ಕ್ರಿಶ್ಚಿಯನ್ನರ ಕಡೆ ಕಣ್ಣೆತ್ತಿದವರ ಕಣ್ಣು ಕೀಳಲಾಗುತ್ತದೆ: ಸಿದ್ದು
ಅಮೃತ್ಸರ್, ಡಿಸೆಂಬರ್ 22: 'ಯಾರಾದರೂ ಕ್ರಿಶ್ಚಿಯನ್ನರ ಕಡೆಗೆ ಕಣ್ಣೆತ್ತಿ ನೋಡಿದರೆ ಅವರ ಕಣ್ಣು ಕಿತ್ತುಹಾಕಲಾಗುವುದು' ಎಂದು ಗುಡುಗಿದ್ದಾರೆ ಈ ಮಾಜಿ ಕ್ರಿಕೆಟಿಗ ದಕ್ಷಿಣ ಅಮೃತ್ಸರ್ ಶಾಸಕ ನವಜೋತ್ ಸಿಂಗ್ ಸಿದ್ದು.
ಕ್ರಿಸ್ ಮಸ್ ಸ್ವಾಗತಕ್ಕಾಗಿ ಬಂದು ನಿಂತಿದೆ ಗೇಟ್ ವೇ ಆಫ್ ಇಂಡಿಯಾ !
ಅಮೃತ್ ಸರ್ನಲ್ಲಿ ಸರ್ಕಾರದ ವತಿಯಿಂದ ಆಯೋಜಿಸಿದ್ದ ಕ್ರಿಸ್ಮಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪಂಜಾಬ್ ನಲ್ಲಿನ ಕ್ರಿಶ್ಚಿಯನ್ನರಿಗೆ ತೊಂದರೆ ನೀಡಿದವರಿಗೆ ಕಠಿಣ ಶಿಕ್ಷೆ ನೀಡಲಾಗುವುದು ಎಂದು ತಮ್ಮದೇ ಶೈಲಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಅವರು ಹಾಗೆ ಹೇಳಲು ಕಾರಣ ಇತ್ತೀಚೆಗೆ ಮಧ್ಯಪ್ರದೇಶದ ಬಿಜೆಪಿ ಮುಖಂಡರೊಬ್ಬರು ಇದೇ ರೀತಿಯ ಭಾಷೆ ಬಳಸಿ "ಕೇರಳದಲ್ಲಿ ಆರ್ಎಸ್ಎಸ್ ಕಡೆಗೆ ಕಣ್ಣೆತ್ತಿ ನೋಡಿದರೆ ಕಣ್ಣು ಕೀಳಲಾಗುತ್ತದೆ' ಎಂದು ಎಚ್ಚರಿಕೆ ನೀಡಿದ್ದರು, ಆ ಬಿಜೆಪಿ ಮುಖಂಡನಿಗೆ ಟಾಂಗ್ ನೀಡಲು ಸಿದ್ದು ಹೀಗೆ ಹೇಳಿದ್ದಾರೆ ಎನ್ನಲಾಗಿದೆ.
ತಮ್ಮ ಬಿಡು ಬೀಸು ಮಾತು, ಶಾಯರಿಗಳಿಂದ ಪ್ರಖ್ಯಾತರಾದ ನವಜೋತ್ ಸಿಂಗ್ ಸಿದ್ದು ಇಂತಹಾ ಹೇಳಿಕೆಗಳಿಂದ ಆಗಾಗ ಸುದ್ದಿಗೆ ಬರುತ್ತಲೇ ಇರುತ್ತಾರೆ. ಮುಂಚೆ ಬಿಜೆಪಿ ಯಲ್ಲಿದ್ದ ನವಜೋತ್ ಸಿಂಗ್ ಸಿದ್ದು ಜನವರಿಯಲ್ಲಿ ಕಾಂಗ್ರೆಸ್ ಸೇರಿ ವಿಧಾನಸಭೆ ಚುನಾವಣೆ ಸ್ಪರ್ಧಿಸಿ ಗೆದ್ದಿದ್ದಾರೆ.
ಕಾರ್ಯಕ್ರಮದಲ್ಲಿ ನವಜೋತ್ ಸಿಂಗ್ ಸಿದ್ದು ಅವರಿಗೆ ಮುಂಚೆ ಮಾತನಾಡಿದ ಸ್ಥಳೀಯ ಬಿಷಪ್ 'ಭಾರತದ ಕೆಲವು ಕಡೆ ಕ್ರಿಶ್ಚಿಯನ್ನರಿಗೆ ತಮ್ಮ ಹಬ್ಬ ಆಚರಿಸಲು ಅವಕಾಶ ನೀಡುತ್ತಿಲ್ಲ, ಕೆಲವರಿಗೆ ಕ್ರಿಶ್ಚಿಯಾನಿಟಿ ಬಗ್ಗೆ ಅಸಹಿಷ್ಣುತೆ ಇದೆ, ಆದರೆ ಪಂಜಾಬ್ನಲ್ಲಿ ಆ ವಾತಾವರಣ ಇಲ್ಲ' ಎಂದು ಹೇಳಿದರು.