ಪಟಿಯಾಲ ಕೋರ್ಟ್ಗೆ ಶರಣಾದ ನವಜೋತ್ ಸಿಂಗ್ ಸಿಧು
ಪಟಿಯಾಲ, ಮೇ 20: 34 ವರ್ಷಗಳ ಹಿಂದಿನ ರಸ್ತೆ ರಂಪಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಶುಕ್ರವಾರ ಪಟಿಯಾಲ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
1988ರಲ್ಲಿ ರಸ್ತೆ ಬಿಡುವ ಮಾತಿಗೆ ನಡೆದ ಜಗಳದಲ್ಲಿ ಸಿಧು 65 ವರ್ಷ ವಯಸ್ಸಿನ ಗುರ್ನಾಮ್ ಸಿಂಗ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದರು. ಘಟನೆಯಲ್ಲಿ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಸಿಧುಗೆ ಗುರುವಾರ ಸುಪ್ರೀಂಕೋರ್ಟ್ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು.
ನವಜೋತ್ ಸಿಂಗ್ ಸಿಧುಗೆ 1 ವರ್ಷದ ಜೈಲು ಶಿಕ್ಷೆ ನೀಡಿದ ಸುಪ್ರೀಂ
ಸಿಧು ಶುಕ್ರವಾರ ನವತೇಜ್ ಸಿಂಗ್ ಚೀಮಾ ಸೇರಿದಂತೆ ಪಕ್ಷದ ಕೆಲವು ನಾಯಕರೊಂದಿಗೆ ಪಟಿಯಾಲ ನ್ಯಾಯಾಲಯಕ್ಕೆ ತೆರಳಿದರು. ಪ್ರಸ್ತುತ ಅವರು ನ್ಯಾಯಾಂಗ ಬಂಧನದಲ್ಲಿದ್ದು, ವೈದ್ಯಕೀಯ ಪರೀಕ್ಷೆಗಾಗಿ ಪಟಿಯಾಲದ ಮಟ ಕೌಶಲ್ಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಸಿಧು ಮಾಧ್ಯಮ ಸಲಹೆಗಾರ ಸುರಿಂದರ್ ದಲ್ಲಾ ಮಾಹಿತಿ ನೀಡಿದ್ದಾರೆ.
ಗಡುವು ಕೇಳಿದ್ದ ಸಿಧು ಪರ ವಕೀಲ; ಸುಪ್ರೀಂಕೋರ್ಟ್ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ ನಂತರರ ನವಜೋತ್ ಸಿಂಗ್ ಸಿಧು ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಶರಣಾಗಲು ಕಾಲಾವಕಾಶ ಬೇಕಿದೆ ಎಂದು ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.
ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನಲೆಯಲ್ಲಿ ಕೆಲವು ವಾರ ಸಮಯಾವಕಾಶ ನೀಡುವಂತೆ ಸುಪ್ರೀಂಕೋರ್ಟ್ನ ನ್ಯಾಯಮೂರ್ತಿ ಎನ್. ರಮಣ ತ್ರಿಸದಸ್ಯ ಪೀಠದ ಮುಂದೆ ಮನವಿ ಸಲ್ಲಿಸಿದ್ದರು. ಆದರೆ ನ್ಯಾಯಪೀಠ ಪ್ರತ್ಯೇಕ ಅರ್ಜಿ ಸಲ್ಲಿಸಿ, ನಂತರ ಪರಿಶೀಲಿಸಿದ ನಂತರ ಆದೇಶ ನೀಡುತ್ತೇವೆ ಎಂದು ಹೇಳಿತ್ತು. ಆದರೆ ಇದೀಗ ಅವರೇ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.