ಎನ್ ಡಿಟಿವಿಗೆ 24 ಗಂಟೆ ಶಿಕ್ಷೆ: ನಿರ್ಧಾರಕ್ಕೆ ವ್ಯಾಪಕ ಖಂಡನೆ
ಪಠಾಣ್ ಕೋಟ್ ಉಗ್ರರ ದಾಳಿ ಸಂದರ್ಭದಲ್ಲಿ ಸೂಕ್ಷ್ಮ ವಿಚಾರಗಳನ್ನು ಪ್ರಸಾರ ಮಾಡಿದ ಎನ್ ಡಿಟಿವಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಯಾರು, ಏನು ಹೇಳಿದರು ಎಂಬುದಿಲ್ಲಿದೆ.
ಬೆಂಗಳೂರು, ನವೆಂಬರ್ 4: ಪಠಾಣ್ ಕೋಟ್ ಉಗ್ರರ ದಾಳಿ ಸಂದರ್ಭದಲ್ಲಿ ಸೂಕ್ಷ್ಮ ವಿಚಾರಗಳನ್ನು ಪ್ರಸಾರ ಮಾಡಿದ ಎನ್ ಡಿಟಿವಿ ನಿಯಮ ಉಲ್ಲಂಘಿಸಿದೆ. ಆದ್ದರಿಂದ ನವೆಂಬರ್ 9ರ ಮಧ್ಯರಾತ್ರಿಯಿಂದ ನವೆಂಬರ್ 10ರ ಮಧ್ಯರಾತ್ರಿ ತನಕ ಯಾವುದೇ ಕಾರ್ಯಕ್ರಮ ಹಾಗೂ ಸುದ್ದಿ ಪ್ರಸಾರ ಮಾಡದಂತೆ ಮಾಹಿತಿ ಮತ್ತು ತಂತ್ರಜ್ಞಾನದ ಆಂತರಿಕ ಸಮಿತಿ ಎನ್ ಡಿಟಿವಿಗೆ ಆದೇಶಿಸಿದೆ.
ಉಗ್ರರ ದಾಳಿಗಳ ಸುದ್ದಿ ಬಿತ್ತರದ ಕುರಿತು ವಾಹಿನಿಯೊಂದರ ವಿರುದ್ಧ ನೀಡಿದ ಮೊದಲ ಆದೇಶ ಇದು. ಜನವರಿಯಲ್ಲಿ ನಡೆಸಲಾದ ಕಾರ್ಯಾಚರಣೆ ವೇಳೆ ಕೆಲ ಸೂಕ್ಷ್ಮ ಮಾಹಿತಿಗಳನ್ನು ವಾಹಿನಿ ಬಹಿರಂಗಪಡಿಸಿತ್ತು. ಪಠಾಣ್ ಕೋಟ್ ವಾಯುನೆಲೆಯಲ್ಲಿದ್ದ ಶಸ್ತ್ರಾಸ್ತ್ರಗಳ ದಾಸ್ತಾನು, ಯುದ್ಧ ವಿಮಾನ, ಮಾರ್ಟರ್, ಹೆಲಿಕಾಪ್ಟರ್, ಇಂಧನ ಟ್ಯಾಂಕ್ ಇತ್ಯಾದಿಗಳ ವಿವರಗಳನ್ನು ಎನ್ ಡಿಟಿವಿ ಪ್ರಸಾರ ಮಾಡಿತ್ತು.[NDTV ಮೇಲೆ ಕೇಂದ್ರ ಸರಕಾರದ 'ಸರ್ಜಿಕಲ್ ಸ್ಟ್ರೈಕ್': ಒಂದು ದಿನ ಬ್ಯಾನ್!]
ಇದನ್ನು ಪ್ರಸಾರ ನಿಯಮದ ಉಲ್ಲಂಘನೆ ಎಂದಿದ್ದು, ಇದೀಗ ಎನ್ ಡಿಟಿವಿ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಈಗಾಗಲೇ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಎನ್ ಡಿ ಟಿವಿ ಇಂಡಿಯಾ ವಿರುದ್ಧ ಕೇಂದ್ರ ಮಾಹಿತಿ ಮತ್ತು ಪ್ರಚಾರ ಸಚಿವಾಲಯ ಒಂದು ದಿನ ಪ್ರಸಾರ ನಿರ್ಬಂಧ ಹೇರಿರುವ ಕ್ರಮವನ್ನು ಖಂಡಿಸಿ ಪ್ರೆಸ್ ಕ್ಲಬ್ ನ ಮುಂಭಾಗ ಶನಿವಾರ ಬೆಳಗ್ಗೆ 10.30 ಕ್ಕೆ ಪತ್ರಕರ್ತರ ಪ್ರತಿಭಟನೆ ನಡೆಯಲಿದೆ.
ಪ್ರಸಾರ ನಿರ್ಬಂಧ ಹೇರಿರುವ ಕ್ರಮದ ಬಗ್ಗೆ ಯಾರು, ಏನು ಅಭಿಪ್ರಾಯ ವ್ಯಕ್ತಪಡಿಸಿದರು ಎಂಬುದನ್ನು ನಿಮ್ಮ ಗಮನಕ್ಕೆ ತರಲಾಗಿದೆ.
ಎಡಿಟರ್ಸ್ ಗಿಲ್ಡ್
ಈ ಕ್ರಮ ತೀರಾ ಕಠಿಣವಾಗಿದ್ದು, ಈ ರೀತಿ ನಿರ್ಬಂಧ ಹೇರುವುದರಿಂದ ಮಾಧ್ಯಮಗಳ ಸ್ವಾತಂತ್ರ್ಯವನ್ನು ಕಸಿದಂತಾಗುತ್ತದೆ. ಇದರಿಂದಾಗಿ ಮತ್ತೆ ತುರ್ತು ಪರಿಸ್ಥಿತಿಯ ನೆನಪಾಗುತ್ತಿದೆ. ಎನ್ ಡಿಟಿವಿಯೇ ಹೇಳಿಕೊಂಡ ಹಾಗೆ ಉಳಿದ ಮಾಧ್ಯಮಗಳು ಪ್ರಸಾರ ಮಾಡದ ವಿಷಯವೇನನ್ನೋ ಅದು ಪ್ರಸಾರ ಮಾಡಿಲ್ಲ.
ಕೇಂದ್ರ ಸರಕಾರ ಮಾಧ್ಯಮಗಳ ಕೆಲಸದಲ್ಲಿ ಮಧ್ಯ ಪ್ರವೇಶಿಸುತ್ತಿದೆ. ಪ್ರಸಾರ ಮಾಡಿದ ವಿಚಾರದ ಬಗ್ಗೆ ಕೇಂದ್ರ ಸರಕಾರಕ್ಕೆ ಅಸಮಾಧಾನ ಇದ್ದಾಗ ಇಂಥ ಕ್ರಮ ಕೈಗೊಳ್ಳುತ್ತಿದೆ. ಕಾನೂನಿನ ಮಧ್ಯಪ್ರವೇಶ ಆಗದೆ ಈ ರೀತಿ ತೀರ್ಮಾನ ಕೈಗೊಂಡಿರುವುದು ಸ್ವಾತಂತ್ರ್ಯ ಹಾಗೂ ನ್ಯಾಯದ ಮೂಲ ತತ್ವಗಳಿಗೆ ವಿರುದ್ಧವಾದದ್ದು.
ಮಮತಾ ಬ್ಯಾನರ್ಜಿ
ಎನ್ ಡಿಟಿವಿ ಪ್ರಸಾರ ಸ್ಥಗಿತ ಮಾಡುವ ನಿರ್ಧಾರ ಆಘಾತಕಾರಿಯಾಗಿದೆ. ದೇಶದಲ್ಲಿ ತುರ್ತು ಪರಿಸ್ಥಿತಿ ಇದೆಯೇನೋ ಎಂಬ ಸ್ಥಿತಿಯನ್ನು ಮತ್ತೆ ನೆನಪಿಸುತ್ತಿದೆ. ಸರಕಾರಕ್ಕೆ ಪಠಾಣ್ ಕೋಟ್ ಕವರೇಜ್ ಬಗ್ಗೆ ಅಸಮಾಧಾನ ಇದ್ದಿದ್ದರೆ ಅದಕ್ಕೆ ಬೇರೆ ದಾರಿಗಳಿದ್ದವು.
ಅರವಿಂದ್ ಕೇಜ್ರಿವಾಲ್
ಎನ್ ಡಿಟಿವಿ ಚಾನಲ್ ವಿರುದ್ಧ ಬಂದಿರುವ ಈ ತೀರ್ಮಾನದ ವಿರುದ್ಧವಾಗಿ, ಆ ಚಾನಲ್ ಪರವಾಗಿ ಉಳಿದ ಮಾಧ್ಯಮದವರು ನಿಲ್ಲಬೇಕು. ಒಂದು ದಿನ ಅವರು ಕೂಡ ಪ್ರಸಾರ ಸ್ಥಗಿತಗೊಳಿಸಿ ಬೆಂಬಲ ನೀಡಬೇಕು.
ರಾಹುಲ್ ಗಾಂಧಿ
ವಿರೋಧ ಪಕ್ಷದ ನಾಯಕರನ್ನು ಬಂಧಿಸೋದು, ಟಿವಿ ಚಾನಲ್ ಗಳ ಪ್ರಸಾರ ಸ್ಥಗಿತ ಮಾಡೋದು-ಇದು ಮೋದಿ ನೇತೃತ್ವದ ಸರಕಾರ ಮಾಡುತ್ತಿರುವ ಕೆಲಸ. ಎನ್ ಡಿಟಿವಿ ಚಾನ ಲ್ ಪ್ರಸಾರವನ್ನು ಒಂದು ದಿನದ ಮಟ್ಟಿಗೆ ಸ್ಥಗಿತ ಮಾಡಿರುವುದು ದಿಗ್ಭ್ರಮೆ ಮೂಡಿಸಿದೆ.
ಒಮರ್ ಅಬ್ದುಲ್ಲಾ
ಎನ್ ಡಿಟಿವಿ ಪ್ರಸಾರ ನಿಲ್ಲಿಸೋದು, ಮೃತ ಸೈನಿಕರಿಗೆ ಗೌರವ ಸೂಚಿಸಲು ಹೋದವರನ್ನು ಬಂಧಿಸೋದು-ಇದಾ ಅಚ್ಛೇ ದಿನ್?