
ಮೋದಿಗೆ ಪರೋಕ್ಷವಾಗಿ ತಿರುಗೇಟು
ದಶಕಗಳಿಂದ ಅಧಿಕಾರದಲ್ಲಿದ್ದ ಕಾಂಗ್ರೆಸ್ ಬರೀ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ದೇಶದಲ್ಲಿ ಅಭಿವೃದ್ದಿ ಆಗಲೇ ಇಲ್ಲ ಎಂದು ಮೋದಿ ನೀಡುತ್ತಿದ್ದ ಹೇಳಿಕೆಗೆ ಮಿತ್ರ ಪಕ್ಷ ಶಿವಸೇನೆ ಅಧ್ಯಕ್ಷರ ಈ ಹೇಳಿಕೆ ವಿಶೇಷ ಅರ್ಥ ಪಡೆದುಕೊಂಡಿದೆ.