ವಿಐಪಿ ಸಂಸ್ಕೃತಿಗೆ ಕಡಿವಾಣ ಹಾಕಲು ಮುಂದಾದ ನೌಕಾಪಡೆ ಮುಖ್ಯಸ್ಥ
ನವದೆಹಲಿ, ಜೂನ್ 7: ಇತ್ತೀಚೆಗಷ್ಟೇ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದ ಅಡ್ಮಿರಲ್ ಕರಂಬೀರ್ ಸಿಂಗ್, ನೌಕಾಪಡೆಯಲ್ಲಿನ ವಿಐಪಿ ಸಂಸ್ಕೃತಿ ವಿರುದ್ಧ ಹರಿಹಾಯ್ದಿದ್ದಾರೆ.
ನೌಕಾಪಡೆಯ ಕಾರ್ಯಕ್ರಮಗಳಿಗಾಗಿ ಮಾಡುವ ಅನಗತ್ಯ ವೆಚ್ಚಕ್ಕೆ ಕತ್ತರಿ ಹಾಕಬೇಕು ಎಂದು ಅವರು ಹೇಳಿದ್ದಾರೆ. ಆದರೆ, ಕಾರ್ಯಕ್ರಮಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಅದೇ ಗುಣಮಟ್ಟದ ಬದ್ಧತೆ ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ನೌಕಾಪಡೆಗೆ ಹೊಸ ಮುಖ್ಯಸ್ಥರ ನೇಮಕ: ಯಾರು ಈ ಕರಂಬೀರ್ ಸಿಂಗ್?
ಹಲವು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಸಾಮಾಜಿಕ ಹಾಗೂ ಸಮಾರಂಭದ ಆಚರಣೆಗಳಲ್ಲಿನ ವಿಐಪಿ ಸಂಸ್ಕೃತಿಗೆ ಅಂತ್ಯ ಹಾಡುವಂತೆ ಅವರು ಎಲ್ಲ ಶ್ರೇಣಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಧಿಕೃತ ಕಾರ್ಯಕ್ರಮಗಳಲ್ಲಿ ಮತ್ತು ನೌಕಾಪಡೆ ಸ್ಥಳಗಳಿಗೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದಾಗ ಅನಗತ್ಯವಾಗಿ ದುಂದು ವೆಚ್ಚ ಮಾಡುವುದಕ್ಕೆ ಕಡಿವಾಣ ಹಾಕಬೇಕು ಎಂದು ನಿರ್ದೇಶಿಸಿದ್ದಾರೆ.
ಕರಂಬೀರ್ ಸಿಂಗ್ ಅವರು ನೌಕಾಪಡೆಯನ್ನು ಉದ್ದೇಶಿಸಿ ಮಾತನಾಡಿದ ಮೊದಲ ಭಾಷಣದ ಈ ಅಂಶಗಳನ್ನು ಎಲ್ಲ ಶ್ರೇಣಿಯ ಅಧಿಕಾರಿ ಮುಖ್ಯಸ್ಥರು ಮತ್ತು ದೇಶದೆಲ್ಲೆಡೆ ಇರುವ ನೌಕಾಪಡೆಯ ವಿಭಾಗಗಳಿಗೆ ರವಾನಿಸಲಾಗಿದೆ.
ಸೇವಾ ಹಿರಿತನ ಉಲ್ಲಂಘಿಸಿ ನೌಕಾ ಸೇನೆ ಮುಖ್ಯಸ್ಥ ಹುದ್ದೆ; ಬಿಮಲ್ ವರ್ಮಾ ಪ್ರಶ್ನೆ
ಕಾರ್ಯಕ್ರಮಗಳಲ್ಲಿ ಹೂವಿನ ಹಾರ ಹಾಕುವುದು, ಅತಿಥಿಗಳ ಮೇಲೆ ಹೂವಿನ ಮಳೆ ಸುರಿಸುವುದು, ಮೇಣದಬತ್ತಿಗಳನ್ನು ಉರಿಸುವುದು ಮತ್ತು ಧಾರ್ಮಿಕ ಉದ್ದೇಶದ ಆಚರಣೆಗಳನ್ನು ನಿರ್ಬಂಧಿಸಬೇಕು ಎಂದು ಅವರು ಸೂಚಿಸಿದ್ದಾರೆ.