ಉತ್ತರ ಭಾರತದ 160 ಸ್ಥಳಗಳಲ್ಲಿ ರೈಲು ರೋಕೋ ಪ್ರಭಾವ, 50 ರೈಲು ಸಂಚಾರ ರದ್ದು!
ನವದೆಹಲಿ, ಅಕ್ಟೋಬರ್ 18: ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ರೈತರ ಮೇಲಿನ ಹಿಂಸಾಚಾರ ಖಂಡಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ರೈಲು ರೋಕೋ ಪ್ರತಿಭಟನೆಯು ಸೋಮವಾರ ಉತ್ತರ ರೈಲ್ವೇ ವಲಯದ 160 ಪ್ರದೇಶಗಳಲ್ಲಿ ಪರಿಣಾಮ ಬೀರಿದೆ. 50 ರೈಲುಗಳ ಓಡಾಟಕ್ಕೆ ಅಡ್ಡಿಯಾಗಿದೆ ಎಂದು ಅದರ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಸಿಪಿಆರ್ಒ) ಹೇಳಿದ್ದಾರೆ.
ವಾಯುವ್ಯ ರೈಲ್ವೆ ವಲಯದಲ್ಲಿ (NWR) ರಾಜಸ್ಥಾನ ಮತ್ತು ಹರಿಯಾಣದ ಕೆಲವು ವಿಭಾಗಗಳಲ್ಲಿ ರೈಲು ಸಂಚಾರಕ್ಕೆ ಅಡ್ಡಿಯಾಗಿದ್ದು, ಎರಡು ರೈಲುಗಳು ರದ್ದಾಗಿದ್ದರೆ, 13 ರೈಲುಗಳು ಭಾಗಶಃ ರದ್ದಾಗಿವೆ. ಒಂದು ರೈಲಿನ ಮಾರ್ಗ ಬದಲಾವಣೆ ಮಾಡಲಾಗಿದೆ.
ಲಖೀಂಪುರ್ ಖೇರಿ ಘಟನೆಗೆ ಪೊಲೀಸರನ್ನೇ ದೂಷಿಸಿದ ಕೇಂದ್ರ ಸಚಿವ ಅಜಯ್ ಮಿಶ್ರಾ!
ಉತ್ತರ ರೈಲ್ವೇ ವಲಯದಲ್ಲಿ ಚಂಡೀಗಢ-ಫಿರೋಜ್ಪುರ ಎಕ್ಸ್ಪ್ರೆಸ್ ರೈಲ್ವೆ ಸಂಚಾರಕ್ಕೂ ಅಡೆತಡೆಯಾಗಿದೆ. ಲುಧಿಯಾನಾದಿಂದ ಬೆಳಗ್ಗೆ 7 ಗಂಟೆಗೆ ನಿರ್ಗಮಿಸಿದ ರೈಲು ಫಿರೋಜ್ಪುರ್-ಲುಧಿಯಾನ ವಿಭಾಗದಲ್ಲಿ ತಡೆ ಹಿಡಿಯಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.
ದೇಶದಲ್ಲಿ ರೈಲು ರೋಕೋ ಪ್ರತಿಭಟನೆ ಮತ್ತು ಪರಿಣಾಮ:
* "ಉತ್ತರ ರೈಲ್ವೆ ವಲಯದ 160 ಪ್ರದೇಶಗಳಲ್ಲಿ ರೈಲ್ವೆ ಸಂಚಾರಕ್ಕೆ ಅಡ್ಡಿಯಾಗಿದ್ದು, 50 ರೈಲುಗಳ ಕಾರ್ಯಾಚರಣೆಗೆ ಅಡ್ಡಿಯಾಗಿದೆ" ಎಂದು ಉತ್ತರ ರೈಲ್ವೇ ಸಿಪಿಆರ್ಒ ಹೇಳಿದರು.
* ಸಂಯುಕ್ತ ಕಿಸಾನ್ ಮೋರ್ಚಾ ಪ್ರತಿಭಟನಾಕಾರರು ಸಹನೆವಾಲ್ ಮತ್ತು ರಾಜಪುರ ಬಳಿ ರೈಲ್ವೆ ಹಳಿಗಳನ್ನು ತಡೆದ ಹಿನ್ನೆಲೆ ನವದೆಹಲಿ-ಅಮೃತಸರ ಶತಾಬ್ದಿ ಎಕ್ಸ್ಪ್ರೆಸ್ ಅನ್ನು ಶಂಭು ನಿಲ್ದಾಣದ ಬಳಿ ನಿಲ್ಲಿಸಲಾಯಿತು.
* ರಾಜಸ್ಥಾನದ ಬಿಕಾನೇರ್ ವಿಭಾಗದ ಹನುಮಾನಘರ್ ಮತ್ತು ಶ್ರೀಗಂಗಾ ನಗರದಲ್ಲಿ ರೈಲು ಸಂಚಾರದ ಮೇಲೆ ರೈತರ ಪ್ರತಿಭಟನೆಯು ಪರಿಣಾಮ ಬೀರಿತು.
* "ಭಿವಾನಿ-ರೇವಾರಿ, ಸಿರ್ಸಾ-ರೇವಾರಿ, ಲೋಹಾರು-ಹಿಸಾರ್, ಸುರತಘರ್-ಬಟಿಂಡಾ, ಸಿರ್ಸಾ-ಬಟಿಂಡಾ, ಹನುಮಾನಘರ್-ಬಟಿಂಡಾ, ರೋಹ್ಟಕ್-ಭಿವಾನಿ, ರೇವಾರಿ-ಸದುಲ್ಪುರ್, ಹಿಸಾರ್-ಬಟಿಂಡಾ, ಹನುಮಾನನಗರ್-ಸಾದುಲ್ಪುರ ಮತ್ತು ಶ್ರೀ ಗಂಗಾನಗರ-ರಿವಾರಿ ವಿಭಾಗಗಳಲ್ಲಿ ರೈಲ್ವೆ ಸಂಚಾರಕ್ಕೆ ಅಡ್ಡಿಯಾಗಿದೆ," ಎಂದು ವಾಯುವ್ಯ ರೈಲ್ವೆ ವಿಭಾಗದ ವಕ್ತಾರರು ತಿಳಿಸಿದ್ದಾರೆ.
* ಬಟಿಂಡ-ರೇವಾರಿ ವಿಶೇಷ ರೈಲು ಮತ್ತು ಸಿರ್ಸಾ-ಲುಧಿಯಾನ ವಿಶೇಷ ರೈಲು ಸೋಮವಾರ ರದ್ದಾಗಿದೆ.
* ಅಹಮದಾಬಾದ್-ಶ್ರೀ ಮಾತಾ ವೈಷ್ಣೋ ದೇವಿ ಕತ್ರ ವಿಶೇಷ ರೈಲಿನ ಮಾರ್ಗವನ್ನು ಸಹ ಬದಲಾಯಿಸಲಾಗಿದೆ.
* ಶನಿವಾರ ಅಹಮದಾಬಾದ್ನಿಂದ ಹೊರಟ ರೈಲು ರೇವಾರಿ-ದೆಹಲಿ-ಪಠಾಣ್ಕೋಟ್ ಮೂಲಕ ಶ್ರೀ ಮಾತಾ ವೈಷ್ಣೋ ದೇವಿ ಕತ್ರಾಕ್ಕೆ ಬದಲಾದ ಮಾರ್ಗದಲ್ಲಿ ಚಲಿಸುತ್ತದೆ ಎಂದು ಅವರು ಹೇಳಿದರು.
ರೈಲ್ವೆ ರೋಕೋ ನಡೆಸುವುದರ ಹಿಂದಿನ ಉದ್ದೇಶ:
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ವಜಾಗೊಳಿಸುವಂತೆ ಆಗ್ರಹಿಸಿ ಸೋಮವಾರ ಸಂಯುಕ್ತ ಕಿಸಾನ್ ಮೋರ್ಚಾ ರಾಷ್ಟ್ರವ್ಯಾಪಿ ರೈಲುತಡೆಗೆ ಕರೆ ಕೊಟ್ಟಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಲಖೀಂಪುರ್ ಖೇರಿ ಹಿಂಸಾಚಾರದಲ್ಲಿ ಮೃತ ರೈತರಿಗೆ ನ್ಯಾಯ ಸಿಗುವವರೆಗೂ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವವರೆಗೂ ಹೋರಾಟ ಮುಂದುವರಿಸುವುದಾಗಿ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ. ಲಖೀಂಪುರ್ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾರನ್ನು ಹುದ್ದೆಯಿಂದ ವಜಾಗೊಳಿಸಬೇಕು ಹಾಗೂ ಪೊಲೀಸರು ಅವರನ್ನು ಬಂಧಿಸಬೇಕು ಎಂದು ರೈತ ಸಂಘಟನೆಗಳು ಆಗ್ರಹಿಸಿವೆ.
ದೇಶಾದ್ಯಂತ 6 ಗಂಟೆಗಳ ಕಾಲ ರೈಲ್ವೆ ತಡೆ:
ಅಕ್ಟೋಬರ್ 18ರ ಸೋಮವಾರ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಸುಮಾರು ಆರು ಗಂಟೆಗಳ ಕಾಲ ರೈಲು ಸಂಚಾರವನ್ನು ನಿಲ್ಲಿಸುವಂತೆ ಸಂಯುಕ್ತ ಕಿಸಾನ್ ಮೋರ್ಚಾ ತನ್ನ ಘಟಕಗಳ ಕಾರ್ಯಕರ್ತರಿಗೆ ಕರೆ ನೀಡಿದೆ. ಈ ಸಂದರ್ಭದಲ್ಲಿ ರೈಲ್ವೆ ಆಸ್ತಿಗೆ ಯಾವುದೇ ರೀತಿಯ ವಿನಾಶ ಮತ್ತು ಹಾನಿಯಾಗದಂತೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ SKM ಸೂಚನೆ ನೀಡಿದೆ.
ಲಖೀಂಪುರ್ ಖೇರಿ ಹಿಂಸಾಚಾರ ಪ್ರಕರಣದ ಹಿನ್ನೆಲೆ:
ಕಳೆದ ಅಕ್ಟೋಬರ್ 3ರಂದು ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಒಬ್ಬ ಪತ್ರಕರ್ತ ಸೇರಿದಂತೆ ಎಂಟು ಮಂದಿ ಪ್ರಾಣ ಬಿಟ್ಟಿದ್ದರು. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾ ವಿರುದ್ಧ ರೈತರ ಮೇಲೆ ಕಾರು ಹರಿಸಿದ ಆರೋಪ ಮಾಡಲಾಗಿದ್ದು, ಅಕ್ಟೋಬರ್ 9ರಂದು ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.