ಅನಾರೋಗ್ಯ ಕಾರಣದಿಂದ ಶರಣಾಗಲು ವಾಯ್ದೆ ಕೇಳಿದ ನವಜೋತ್ ಸಿಂಗ್ ಸಿಧು
ನವದೆಹಲಿ, ಮೇ 20: ರಸ್ತೆ ರಂಪಾಟ ಪ್ರಕರಣದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ್ದ ಪಂಜಾಬ್ ಕಾಂಗ್ರೆಸ್ ನಾಯಕ, ಮಾಜಿ ಸಚಿವ ನವಜೋತ್ ಸಿಂಗ್ ಸಿಧುಗೆ ಸುಪ್ರೀಂಕೋರ್ಟ್ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಗುರುವಾರ ತೀರ್ಪುನೀಡಿದೆ. ಆದರೆ ಪಂಜಾಬ್ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕ್ರಿಕೆಟಿಗ ಸಿಧು ಆನಾರೋಗ್ಯ ಕಾರಣ ನೀಡಿ ಶರಣಾಗಲು ಕೆಲವು ವಾರಗಳ ಗಡುವು ಕೇಳಿಕೊಂಡಿದ್ದಾರೆ.
ಭಾರತದ ಕ್ರಿಕೆಟ್ ತಂಡದಲ್ಲಿ ಆಡುತ್ತಿದ್ದ ಸಿಧು, 1988ರ ಡಿ.27ರಂದು ಚಂಡೀಗಢದ ಪಾಟಿಯಾಲದಲ್ಲಿ ರಸ್ತೆ ರಂಪಾಟದಲ್ಲಿ ವೃದ್ಧರೊಬ್ಬರ ಮೇಲೆ ಸಿಧು ಹಲ್ಲೆ ನಡೆಸಿದ್ದರು. ಚಿಕಿತ್ಸೆ ಫಲಿಸದ ಕಾರಣ ವೃದ್ಧ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಧುಗೆ ಗುರುವಾರ, ಮೇ 19 ರಂದು ಸುಪ್ರೀಂಕೋರ್ಟ್ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ಇದೀಗ ಶರಣಾಗಲು ಕೆಲವು ವಾರಗಳ ಕಾಲಾವಾಕಾಶ ಬೇಕೆಂದು ಸಿಧು ಕೊರ್ಟ್ಗೆ ಮನವಿ ಸಲ್ಲಿಸಿದ್ದಾರೆ.
ನವಜೋತ್ ಸಿಂಗ್ ಸಿಧುಗೆ 1 ವರ್ಷದ ಜೈಲು ಶಿಕ್ಷೆ ನೀಡಿದ ಸುಪ್ರೀಂ
ಸಿಧು ಅವರು ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಕಾಲಾವಕಾಶ ನೀಡುವಂತೆ ಸಿಧು ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಎ. ಎಂ. ಖಾನ್ ವಿಲ್ಕರ್ ಅವರಿಗೆ ಮನವಿ ಸಲ್ಲಿಸಿದ್ದು, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಅವರಿಗೂ ಮೊರೆ ಹೋಗಿದ್ದಾರೆ.
ಸಿಧು ಮನವಿಗೆ ಸರ್ಕಾರಿ ಪರ ವಕೀಲ ಆಕ್ಷೇಪ ವ್ಯಕ್ತಪಡಿಸಿದರು. ಅಪರಾಧಕ್ಕೆ 34 ವರ್ಷಗಳ ಕಳೆದಿವೆ, ಆದರೆ ಅದು ಸತ್ತಿಲ್ಲ, ತೀರ್ಪು ಬಂದ ಕೂಡಲೆ ಮತ್ತೆ ವಾಯ್ದೆ ಕೇಳುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಆದರೆ ಅಭಿಷೇಕ್ ಮನು ಸಿಂಘ್ವಿ, ನವಜೋತ್ ಸಿಂಗ್ ಸಿಧು ಶರಣಾಗುತ್ತಾರೆ. ಆದರೆ ಆರೋಗ್ಯ ಸಮಸ್ಯೆ ಇರುವುದರಿಂದ, ಚೇತರಿಸಿಕೊಳ್ಳುವುದಕ್ಕೆ ಕಾಲಾವಕಾಶ ಬೇಕಾಗಿದೆ ಎಂದು ಹೇಳಿದರು.
ಗುರುವಾರ ಸುಪ್ರೀಂಕೋರ್ಟ್ ತೀರ್ಪು ನೀಡುತ್ತಿದ್ದಂತೆ ಟ್ವೀಟ್ ಮಾಡಿದ್ದ ಸಿಧು, ಕಾನೂನಿನ ಸಾರ್ವಭೌಮತೆಗೆ ನಾನು ಶರಣಾಗುತ್ತೇನೆ ಎಂದು ಟ್ವೀಟ್ ಮಾಡಿದ್ದರು. ಇಂದು ಕೆಲವು ಮಾಧ್ಯಮಗಳಲ್ಲೂ ಮಾಜಿ ಕ್ರಿಕೆಟಿಗ ಶರಣಾಗಬಹುದು ಎಂದು ವರದಿ ಮಾಡಿದ್ದವು.
Recommended Video