ಸೋನಿಯಾಗೆ ಸಂಕಷ್ಟ, ನ್ಯಾಷನಲ್ ಹೆರಾಲ್ಡ್ ಕೇಸ್ ರೀ ಓಪನ್
ಬೆಂಗಳೂರು, ಸೆ. 18: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಮುಖ ಆರೋಪಿಯಾಗಿರುವ ನ್ಯಾಷನಲ್ ಹೆರಾಲ್ಡ್ ಹಗರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ ಪುನರ್ ಆರಂಭಿಸಲು ನಿರ್ಧರಿಸಿದೆ. ಈ ಹಿಂದೆ ತಾಂತ್ರಿಕ ಕಾರಣಗಳಿಂದ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ ಸ್ಥಗಿತಗೊಳಿಸಿತ್ತು.
ಮಾಜಿ ಪ್ರಧಾನಿ ದಿವಂಗತ ಜವಾಹರಲಾಲ್ ನೆಹರೂ ಅವರು ಸ್ಥಾಪಕ ಸಂಪಾದಕರಾಗಿದ್ದ 'ನ್ಯಾಷನಲ್ ಹೆರಾಲ್ಡ್' ಪತ್ರಿಕೆಗೆ ಸೇರಿದ ಸುಮಾರು 2,000 ಕೋಟಿ ರುಪಾಯಿ ಮೌಲ್ಯದ ಆಸ್ತಿ ಕಬಳಿಸಲು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಸಾರ್ವಜನಿಕ ಕಂಪನಿಯನ್ನು ಖಾಸಗಿ ಕಂಪನಿಯಾಗಿ ಮಾರ್ಪಡಿಸಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕ ಸುಬ್ರಮಣ್ಯ ಸ್ವಾಮಿ ಅವರು ದೂರು ನೀಡಿದ್ದರು.[ರಾಹುಲ್- ಸೋನಿಯಾಗೆ ಕೋರ್ಟ್ ಬುಲಾವ್]
ಸೋನಿಯಾ ಮತ್ತು ರಾಹುಲ್ 'ಯಂಗ್ ಇಂಡಿಯನ್' ಹೆಸರಿನ ಖಾಸಗಿ ಕಂಪನಿಯಲ್ಲಿ ತಲಾ ಶೇ. 38ರಷ್ಟು ಷೇರು ಹೊಂದಿದ್ದಾರೆ. ಆ ಕಂಪನಿಯ ಮೂಲಕ ಹೆರಾಲ್ಡ್ ಮಾತೃ ಸಂಸ್ಥೆ 'ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್' ಎಂಬ ಪಬ್ಲಿಕ್ ಕಂಪನಿಯನ್ನು ಖರೀದಿಸಿದ್ದಾರೆ.
ಇದಕ್ಕಾಗಿ ಎಐಸಿಸಿ 90 ಕೋಟಿ ರೂ. ಸಾಲವನ್ನು ಯಾವುದೇ ಭದ್ರತೆಯಿಲ್ಲದೆ ಯಂಗ್ ಇಂಡಿಯನ್ ಗೆ ನೀಡಿದೆ. ವಾಣಿಜ್ಯ ಉದ್ದೇಶಗಳಿಗಾಗಿ ರಾಜಕೀಯ ಪಕ್ಷವೊಂದು ಸಾಲ ನೀಡುವುದು ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ಕಾನೂನಿನ ಸ್ಪಷ್ಟ ಉಲ್ಲಂಘನೆಯೂ ಆಗಿದೆ' ಎಂದು ಸ್ವಾಮಿ ದೂರಿದ್ದರು.
ಈ ಪ್ರಕರಣದಲ್ಲಿ ಮೊತಿಲಾಲ್ ವೊರಾ ಮತ್ತು ಸ್ಯಾಮ್ ಪಿತ್ರೋಡ ಸೇರಿದಂತೆ ಕರ್ನಾಟಕದ ಆಸ್ಕರ್ ಫರ್ನಾಂಡಿಸ್ ಇತರೆ ಐವರು ಕಾಂಗ್ರೆಸ್ ನಾಯಕರಿಗೂ ಸಮನ್ಸ್ ಜಾರಿ ಮಾಡಲಾಗಿತ್ತು.
ಈ ಹಿಂದಿನ ಜಾರಿ ನಿರ್ದೇಶನಾಲಯದ ನಿರ್ದೇಶಕ ರಾಜನ್ ಕಟೋಚ್ ಅವರು ಈ ಕೇಸು ಮುಂದುವರೆಸದೆ ತಾಂತ್ರಿಕ ಕಾರಣ ನೀಡಿ ತನಿಖೆ ಸ್ಥಗಿತಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಸುಬ್ರಮಣ್ಯ ಸ್ವಾಮಿ ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದರು.
ಅಲ್ಲದೆ, ಸೋನಿಯಾ ಗಾಂಧಿ ಅಹಾಗೂ ರಾಹುಲ್ ಗಾಂಧಿ ಸೇರಿದಂತೆ ಎಲ್ಲಾ ಆರೋಪಿಗಳ ಮನಿಲಾಂಡ್ರಿಂಗ್ ಬಗ್ಗೆ ವಿವರಗಳನ್ನು ಜಾರಿ ನಿರ್ದೇಶನಾಲಯಕ್ಕೆ ಸ್ವಾಮಿ ಸಲ್ಲಿಸಿದ್ದರು. ಕಟೋಚ್ ಅವರನ್ನು ಹುದ್ದೆಯಿಂದ ವಜಾಗೊಳಿಸಿ ಕರ್ನಾಲ್ ಸಿಂಗ್ ಅವರನ್ನು ಆ ಜಾಗಕ್ಕೆ ನೇಮಿಸಿದ ಮೇಲೆ ಈ ಪ್ರಕರಣಕ್ಕೆ ಮತ್ತೆ ಜೀವ ಬಂದಿದೆ.