ದ್ರೌಪದಿ ಮುರ್ಮು ಬೆಂಬಲಿಸಿದ ಒಡಿಶಾ ಸಿಎಂ ನವೀನ್ ಪಟ್ನಾಯಕ್
ನವದೆಹಲಿ, ಜೂನ್ 22: ಬಿಜೆಪಿ ನೇತೃತ್ವದ ಎನ್ಡಿಎ ಮುಂಬರುವ ಚುನಾವಣೆಗೆ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ ಎಂದು ಜೆ. ಪಿ. ನಡ್ಡಾ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು. ದ್ರೌಪದಿ ಮುರ್ಮುಗೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಬೆಂಬಲ ಸೂಚಿಸಿದ್ದು, ಎನ್ಡಿಎ ಅಭ್ಯರ್ಥಿ ಗೆಲುವು ಬಹುತೇಕ ಖಚಿತವಾಗಿದೆ.
ದ್ರೌಪದಿ ಮುರ್ಮು ಒಡಿಶಾದಲ್ಲಿ ಬಿಜೆಪಿ ಬೆಂಬಲದಿಂದ ಬಿಜೆಡಿ ಸರಕಾರ ರಚಿಸಿದ್ದ ವೇಳೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸಂಪುಟದಲ್ಲಿ ಸಚಿವರಾಗಿದ್ದರು. ಕಾರ್ಪೊರೇಟರ್ ಆಗಿ ರಾಜಕೀಯ ಜೀವನ ಆರಂಭಿಸಿದ ದ್ರೌಪದಿ ಮುರ್ಮು ಎರಡು ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದರು. ಜಾರ್ಖಂಡ್ ರಾಜ್ಯಪಾಲರಾಗಿದ್ದ ಅವರು 2013ರಲ್ಲಿ ಬಿಜೆಪಿಯ ಎಸ್ಟಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿ ಸದಸ್ಯೆಯಾಗಿ ಕೆಲಸ ಮಾಡಿದ್ದರು.
ವ್ಯಕ್ತಿಚಿತ್ರ: ದೇಶದ ಪ್ರಥಮ ಪ್ರಜೆಯಾಗಲಿರುವ ಬುಡಕಟ್ಟು ನಾಯಕಿ ದ್ರೌಪದಿ ಮುರ್ಮು
ದ್ರೌಪದಿ ಮುರ್ಮು ರಾಷ್ಟ್ರಪತಿ ಸ್ಥಾನಕ್ಕೆ ಚುನಾಯಿತರಾದರೆ, ಭಾರತದ ಬುಡಕಟ್ಟು ಜನಾಂಗಕ್ಕೆ ಸೇರಿದ ಮಹಿಳೆ ಮೊದಲ ಬಾರಿಗೆ ರಾಷ್ಟ್ರದ ಮೊದಲ ಪ್ರಜೆಯಾಗಲಿದ್ದಾರೆ. ಪ್ರತಿಭಾ ಪಾಟೀಲ್ ನಂತರ ದೇಶದ ಎರಡನೇ ಮಹಿಳಾ ರಾಷ್ಟ್ರಪತಿ ಎನಿಸಿಕೊಳ್ಳಲಿದ್ದಾರೆ.
ರಾಷ್ಟ್ರಪತಿ ಉಮೇದುವಾರಿಕೆಗೆ ಸಂಬಂಧಿಸಿದ ಎನ್ಡಿಎ ಸಭೆಯಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಮತ್ತು ಇತರರು ಭಾಗವಹಿಸಿದ್ದರು. ಕಾಂಗ್ರೆಸ್, ಎನ್ಸಿಪಿ ಮತ್ತು ಟಿಎಂಸಿ ಸೇರಿದಂತೆ ಹಲವಾರು ಪ್ರಮುಖ ವಿರೋಧ ಪಕ್ಷಗಳು ಮಂಗಳವಾರ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರನ್ನು ರಾಷ್ಟ್ರಪತಿ ಚುನಾವಣೆಗೆ ತಮ್ಮ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿಕೊಂಡಿವೆ.
ಬೆಂಬಲ ನೀಡಿ ನವೀನ್ ಪಟ್ನಾಯಕ್ ಟ್ವೀಟ್; ಈ ಕುರಿತು ಸಂತಸ ವ್ಯಕ್ತಪಡಿಸಿರುವ ನವೀನ್ ಪಟ್ನಾಯಕ್, "ದೇಶದ ಅತ್ಯುನ್ನತ ಹುದ್ದೆಗೆ ಎನ್ಡಿಎ ಅಭ್ಯರ್ಥಿಯಾಗಿ ಘೋಷಿಸಲ್ಪಟ್ಟ ದ್ರೌಪದಿ ಮುರ್ಮು ಅವರಿಗೆ ಅಭಿನಂದನೆಗಳು. ಗೌರವಾನ್ವಿತ ಪ್ರಧಾನಿಯಾದ ನರೇಂದ್ರ ಮೋದಿ ನನ್ನೊಂದಿಗೆ ಚರ್ಚಿಸಿದ್ದು ನನಗೆ ಸಂತೋಷವಾಯಿತು, ಒಡಿಶಾದ ಜನರಿಗೆ ಇದು ನಿಜಕ್ಕೂ ಹೆಮ್ಮೆಯ ಕ್ಷಣ." ಎಂದು ಟ್ವೀಟ್ ಮಾಡಿದ್ದಾರೆ.
Congratulations Smt #DraupadiMurmu on being announced as candidate of NDA for the country’s highest office. I was delighted when Hon’ble PM @narendramodi ji discussed this with me. It is indeed a proud moment for people of #Odisha.
— Naveen Patnaik (@Naveen_Odisha) June 21, 2022
ರಾಜಕೀಯ ವಿಶ್ಲೇಷಕರ ಪಕ್ರಾರ, ರಾಷ್ಟ್ರಪತಿ ಅಭ್ಯರ್ಥಿಗೆ ನವೀನ್ ಪಟ್ನಾಯಕ್ ಬೆಂಬಲ ಸೂಚಿಸಿರುವುದು ಅವರ ಗೆಲುವಿನ ಹಾದಿಯನ್ನು ಸುಲಭಗೊಳಿಸಿದೆ. ಬಿಜೆಡಿ ಹಾಗೂ ಬಿಜೆಪಿ ಸಹಯೋಗದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದ ಸಮಯದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದ ದ್ರೌಪದಿ ಮುರ್ಮು, ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರೊಂದಿಗೆ ಉತ್ತಮ ಸ್ನೇಹವನ್ನೂ ಹೊಂದಿದ್ದಾರೆ. ಮುಂದಿನ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನುವ ಸುದ್ದಿ ಹಬ್ಬಿದೆ. ಇದರೊಂದಿಗೆ ಎನ್ಡಿಎ ವಿರೋಧ ಪಕ್ಷಗಳ ಗೆಲುವಿನ ಆಸೆಗೆ ತಣ್ಣೀರು ಎರಚಿದೆ ಎನ್ನುತ್ತಾರೆ ರಾಜಕೀಯ ಚಿಂತಕರು.
ಹುಟ್ಟು ಹಬ್ಬದ ಉಡುಗೊರೆ; ಬುಡಕಟ್ಟು ನಾಯಕಿ ಮಾತ್ರವಲ್ಲದೆ ಸಮರ್ಥ ಆಡಳಿತದಿಂದಲೂ ಅವರು ಪ್ರಸಿದ್ಧರಾಗಿದ್ದಾರೆ. ಅವರು ಜಾರ್ಖಂಡ್ನ ರಾಜ್ಯಪಾಲರಾಗಿ ಅಧಿಕಾರಾವಧಿಯಲ್ಲಿ ಸಮರ್ಥ ಆಡಳಿತಗಾರ್ತಿ ಎಂದು ಸಾಬೀತುಪಡಿಸಿದ್ದಾರೆ. ಜಾರ್ಖಂಡ್ ರಾಜ್ಯದ ಮೊದಲ ಮಹಿಳಾ ರಾಜ್ಯಪಾಲೆ ಎನಿಸಿಕೊಂಡಿದ್ದರು. ಇನ್ನು ಸೋಮವಾರವಷ್ಟೇ ದ್ರೌಪದಿ ಮುರ್ಮು ತಮ್ಮ 64ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡಿದ್ದರು. ಮಂಗಳವಾರ ರಾಷ್ಟ್ರಪತಿ ಅಭ್ಯರ್ಥಿಯಾಗಿ ಅವರನ್ನು ಘೋಷಿಸಿಸುವ ಮೂಲಕ ಬಿಜೆಪಿ ಉಡುಗೊರೆ ನೀಡಿದೆ.
16ನೇ ರಾಷ್ಟ್ರಪತಿ ಚುನಾವಣೆ ಜುಲೈ 18ರಂದು ನಡೆಯಲಿದ್ದು, ಜುಲೈ 21ರಂದು ಮತ ಎಣಿಕೆ ನಡೆಯಲಿದೆ. ನಾಮಪತ್ರಗಳ ಪರಿಶೀಲನೆಗೆ ಜೂನ್ 30 ಮತ್ತು ಉಮೇದುವಾರಿಕೆ ಹಿಂಪಡೆಯಲು ಜುಲೈ 2 ಕೊನೆಯ ದಿನಾಂಕವಾಗಿದೆ. ಭಾರತದ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸುತ್ತಿರುವ ರಾಮನಾಥ್ ಕೋವಿಂದ್ ಜುಲೈ 25, 2017 ರಂದು ಅಧಿಕಾರ ವಹಿಸಿಕೊಂಡಿದ್ದು, ಅವರ ಅವಧಿಯು ಜುಲೈ 24, 2022 ರಂದು ಕೊನೆಗೊಳ್ಳುತ್ತದೆ.