ನೀಟ್ ಭಾರತ ಕೋಟಾದ ಸೀಟುಗಳ Mop-Up ಕೌನ್ಸೆಲಿಂಗ್ ರದ್ದುಗೊಳಿಸಿದ SC
ನವದೆಹಲಿ, ಮಾರ್ಚ್ 31: ನೀಟ್ ಸ್ನಾತಕೋತ್ತರ ಸ್ನಾತಕೋತ್ತರ ವೈದ್ಯಕೀಯ ಪದವಿ ಕೋರ್ಸ್ ಪ್ರವೇಶಾತಿ ಭಾರತ ಕೋಟಾದ ಸೀಟುಗಳ ಮಾಪ್ ಅಪ್ ಕೌನ್ಸಲಿಂಗ್ ಗೆ ಸಂಬಂಧಿಸಿಂದಂತೆ ಸುಪ್ರೀಂಕೋರ್ಟ್ ಇಂದು ಮಹತ್ವದ ತೀರ್ಪು ಪ್ರಕಟಿಸಿದೆ.
ನೀಟ್ ಸ್ನಾತಕೋತ್ತರ ಪ್ರವೇಶಾತಿ ಸಂದರ್ಭದಲ್ಲಿ ಮೀಸಲಾತಿ ಒದಗಿಸುವ ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿದಂತೆ ಜನವರಿ ತಿಂಗಳಲ್ಲಿ ಸುಪ್ರೀಂಕೋರ್ಟ್ ಪ್ರಮಖ ತೀರ್ಪು ಪ್ರಕಟಿಸಿತ್ತು. ಇಂದು ನೀಟ್) ಅಖಿಲ ಭಾರತ ಕೋಟಾದ ಸೀಟುಗಳಿಗೆ (AIQ) ನಡೆಸಲಾಗಿದ್ದ ಮಾಪ್ ಅಪ್ ಸುತ್ತಿನ ಕೌನ್ಸೆಲಿಂಗ್ಅನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದುಪಡಿಸಿ,ಹೊಸದಾಗಿ ಮಾಪ್ ಅಪ್ ಸುತ್ತಿನ ಕೌನ್ಸೆಲಿಂಗ್ ನಡೆಸಲು ಸೂಚಿಸಿದೆ.
Breaking news: NEET-PG: ಮೀಸಲಾತಿ ಕುರಿತಂತೆ ಸುಪ್ರೀಂನಿಂದ ಮಹತ್ವದ ತೀರ್ಪು
ಈಗಾಗಲೇ ಎರಡನೇ ಸುತ್ತಿನಲ್ಲಿ ರಾಜ್ಯ ಕೋಟಾದಡಿ ಅಥವಾ ಅಖಿಲ ಭಾರತ ಕೋಟಾದಡಿ ಸೇರ್ಪಡೆಯಾಗಿರುವ ಅಭ್ಯರ್ಥಿಗಳು ಸಹ ವಿಶೇಷ ಕೌನ್ಸೆಲಿಂಗ್ ಸುತ್ತಿನಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ. ಈ ಅಭ್ಯರ್ಥಿಗಳ ಭದ್ರತಾ ಠೇವಣಿಯನ್ನು ಮುಟ್ಟುಗೋಲು ಮಾಡಿಕೊಳ್ಳಬೇಕಾಗಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಸೂರ್ಯಕಾಂತ್ ಹಾಗೂ ಬೇಲಾ ಎಂ ತ್ರಿವೇದಿ ಅವರಿದ್ದ ತ್ರಿಸದಸ್ಯ ಪೀಠವು, ಕೌನ್ಸೆಲಿಂಗ್ಗೆ ಹೆಚ್ಚುವರಿಯಾಗಿ ಸೇರ್ಪಡೆಯಾಗಿರುವ 146 ಸೀಟುಗಳ ಲಾಭವನ್ನು ಪಡೆಯುವಂತೆ ಅಭ್ಯರ್ಥಿಗಳಿಗೆ ತಿಳಿಸಿದೆ.
ಎರಡನೇ ಸುತ್ತಿನ ನಂತರ ಲಭ್ಯವಾದ 146 ಸೀಟುಗಳನ್ನು ಪಡೆಯಲು ವಿಶೇಷ ಕೌನ್ಸೆಲಿಂಗ್ ಸುತ್ತನ್ನು ಆಯೋಜಿಸಬೇಕು ಎಂದು ತಿಳಿಸಿದೆ. ಈ ವಿಶೇಷ ಸುತ್ತಿನ ಕೌನ್ಸೆಲಿಂಗ್ ರಾಜ್ಯ ಕೋಟಾದಡಿ ಸೇರ್ಪಡೆಯಾಗಿರುವ ವಿದ್ಯಾರ್ಥಿಗಳಿಗೂ ಅನ್ವಯವಾಗಲಿದೆ. ಈ ಸುತ್ತಿನಲ್ಲಿ ಪಾಲ್ಗೊಳ್ಳುವ ಎಲ್ಲಾ ಅಭ್ಯರ್ಥಿಗಳು ಭದ್ರತಾ ಠೇವಣಿಯ ಮುಟ್ಟುಗೋಲು ಅಥವಾ ದಂಡ ಪಾವತಿಗೆ ಒಳಪಡುವಂತಿಲ್ಲ ಎಂದು ನ್ಯಾಯಪೀಠ ಹೇಳಿದೆ.
AIQ ಸ್ಥಾನಗಳಿಗಾಗಿ ಹೊಸದಾಗಿ ಮಾಪ್ ಸುತ್ತನ್ನು ನಡೆಸಲಾಗುವುದು; ಪ್ರಕ್ರಿಯೆಯು ಎರಡು ವಾರಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಾರದು; ರಾಜ್ಯ ಕೋಟಾದ 2 ನೇ ಸುತ್ತಿನಲ್ಲಿ ಸೇರಿರುವ ಅಭ್ಯರ್ಥಿಗಳು AIQ ನ ಹೊಸ ಮಾಪ್ ಅಪ್ ಸುತ್ತಿನಲ್ಲಿ ಭಾಗವಹಿಸಲು ಅರ್ಹರಾಗಿರುವುದಿಲ್ಲ.
NEET-PG 2021-22 ಕೌನ್ಸೆಲಿಂಗ್ನ ಮಾಪ್-ಅಪ್ ಸುತ್ತಿನಲ್ಲಿ ಭಾಗವಹಿಸಲು ಕೋರಿ ವೈದ್ಯರ ಗುಂಪು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನಡೆಸಿದ ಬಳಿಕ ಮೇಲ್ಕಂಡ ಅಂಶಗಳನ್ನು ತನ್ನ ತೀರ್ಪಿನಲ್ಲಿ ನ್ಯಾಯಪೀಠ ಸೂಚಿಸಿದೆ.
ಈಗಾಗಲೇ ಎರಡನೇ ಸುತ್ತಿನ ಕೌನ್ಸೆಲಿಂಗ್ನಲ್ಲಿ ಸೀಟು ಹಂಚಿಕೆಯಾಗಿರುವ ಅರ್ಜಿದಾರರು, ಅಭ್ಯರ್ಥಿಯು ಈಗಾಗಲೇ ರಾಜ್ಯ ಕೋಟಾದಲ್ಲಿ ಸೀಟುಗಳನ್ನು ಪಡೆದಿದ್ದರೆ ಮಾಪ್-ಅಪ್ ಸುತ್ತಿನಲ್ಲಿ ಭಾಗವಹಿಸುವುದನ್ನು ನಿರ್ಬಂಧಿಸುವ ವೈದ್ಯಕೀಯ ಕೌನ್ಸೆಲಿಂಗ್ ಸಮಿತಿಯ ಮಾರ್ಚ್ 16 ರ ಸಲಹೆಯನ್ನು ವೈದ್ಯರ ಗುಂಪು ಪ್ರಶ್ನಿಸಿತ್ತು. 146 ಸ್ಥಾನಗಳನ್ನು ನಂತರ ಸೇರಿಸಿರುವುದರಿಂದ ಅರ್ಜಿದಾರರಿಗಿಂತ ಕಡಿಮೆ ಶ್ರೇಣಿ ಪಡೆದಿರುವ ಅಭ್ಯರ್ಥಿಗಳು ಉತ್ತಮ ಸ್ಥಾನ ಪಡೆಯುತ್ತಾರೆ ಎಂಬುದು ಅವರ ವಾದವಾಗಿತ್ತು.