ಪುದುಚೇರಿಯಲ್ಲಿ ಬಿಜೆಪಿ ಸರ್ಕಾರ ರಚನೆ ನಿಷಿದ್ಧ ಎಂದ ಅಮಿತ್ ಶಾ
ಪುದುಚೇರಿ, ಫೆಬ್ರವರಿ.28: ಪುದುಚೇರಿಯಲ್ಲಿ ಈ ಬಾರಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸಂಪೂರ್ಣ ಬಹುಮತ ಸಿಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪುದುಚೇರಿಯ ಕರೈಕಲ್ ನಲ್ಲಿ ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಬಹುಪಾಲು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂದರು. ಪುದುಚೇರಿಯಷ್ಟೇ ಅಲ್ಲ ದೇಶಾದ್ಯಂತ ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಬಿಜೆಪಿ ಕಡೆಗೆ ಮುಖ ಮಾಡುತ್ತಿದ್ದಾರೆ ಎಂದು ಹೇಳಿದರು.
ಚುನಾವಣಾ ಸಮೀಕ್ಷೆ; ಪುದುಚೇರಿಯಲ್ಲಿ ಬಿಜೆಪಿಗೆ ಬಹುಮತ
ಕಾಂಗ್ರೆಸ್ ನಲ್ಲಿ ನಾಯಕರ ಅರ್ಹತೆಗೆ ತಕ್ಕದಾದ ಸ್ಥಾನಮಾನಗಳು ಸಿಗುತ್ತಿಲ್ಲ. ಇದರಿಂದಾಗಿ ನೊಂದ ಕಾರ್ಯಕರ್ತರು ಮತ್ತು ನಾಯಕರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದರು.
ನಿರುದ್ಯೋಗ ತೊಡೆದು ಹಾಕುವ ವಿಶ್ವಾಸ:
ಪುದುಚೇರಿಯಲ್ಲಿ ನಿರುದ್ಯೋಗ ಸಮಸ್ಯೆ ಯುವ ಸಮುದಾಯವನ್ನು ಕಾಡುತ್ತಿದೆ. ಈ ಕೇಂದ್ರಾಡಳಿತ ಪ್ರದೇಶದಲ್ಲಿ ಇರುವ ಶೇ.75ರಷ್ಟು ಯುವಕರು ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಬಿಜೆಪಿ ಸರ್ಕಾರವು ಅಸ್ತಿತ್ವಕ್ಕೆ ಬರುತ್ತಿದ್ದಂತೆ ಶೇಕಡಾವಾರು ನಿರುದ್ಯೋಗ ಪ್ರಮಾಣವನ್ನು ಶೇ.75ರಿಂದ ಶೇ.40ಕ್ಕಿಂತ ಕಡಿಮೆಗೊಳಿಸಲಾಗುತ್ತದೆ ಎಂದು ಸಚಿವ ಅಮಿತ್ ಶಾ ಭರವಸೆ ನೀಡಿದರು.
ಪುದುಚೇರಿಯ 30 ಕ್ಷೇತ್ರಗಳಿಗೆ ಚುನಾವಣೆ:
ಕಳೆದ ಫೆಬ್ರವರಿ.26ರಂದು ನಾಲ್ಕು ರಾಜ್ಯ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಧಾನಸಭಾ ಚುನಾವಣೆ ನಡೆಸುವುದಕ್ಕೆ ಕೇಂದ್ರ ಚುನಾವಣಾ ಆಯೋಗವು ದಿನಾಂಕ ಘೋಷಿಸಿತು. ಪುದುಚೇರಿಯ 30 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್.06ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ.2ರಂದು ಚುನಾವಣಾ ಭವಿಷ್ಯ ಹೊರ ಬೀಳಲಿದೆ ಎಂದು ಆಯೋಗ ಸ್ಪಷ್ಟಪಡಿಸಿತ್ತು.