ಅಲ್ಲಿ ಬಾನಿಗೆ ಚಿತ್ತಾರ:ಇಲ್ಲಿ ಹೋರಿ ಅಬ್ಬರ, ಇದಪ್ಪಾ ಸಂಕ್ರಾಂತಿ ಸಡಗರ
ನವದೆಹಲಿ, ಜನವರಿ.15: ದೇಶಾದ್ಯಂತ ಮಕರ ಸಂಕ್ರಾಂತಿ ಹಬ್ಬವನ್ನು ವಿಭಿನ್ನ ಹಾಗೂ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಸೂರ್ಯ ತನ್ನ ಪಥವನ್ನು ಬದಲಿಸುವ ಕಾಲವನ್ನು ಕೃಷಿಕರು ಸುಗ್ಗಿ ಹಬ್ಬವಾಗಿ ಆಚರಣೆ ಮಾಡುತ್ತಾರೆ.
ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ಭಾರತದಲ್ಲಿ ಇದೇ ಸಂಕ್ರಾಂತಿ ಹಬ್ಬವನ್ನು ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ಕರ್ನಾಟಕದಲ್ಲಿ ಸಂಕ್ರಾಂತಿ, ತಮಿಳುನಾಡಿನಲ್ಲಿ ಪೊಂಗಲ್, ಅಸ್ಸಾಂನಲ್ಲಿ ಬಿಹು, ಪಂಜಾಬ್ ನಲ್ಲಿ ಲೋಹ್ರಿ ಎಂಬ ಹೆಸರನಲ್ಲಿ ಆಚರಣೆ ಮಾಡಲಾಗುತ್ತದೆ.
ಸಂಕ್ರಾಂತಿ ವಿಶೇಷ: ಇದು ಕಿಚಡಿ ಬರೆದ ಗಿನ್ನಿಸ್ ದಾಖಲೆ ಸರ್ಕಾರ!
ಮಕರ ಸಂಕ್ರಾಂತಿ ದಿನ ದಕ್ಷಿಣಾಯನ ಮುಗಿದು ಉತ್ತರಾಯಣ ಆರಂಭವಾಗುತ್ತದೆ. ಹೀಗೆ ಸೂರ್ಯ ಪಥ ಬದಲಾಗುವುದರಿಂದ ನಮ್ಮ ದೇಶದಲ್ಲಿ..ಈ ಸಮಯಕ್ಕೆ ಚಳಿ ಕಡಿಮೆಯಾಗಿ ಹಗಲು ಹೆಚ್ಚು ಸಂಭವಿಸುತ್ತದೆ. ದೇಶಾದ್ಯಂತ ಈ ಸುಗ್ಗಿಯ ಹಬ್ಬವನ್ನು ವಿವಿಧ ಹೆಸರಿನಲ್ಲಿ ವಿವಿಧ ರೀತಿಯಲ್ಲಿ ಆಚರಿಸುತ್ತಾರೆ.
ಎಳ್ಳು-ಬೆಲ್ಲ ಹಂಚುತ್ತಾ ಸಂಭ್ರಮಿಸಿದ ಕರುನಾಡು
ಕರ್ನಾಟಕದಲ್ಲಿ ಈ ಸಂಕ್ರಾಂತಿ ಹಬ್ಬಕ್ಕೆ ವಿಶೇಷವಾಗಿ ಆಚರಿಸುತ್ತಾರೆ. ಬೆಳೆದ ಬೆಳೆಯು ಕಟಾವಿಗೆ ಬರುವ ಈ ಕಾಲವನ್ನು ಕೃಷಿಕರು ಸುಗ್ಗಿಯ ಕಾಲ ಎಂದು ಕರೆಯುತ್ತಾರೆ. ಪರಸ್ಪರ ಎಳ್ಳು-ಬೆಲ್ಲ ಹಂಚುತ್ತಾ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ.
ಕನ್ನಡದಲ್ಲಿ ಸಂಕ್ರಾಂತಿ ಶುಭ ಕೋರಿದ ಪ್ರಧಾಮಂತ್ರಿ ಮೋದಿ
ದೇಶದ ಹಲವು ರಾಜ್ಯಗಳಲ್ಲಿ ಸಂಕ್ರಾಂತಿ ಹಬ್ಬವನ್ನು ವಿವಿಧ ಹೆಸರಿನಲ್ಲಿ ಆಚರಣೆ ಮಾಡಲಾಗುತ್ತದೆ. ಎಲ್ಲ ರಾಜ್ಯದ ಪ್ರಜೆಗಳಿಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಹಬ್ಬದ ಶುಭಾಶಯ ಕೋರಿದ್ದಾರೆ. ವಿಶೇಷವಾಗಿ ಕನ್ನಡಿಗರಿಗೆ ಕನ್ನಡದಲ್ಲೇ ಶುಭ ಕೋರಿ ಮೋದಿ ಟ್ವೀಟ್ ಮಾಡಿದ್ದಾರೆ.
ಸಂಕ್ರಾಂತಿ; ನಮ್ಮ ಬದುಕನ್ನು ಒಳಿತಿನ ಕಡೆಗೆ ನಡೆಸುವ ಹಬ್ಬ
ಬಾನಲ್ಲಿ ಬಣ್ಣದ ಚಿತ್ತಾರ ಬರೆದ ಗಾಳಿಪಟಗಳು
ಇನ್ನು, ರಾಜಸ್ಥಾನದ ರಾಜಧಾನಿ ಜೈಪುರ್ ನಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಸಂಕ್ರಾಂತಿಗೂ ಮುನ್ನ ದಿನ ಎಂದರೆ ಜನವರಿ.14ರಂದೇ ಬಾನಿನಲ್ಲಿ ಬಣ್ಣದ ಚಿತ್ತಾರ ಬರೆದರು. ನೀಲಿ ಆಕಾಶದಲ್ಲಿ ಬಣ್ಣ ಬಣ್ಣದ ಗಾಳಿಪಟುಗಳು ರಾರಾಜಿಸಿದವು.
ಪೊಂಗಲ್ ಹಬ್ಬದಲ್ಲಿ ಸಂಭ್ರಮಿಸಿದ ಜನರು
ತಮಿಳುನಾಡಿನಲ್ಲಿ ಥಾಯ್ ಪೊಂಗಲ್ ಎಂಬ ಹೆಸರಿನಲ್ಲಿ ನಾಲ್ಕು ದಿನ ಆಚರಿಸುತ್ತಾರೆ. ಮೊದಲನೇ ದಿನ ಭೋಗಿ ಪಂಡಿಗೈ, ಎರಡನೇ ದಿನ ಥಾಯ್ ಪೊಂಗಲ್, ಮೂರನೇ ದಿನವನ್ನು ಮಾಟ್ಟು ಪೊಂಗಲ್ ಮತ್ತು ಕೊನೆ ದಿನವನ್ನು ಕಾನುಂ ಪೊಂಗಲ್ ಎಂಬ ಹೆಸರಿನಿಂದ ಆಚರಿ ಸುತ್ತಾರೆ. ಕೊನೆ ದಿನ ಸೂರ್ಯೋದಯಕ್ಕೂ ಮುನ್ನವೇ ಪೊಂಗಲ್ ತಯಾರಿಸಿ ದೇವರಿಗೆ ಅರ್ಪಿಸಲಾಗುತ್ತದೆ.
ಕರಿ ಕಬ್ಬಿಲ್ಲದೇ ಪೂರ್ಣವಾಗುವುದಿಲ್ಲ ಬೊಂಬೆ ನಾಡಿನ ಸಂಕ್ರಾಂತಿ
ಜಲ್ಲಿಕಟ್ಟು ಆಚರಣೆಯಲ್ಲಿ ಹೋರಿಗಳ ಅಬ್ಬರ
ಪ್ರತಿವರ್ಷವು ಪೊಂಗಲ್ ಹಬ್ಬದ ಸಂಭ್ರಮವನ್ನು ಆಚರಿಸಲು ಮೂರು ದಿನಗಳ ಕಾಲ ಜಲ್ಲಿಕಟ್ಟು ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಜನವರಿ.15ರಂದು ಅವನಿಯಪುರಂನಲ್ಲಿ ಜಲ್ಲಿಕಟ್ಟು ಸ್ಪರ್ಧೆ ನಡೆಯಲಿದ್ದು ಅದಕ್ಕಾಗಿ 750 ಹೋರಿಗಳು ಭಾಗವಹಿಸಲಿವೆ. ಜನವರಿ.16ರಂದು ಪಲಮೇಡುನಲ್ಲಿ ಜಲ್ಲಿಕಟ್ಟು ಸ್ಪರ್ಧೆಗಾಗಿ 650 ಹೋರಿಗಳು ಭಾಗಿಯಾಗಲಿವೆ. ಇನ್ನು, 17ರಂದು ಅಲಂಕನಲ್ಲೂರ ಗ್ರಾಮದಲ್ಲಿ ಜರುಗುವ ಜಲ್ಲಿಕಟ್ಟು ಸ್ಪರ್ಧೆಯಲ್ಲಿ 700 ಹೋರಿಗಳು ಭಾಗವಹಿಸಲಿದೆ.
ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡಿದ ಭಕ್ತರು
ಉತ್ತರ ಪ್ರದೇಶದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು. ವಾರಣಾಸಿಯಲ್ಲಿ ಬೆಳ್ಳಂಬೆಳಗ್ಗೆ ಗಂಗಾ ನದಿ ತೀರದಲ್ಲಿ ನೆರೆದ ಸಾವಿರಾರು ಭಕ್ತಾದಿಗಳು ಗಂಗೆಯಲ್ಲಿ ಪುಣ್ಯಸ್ನಾನ ಮಾಡಿದರು.