ರಾಷ್ಟ್ರೀಯ ಭದ್ರತೆಗೆ ಧಕ್ಕೆ ಬಂದಿದ್ದು ಇದು ಮೊದಲೇನಲ್ಲ!
ಪಠಾಣ್ ಕೋಟ್ ಕವರೇಜ್ ನಲ್ಲಿ ಎನ್ ಡಿಟಿವಿಯಿಂದ ಆದ ನಿಯಮ ಉಲ್ಲಂಘನೆ ಅಷ್ಟು ಸುಲಭಕ್ಕೆ ನಿರ್ಲಕ್ಷಿಸುವಂತಿರಲಿಲ್ಲ. ಆದ್ದರಿಂದ ಮೂವತ್ತು ದಿನ ಸಮಯ ತೆಗೆದುಕೊಂಡು, ಪರಾಮರ್ಶಿಸಿದ ನಂತರ ಒಂದು ದಿನ ಪ್ರಸಾರ ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು
ಬೆಂಗಳೂರು, ನವೆಂಬರ್ 5: ರಾಷ್ಟ್ರೀಯ ಸುರಕ್ಷತೆಗೆ ಧಕ್ಕೆ ತರುವಂಥ ವಿಚಾರವನ್ನು ಯಾವುದೇ ರೀತಿಯಲ್ಲೂ ಸಮರ್ಥಿಸಿಕೊಳ್ಳೋದು ಸಾಧ್ಯವಿಲ್ಲ. ಎನ್ ಡಿಟಿವಿ ಪ್ರಕರಣದ ಬಗ್ಗೆ ಪರಿಶೀಲಿಸಿದ ಸಮಿತಿಯ ಮಾತಿದು.
ಈ ಪ್ರಕರಣವನ್ನು ಗಮನಿಸುತ್ತಿರುವ ಅಂತರ ಸಚಿವ ಸಮಿತಿ ಕೂಡ ಈ ಬಗ್ಗೆ ಮಾತನಾಡಿದ್ದು, ಆ ಚಾನಲ್ ನಿಂದ ಆಗುತ್ತಿರುವ ಮೊದಲನೇ ನಿಯಮ ಉಲ್ಲಂಘನೆ ಇದಲ್ಲ. ಕೇಬಲ್ ಆಕ್ಟ್ ನ ಉಲ್ಲಂಘಿಸುವ ಹಲವು ಕಾರ್ಯಕ್ರಮಗಳನ್ನು ಆ ಚಾನಲ್ ಮಾಡಿದೆ ಎಂದಿದೆ.
ಪಠಾಣ್ ಕೋಟ್ ಕವರೇಜ್ ನಲ್ಲಿ ಎನ್ ಡಿಟಿವಿಯಿಂದ ಆದ ನಿಯಮ ಉಲ್ಲಂಘನೆ ಅಷ್ಟು ಸುಲಭಕ್ಕೆ ನಿರ್ಲಕ್ಷಿಸುವಂತಿರಲಿಲ್ಲ. ಆದ್ದರಿಂದ ಮೂವತ್ತು ದಿನ ಸಮಯ ತೆಗೆದುಕೊಂಡು, ಪರಾಮರ್ಶಿಸಿದ ನಂತರ ಒಂದು ದಿನ ಪ್ರಸಾರ ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು ಎಂದು ಮೂಲಗಳು ಒನ್ಇಂಡಿಯಾಗೆ ತಿಳಿಸಿವೆ. ಇದನ್ನು ತುರ್ತು ಪರಿಸ್ಥಿತಿಗೆ ಹೋಲಿಸುವುದು ತೀರಾ ಕೆಳಮಟ್ಟದ ಆಲೋಚನೆ ಎಂದು ಮೂಲಗಳು ತಿಳಿಸಿವೆ.[ಎನ್ ಡಿಟಿವಿಗೆ 24 ಗಂಟೆ ಶಿಕ್ಷೆ: ನಿರ್ಧಾರಕ್ಕೆ ವ್ಯಾಪಕ ಖಂಡನೆ]
ಇದೇ ರೀತಿಯ ಇಪ್ಪತ್ತೊಂದು ಆದೇಶಗಳನ್ನು ಯುಪಿಎ ಸರಕಾರ 2005ರಿಂದ ನೀಡಿದೆ. ಯುಪಿಎ ಸರಕಾರದ ಅವಧಿಯಲ್ಲಿ ಕೇಬಲ್ ಟಿವಿ ನಿಯಮ ಮತ್ತು ಕಾರ್ಯಕ್ರಮದ ಸೂಚನೆಗಳನ್ನು ಉಲ್ಲಂಘಿಸಿದ ಬೇರೆ ಬೇರೆ ಚಾನಲ್ ಗಳಿಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಇಂಥ ಇಪ್ಪತ್ತೊಂದು ಆದೇಶ ನೀಡಿತ್ತು. ಪ್ರಸಾರ ಸ್ಥಗಿತದ ಶಿಕ್ಷೆ ಪ್ರಮಾಣ ಒಂದು ದಿನದಿಂದ ಎರಡು ತಿಂಗಳವರೆಗೆ ಇತ್ತು ಎಂದು ಮೂಲಗಳು ತಿಳಿಸಿವೆ.[NDTV ಮೇಲೆ ಕೇಂದ್ರ ಸರಕಾರದ 'ಸರ್ಜಿಕಲ್ ಸ್ಟ್ರೈಕ್': ಒಂದು ದಿನ ಬ್ಯಾನ್!]
ಶಸ್ತ್ರಾಸ್ತ್ರಗಳು ಇದ್ದ ಸ್ಥಳ, ಉಗ್ರಗಾಮಿಗಳಿದ್ದ ಜಾಗ, ಶಾಲೆಯಿರುವ ಸ್ಥಳ, ವಸತಿ ಪ್ರದೇಶ ಮುಂತಾದ ಸೂಕ್ಷ್ಮ ಸ್ಥಳಗಳನ್ನು ಎನ್ ಡಿಟಿವಿ ಪ್ರಸಾರ ಮಾಡಿತ್ತು. ಆ ಮಾಹಿತಿಯನ್ನು ಒಳನುಸುಳುಕೋರರನ್ನು ಕಳಿಸಿದವರು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇತ್ತು. ಇವೆಲ್ಲ ದೇಶದ ರಕ್ಷಣೆ, ಸೈನಿಕರು ಹಾಗೂ ನಾಗರಿಕರಿಗೆ ಅಪಾಯ ತರುವಂಥದ್ದು. ಆ ಚಾನಲ್ ಗೂ ಕೂಡ ಅದರ ಕಡೆಯಿಂದ ಏನದರೂ ಸಮರ್ಥನೆ ಇದ್ದರೆ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು ಎಂದು ಸಮಿತಿ ಹೇಳಿದೆ.