ಅಭ್ಯರ್ಥಿಗಳು ಮತ ಎಣಿಕೆ ಕೇಂದ್ರಕ್ಕೆ ಬರಲು ಕೊರೊನಾ ನೆಗೆಟಿವ್ ವರದಿ ಅಥವಾ ಪೂರ್ಣ ಲಸಿಕೆ ವರದಿ ಕಡ್ಡಾಯ
ನವದೆಹಲಿ, ಏಪ್ರಿಲ್ 29: ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಪುದುಚೇರಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಮೇ 2 ರಂದು ನಡೆಯಲಿದೆ.
ಅಭ್ಯರ್ಥಿಗಳು ಅಥವಾ ಅವರ ಏಜೆಂಟರು ಮತ ಎಣಿಕೆ ಕೇಂದ್ರ ಪ್ರವೇಶಿಸಲು ಕೊರೊನಾ ವೈರಸ್ ನೆಗಟಿವ್ ವರದಿ ಅಥವಾ ಎರಡು ಡೋಸ್ ಕೋವಿಡ್ -19 ಲಸಿಕೆ ಪಡೆದಿರುವುದು ಕಡ್ಡಾಯ ಎಂದು ಚುನಾವಣಾ ಆಯೋಗ ಹೇಳಿದೆ.
ಕೊರೊನಾ ನಿಯಮ ಪಾಲನೆ ರಾಜ್ಯಗಳ ಹೊಣೆ; ಚುನಾವಣಾ ಆಯೋಗ
ಈ ಮಧ್ಯ ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಮತ ಎಣಿಕೆ ಕೇಂದ್ರದ ಹೊರಗೆ ಸಾರ್ವಜನಿಕ ಸಭೆಗಳನ್ನು ನಿಷೇಧಿಸಲಾಗಿದೆ. ಆದರೆ ಅಭ್ಯರ್ಥಿಗಳಿಗೆ ಮೊದಲನೆ ಏಜೆಂಟ್ಗೆ ಕೋವಿಡ್ ಪಾಸಿಟಿವ್ ಬಂದಿದ್ದರೆ ಹೊಸ ಏಜೆಂಟ್ ಹೆಸರಿಸಲು ಅವಕಾಶ ನೀಡಲಾಗಿದೆ.
ಕೊರೊನಾ ನಿಯಮ ಪಾಲನೆ ಕ್ರಮಗಳನ್ನು ಜಾರಿಗೊಳಿಸುವುದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಹೊಣೆ ಎಂದು ಪುನರುಚ್ಚರಿಸಿರುವ ಆಯೋಗ, ಈ ಕ್ರಮಗಳು ಲಾಕ್ಡೌನ್, ಸಾರ್ವಜನಿಕ ಕೂಟಗಳ ಮೇಲಿನ ನಿರ್ಬಂಧವನ್ನು ಒಳಗೊಂಡಿದೆ ಎಂದು ತಿಳಿಸಿದೆ. ಚುನಾವಣಾ ಸಮಯದಲ್ಲಿ ಸಾರ್ವಜನಿಕರು ಸೇರುವುದರ ಮೇಲೆ ರಾಜ್ಯಗಳು ಯಾವುದೇ ನಿರ್ಬಂಧ ಹೇರಿಲ್ಲ ಎಂದಿದೆ.
ಜಿಲ್ಲಾ ಚುನಾವಣಾ ಅಧಿಕಾರಿಗಳು ಅಭ್ಯರ್ಥಿಗಳು ಮತ್ತು ಅವರ ಏಜೆಂಟ್ಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಆರ್ಟಿ-ಪಿಸಿಆರ್ / ಆರ್ಎಟಿ ಪರೀಕ್ಷೆ ಇಲ್ಲದೆ ಅಥವಾ ಎರಡು ಡೋಸ್ ಕೋವಿಡ್ ಲಸಿಕೆ ಹಾಕಿಸಿಕೊಳ್ಳದ ಯಾವುದೇ ಅಭ್ಯರ್ಥಿಗಳು ಅಥವಾ ಏಜೆಂಟರನ್ನು ಮತ ಎಣಿಕೆ ಕೇಂದ್ರ ಪ್ರವೇಶಿಸಲು ಅನುಮತಿ ಇಲ್ಲ. ಒಂದು ವೇಳೆ 48 ಗಂಟೆಗಳ ಒಳಗೆ ಪಡೆದ ಕೋವಿಡ್ ನೆಗಟಿವ್ ವರದಿ ಇದ್ದರೆ ಮತ ಎಣಿಕೆ ಕೇಂದ್ರ ಪ್ರವೇಶಿಸಲು ಅನುಮತಿಸಲಾಗುವುದು ಎಂದು ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ.