ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ್ ಬಂದ್ ನಡುವೆ ಕೃಷಿ ಕಾಯ್ದೆ ವಿರುದ್ಧ ಧಿಕ್ಕಾರದ ಕೂಗು ಮೊಳಗಿಸಿದ ರೈತರು

|
Google Oneindia Kannada News

ನವದೆಹಲಿ, ಸಪ್ಟೆಂಬರ್ 27: ಭಾರತದಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ವಿವಾದಿತ ಕೃಷಿ ಕಾಯ್ದೆಗಳು ಅನ್ನದಾತರ ಕಣ್ಣು ಕೆಂಪಾಗಿಸಿವೆ. ಸೋಮವಾರ ರಾಷ್ಟ್ರ ರಾಜಧಾನಿ ಗಡಿಯಲ್ಲಿ ಬಿಸಿಲು, ಮಳೆ ಮತ್ತು ಗಾಳಿಗೆ ಮೈವೊಡ್ಡಿ ಕುಳಿತ ರೈತರ ತಾಳ್ಮೆಯ ಕಟ್ಟೆ ಒಡೆದಿತ್ತು. ರೈತರ ವಿಷಯದಲ್ಲಿ ಕಣ್ಣು, ಕಿವಿ ಮತ್ತು ಬಾಯಿ ಮುಚ್ಚಿಕೊಂಡು ಕುಳಿತಿರುವ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶದ ಕಿಚ್ಚು "ಭಾರತ್ ಬಂದ್" ಎಂಬ ಹೋರಾಟಕ್ಕೆ ನಾಂದಿ ಆಯಿತು.

ರೈತರ ಕೆಂಗಣ್ಣಿಗೆ ಗುರಿಯಾದ ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯು 10 ತಿಂಗಳು ಪೂರೈಸಿದ ಹಿನ್ನೆಲೆ ಸೋಮವಾರ ಭಾರತ್ ಬಂದ್ ಹೋರಾಟಕ್ಕೆ ಕರೆ ನೀಡಲಾಗಿತ್ತು. ದೇಶದ ಆರು ರಾಜ್ಯಗಳಲ್ಲಿ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತವಾದರೆ ಕರ್ನಾಟಕ ಸೇರಿದಂತೆ ದಕ್ಷಿಣದ ಹಲವು ರಾಜ್ಯಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಬಂಗಾರಪೇಟೆಯಲ್ಲಿ ಕತ್ತೆಗಳ ಮೆರವಣಿಗೆ, ಧಾರವಾಡದಲ್ಲಿ ಕೋಣಗಳ ಹೋರಾಟ ಬಂಗಾರಪೇಟೆಯಲ್ಲಿ ಕತ್ತೆಗಳ ಮೆರವಣಿಗೆ, ಧಾರವಾಡದಲ್ಲಿ ಕೋಣಗಳ ಹೋರಾಟ

ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮುನ್ನಡೆಸುತ್ತಿರುವ 40ಕ್ಕೂ ಹೆಚ್ಚು ಕೃಷಿ ಒಕ್ಕೂಟಗಳ ಸಂಯುಕ್ತ ಕಿಸಾನ್ ಮೋರ್ಚಾ (SKM) ರಾಷ್ಟ್ರವ್ಯಾಪಿ ಬೆಳಗ್ಗೆ 6 ರಿಂದ ಸಂಜೆ 4 ಗಂಟೆವರೆಗೆ ಭಾರತ್ ಬಂದ್ ನಡೆಸಲು ಕರೆ ನೀಡಿದ್ದು, ಸ್ವಯಂಪ್ರೇರಿತ ಮತ್ತು ಶಾಂತಿಯುತ ಬಂದ್ ಆಚರಿಸುವ ಬಗ್ಗೆ ಎಂದು ಮೊರ್ಚಾ ಭರವಸೆ ನೀಡಿತ್ತು. ಸಂಜೆ 4 ಗಂಟೆಯವರೆಗೆ ಭಾರತ್ ಬಂದ್ ನಡೆಯಲಿದೆ. ಈ ಅವಧಿಯಲ್ಲಿ ದೇಶಾದ್ಯಂತ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಚೇರಿಗಳು, ಶೈಕ್ಷಣಿಕ ಮತ್ತು ಇತರ ಸಂಸ್ಥೆಗಳು, ಅಂಗಡಿಗಳು, ಕೈಗಾರಿಕೆಗಳು ಮತ್ತು ವಾಣಿಜ್ಯ ಸಂಸ್ಥೆಗಳು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಕಾರ್ಯ ಬಹುಪಾಲು ಮುಚ್ಚಿದ್ದವು.

ಸೋಮವಾರ ನಡೆದ ಭಾರತ್ ಬಂದ್ ಯಾವ ಯಾವ ಪ್ರದೇಶಗಳಲ್ಲಿ ಎಂಥ ಪರಿಸ್ಥಿತಿಯನ್ನು ಸೃಷ್ಟಿಸಿತ್ತು, ರೈತರ ಹೋರಾಟದ ಪರ ಮತ್ತು ವಿರೋಧಕ್ಕೆ ಸಂಬಂಧಿಸಿದಂತೆ ನಾಯಕರು ನೀಡಿದ ಹೇಳಿಕೆ ಮತ್ತು ಆಡಿದ ಮಾತುಗಳ ಕುರಿತು ಒಂದು ವಿಸ್ತೃತ ವರದಿಗಾಗಿ ಮುಂದೆ ಓದಿ.

ರಾಷ್ಟ್ರ ರಾಜಧಾನಿ ಗಡಿಯಲ್ಲಿ ಸ್ಥಗಿತ

ರಾಷ್ಟ್ರ ರಾಜಧಾನಿ ಗಡಿಯಲ್ಲಿ ಸ್ಥಗಿತ

ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ರೈತರು ಭಾರತ್ ಬಂದ್ ಕರೆ ನೀಡಿದ್ದು, ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇಯಲ್ಲಿ ವಾಹನಗಳ ಸಂಚಾರವು ಸ್ಥಗಿತಗೊಂಡಿದೆ. ರೈತರು ಪ್ರತಿಭಟನೆ ನಡೆಸುತ್ತಿರುವ ಅದರ ಎಲ್ಲಾ ಕ್ಯಾರೇಜ್‌ವೇಗಳನ್ನು ನಿರ್ಬಂಧಿಸಲಾಗಿದೆ. ರೈತರ ಪ್ರತಿಭಟನೆಯಿಂದಾಗಿ ಉತ್ತರ ಪ್ರದೇಶದಿಂದ ಗಾಜಿಪುರ ಕಡೆಗಿನ ಸಂಚಾರ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ದೆಹಲಿ ಸಂಚಾರ ಪೊಲೀಸರು ತಿಳಿಸಿದ್ದಾರೆ. ದೆಹಲಿ ಗಡಿಯ ಗುರುಗಾವ್ ಮತ್ತು ನೋಯ್ಡಾ ಪ್ರದೇಶಗಳಲ್ಲಿ ಪ್ರತಿಯೊಂದು ವಾಹನಗಳನ್ನು ಪೊಲೀಸರು ಮತ್ತು ಪ್ಯಾರಾ ಮಿಲಿಟಿರಿ ಪಡೆ ಸಿಬ್ಬಂದಿ ತಪಾಸಣೆ ಮಾಡುತ್ತಿದ್ದಾರೆ.

ರೈತರು ಹಾಗೂ ಪೊಲೀಸರ ನಡುವಿನ ಸಂಘರ್ಷ

ತಮಿಳುನಾಡು ರಾಜಧಾನಿ ಚೆನ್ನೈನ ಅಣ್ಣಾ ಸಲೈ ಪ್ರದೇಶದಲ್ಲಿ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಬೆಂಬಲಿಸಿ ಹೋರಾಟ ನಡೆಸುತ್ತಿದ್ದ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಸಂಘರ್ಷ ನಡೆದಿದ್ದು, ಒಂದು ಹಂತದಲ್ಲಿ ಬ್ಯಾರಿಕೇಡ್ ಅನ್ನು ಮುರಿಯಲಾಗಿತ್ತು. ಕೊನೆಗೆ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.

ಸಿಂಘು ಗಡಿಯಲ್ಲಿ ಮುಂದುವರಿದ ಹೋರಾಟ

ಸಿಂಘು ಗಡಿಯಲ್ಲಿ ಮುಂದುವರಿದ ಹೋರಾಟ

ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಮತ್ತು ಹರಿಯಾಣದ ಸಿಂಘು ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ. ಭಾರತ್ ಬಂದ್ ಹಿನ್ನೆಲೆ ಸೋಮವಾರ ಬೆಳಗ್ಗೆ ಗಡಿಯಲ್ಲಿ ಸೇರಿಕೊಂಡ ರೈತರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದರು.

ಕೃಷಿ ಕಾಯ್ದೆ ವಿರುದ್ಧ ದೆಹಲಿಯ ಮೂರು ಗಡಿಯಲ್ಲಿ ಪ್ರತಿಭಟನೆ

ಕೃಷಿ ಕಾಯ್ದೆ ವಿರುದ್ಧ ದೆಹಲಿಯ ಮೂರು ಗಡಿಯಲ್ಲಿ ಪ್ರತಿಭಟನೆ

ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ನವೆಂಬರ್.26ರಿಂದ ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಜಾಬ್, ಹರಿಯಾಣ, ಮತ್ತು ಉತ್ತರ ಪ್ರದೇಶದ ಸಾವಿರಾರು ರೈತರು ಕೃಷಿ ಕಾಯ್ದೆಗಳ ವಿರುದ್ಧ ಕೂಗು ಎತ್ತಿದ್ದಾರೆ.

ರೈತ ಹೋರಾಟಕ್ಕೆ ಆರು ರಾಜ್ಯ ಸರ್ಕಾರಗಳ ಬೆಂಬಲ

ರೈತ ಹೋರಾಟಕ್ಕೆ ಆರು ರಾಜ್ಯ ಸರ್ಕಾರಗಳ ಬೆಂಬಲ

ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಭಾರತ್ ಬಂದ್ ಹೋರಾಟಕ್ಕೆ ಆರು ರಾಜ್ಯ ಸರ್ಕಾರಗಳು ಬೆಂಬಲ ಸೂಚಿಸಿವೆ. ರೈತರ ಪರವಾಗಿ ಭಾರತ್ ಬಂದ್ ಪ್ರತಿಭಟನೆಗೆ ತಮಿಳುನಾಡು, ಛತ್ತೀಸಗಢ, ಕೇರಳ, ಪಂಜಾಬ್, ಜಾರ್ಖಂಡ್ ಮತ್ತು ಆಂಧ್ರಪ್ರದೇಶ ಸರ್ಕಾರಗಳು ಧ್ವನಿಗೂಡಿಸಿವೆ. 500ಕ್ಕೂ ಹೆಚ್ಚು ರೈತ ಸಂಘಟನೆಗಳು, 15 ಕಾರ್ಮಿಕ ಸಂಘಟನೆಗಳು, ರಾಜಕೀಯ ಪಕ್ಷಗಳು, ಆರು ರಾಜ್ಯ ಸರ್ಕಾರಗಳು ಮತ್ತು ಸಮಾಜದ ವಿವಿಧ ವಿಭಾಗಗಳು ಬೆಂಬಲಿಸಿವೆ.

ಭಾರತ್ ಬಂದ್ ಹೋರಾಟಕ್ಕೆ ರಾಹುಲ್ ಗಾಂಧಿ ಬೆಂಬಲ

ಭಾರತ್ ಬಂದ್ ಹೋರಾಟಕ್ಕೆ ರಾಹುಲ್ ಗಾಂಧಿ ಬೆಂಬಲ

"ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ರೈತರ ಹೋರಾಟ ಮೊದಲಿನಂತೆಯೇ ಮುಂದುವರಿಯುತ್ತಿದೆ. ರೈತರು ಇಂದಿಗೂ ಅಹಿಂಸಾತ್ಮಕವಾಗಿಯೇ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರಕ್ಕೆ ಈ ರೀತಿ ಹೋರಾಟ ಇಷ್ಟವಾಗುತ್ತಿಲ್ಲ. ಆದ್ದರಿಂದಲೇ ಇಂದು ಭಾರತ್ ಬಂದ್ ನಡೆಸಲಾಗುತ್ತಿದೆ," ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. #IStandWithFarmers ಹ್ಯಾಷ್ ಟ್ಯಾಗ್ ಬಳಸುವ ಮೂಲಕ ರೈತರ ಪ್ರತಿಭಟನೆಗೆ ರಾಹುಲ್ ಗಾಂಧಿ ಬೆಂಬಲ ಸೂಚಿಸಿದ್ದಾರೆ.

ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನೆ

ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನೆ

ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟಕ್ಕೆ 10 ತಿಂಗಳು ಪೂರೈಸಿದ ಹಿನ್ನೆಲೆ ಸೆಪ್ಟೆಂಬರ್ 27ರ ಸೋಮವಾರ ಭಾರತ್ ಬಂದ್ ನಡೆಸುವುದಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದೆ. ಈ ಮಧ್ಯೆ ನಡೆದ ಮಹಾಪಂಚಾಯತ್ ಅನ್ನು ಉದ್ದೇಶಿಸಿ ಮಾತನಾಡಿರುವ ರಾಕೇಶ್ ಟಿಕಾಯತ್, ಪ್ರಸ್ತುತ ಕೇಂದ್ರ ಸರ್ಕಾರವು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸದಿದ್ದರೆ ಮುಂಬರುವ ಸರ್ಕಾರವು ಕಾಯ್ದೆಗಳನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. "ಈ ದೇಶದಲ್ಲಿ ಯಾವ ಸರ್ಕಾರ ಆಡಳಿತ ನಡೆಸುತ್ತದೆಯೋ ಆ ಸರ್ಕಾರವು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು, ನಾವು ಈ ಕಾಯ್ದೆಗಳನ್ನು ಜಾರಿಗೊಳಿಸುವುದಕ್ಕೆ ಬಿಡುವುದಿಲ್ಲ, ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ," ಎಂದು ಎಚ್ಚರಿಕೆ ನೀಡಿದ್ದಾರೆ.

English summary
Nationwide Response to Bharat Bandh called by Farmers against Farm Laws.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X