ಸಂಪುಟ ವಿಸ್ತರಣೆಯ ನಂತರ NDA ಬಹುತೇಕ ಸತ್ತು ಹೋಗಿದೆ: ಶಿವಸೇನೆ ಕಿಡಿ
ಸಚಿವ ಸಂಪುಟ ವಿಸ್ತರಣೆ ನಂತರ ಕೇಂದ್ರದಲ್ಲಿ ಇರುವುದು ಬಿಜೆಪಿ ಸರಕಾರವೇ ಹೊರತು ಎನ್ಡಿಎ ಸರಕಾರವಲ್ಲ, ಮೈತ್ರಿಕೂಟ ಬಹುತೇಕ ಸತ್ತುಹೋದಂತಾಗಿದೆ, ಶಿವಸೇನೆ ಕಿಡಿ.
ಮುಂಬೈ, ಸೆ 4: ಭಾನುವಾರದ (ಸೆ 3) ಸಚಿವ ಸಂಪುಟ ವಿಸ್ತರಣೆ ನಂತರ ಕೇಂದ್ರದಲ್ಲಿ ಇರುವುದು ಬಿಜೆಪಿ ಸರಕಾರವೇ ಹೊರತು ಎನ್ಡಿಎ ಸರಕಾರವಲ್ಲ, ಮೈತ್ರಿಕೂಟ ಬಹುತೇಕ ಸತ್ತುಹೋದಂತಾಗಿದೆ ಎಂದು ಶಿವಸೇನೆ ಕಿಡಿಕಾರಿದೆ.
ಶಿವಸೇನೆಯ ಮುಖಂಡ ಸಂಜಯ್ ರಾವತ್ ಈ ಮೇಲಿನ ಹೇಳಿಕೆ ನೀಡಿದ ಬೆನ್ನಲ್ಲೇ, ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಪಕ್ಷದ ತುರ್ತು ಸಭೆಯನ್ನು ಮುಂಬೈನಲ್ಲಿ ಸೋಮವಾರ ಕರೆದಿದ್ದು, ಸಚಿವ ಸಂಪುಟ ವಿಸ್ತರಣೆಯ ವಿಚಾರ ಚರ್ಚೆಗೆ ಬರಲಿದೆ.
ಮೋದಿ ಸಂಪುಟ ವಿಸ್ತರಣೆ : ಯಾರಿಗೆ ಯಾವ ಖಾತೆ
ಪ್ರಸಕ್ತ ನರೇಂದ್ರ ಮೋದಿ ಸರಕಾರದಲ್ಲಿ ಶಿವಸೇನೆಯ ಅನಂತ್ ಗೀತೆ (ಬೃಹತ್ ಕೈಗಾರಿಕೆ) ಮಾತ್ರ ಸಚಿವರಾಗಿದ್ದು, ಸಚಿವ ಸಂಪುಟ ವಿಸ್ತರಣೆಯ ವೇಳೆ, ಕನಿಷ್ಠ ಇನ್ನೂ ಒಬ್ಬ ಪಕ್ಷದ ಸಂಸದರಿಗೆ ಸಚಿವ ಸ್ಥಾನ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿ ಶಿವಸೇನೆ ಇತ್ತು ಎಂದು ವರದಿಯಾಗಿದೆ.
ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಅಧಿಕಾರದಲ್ಲಿ ಇದೆ ಎನ್ನುವುದು ಬರೀ ಪೇಪರ್ ನಲ್ಲಿ ಮಾತ್ರ. ರಾಷ್ಟ್ರಪತಿ ಚುನಾವಣೆ ಮುಂತಾದ ಸಮಯದಲ್ಲಿ ನಮ್ಮ ಪಕ್ಷದ ಬೆಂಬಲ ಬೇಕಿದ್ದರೆ ಮಾತ್ರ, ಬಿಜೆಪಿಗೆ ಶಿವಸೇನೆಯ ನೆನಪಾಗುತ್ತದೆ ಎಂದು ಸಂಜಯ್ ರಾವತ್ ಕೇಂದ್ರ ಸರಕಾರದ ವಿರುದ್ದ ಕಿಡಿಕಾರಿದ್ದರು.
ನಾನೇನೂ ಸಂಪುಟಕ್ಕೆ ನಮ್ಮ ಪಕ್ಷದ ಇನ್ನೊಬ್ಬರನ್ನು ಸೇರಿಸಿಕೊಳ್ಳಿ ಎಂದು ಮೋದಿ ಅಥವಾ ಅಮಿತ್ ಶಾ ಅವರಲ್ಲಿ ಬೇಡಿಕೆಯಿಟ್ಟಿಲ್ಲ. ಸಂಪುಟ ವಿಸ್ತರಣೆಯಾಗಿರುವುದು ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾದ ನಂತರವಷ್ಟೇ ನಮಗೆ ತಿಳಿದಿದ್ದು ಎಂದು ಉದ್ಧವ್ ಠಾಕ್ರೆ ಹೇಳಿದ್ದರು.
ಭಾನುವಾರದ ಸಂಪುಟ ವಿಸ್ತರಣೆ ಕಾರ್ಯಕ್ರಮದಲ್ಲಿ ಶಿವಸೇನೆ ಗೈರಾಗಿತ್ತು. NDA ತೆಕ್ಕೆಗೆ ನಿತೀಶ್ ಕುಮಾರ್ ಅವರ ಜೆಡಿಯು ಬಂದ ನಂತರ ಆ ಪಕ್ಷದ ಸಂಸದರೊಬ್ಬರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುವುದು ಎನ್ನುವ ಸುದ್ದಿ ಹರಿದಾಡುತ್ತಿತ್ತು.