ಜೂನ್ 13 ರಂದು ರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಬಲ ಪ್ರದರ್ಶನ!
ನವದೆಹಲಿ, ಜೂನ್ 8: ಬಿಜೆಪಿ ವಿರುದ್ದ ತಿರುಗಿ ಬೀಳಲು ಸಾಧ್ಯವಾಗುವ ಯಾವುದೇ ಅವಕಾಶಗಳನ್ನು ಇತ್ತೀಚಿನ ದಿನಗಳಲ್ಲಿ ಕೈಚೆಲ್ಲದ ಕಾಂಗ್ರೆಸ್, ಬರುವ ಸೋಮವಾರ ಅಂದರೆ ಜೂನ್ ಹದಿಮೂರಕ್ಕೆ ಮತ್ತೊಂದು ಸುತ್ತಿನ ಬಲ ಪ್ರದರ್ಶನಕ್ಕೆ ಸಜ್ಜಾಗುತ್ತಿದೆ.
ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಕೇಂದ್ರ ಸರಕಾರ ತಮಗೇ ಬೇಕಾದ ಹಾಗೇ ಕುಣಿಸುತ್ತದೆ ಎನ್ನುವ ಆರೋಪವನ್ನು ಹಿಂದೆ ಬಿಜೆಪಿಯು ಕಾಂಗ್ರೆಸ್ ವಿರುದ್ಧ ಮಾಡುತ್ತಿತ್ತು. ಈಗ, ಕಾಂಗ್ರೆಸ್ಸಿನ ಸರದಿ. ಸಿಬಿಐ, ಇಡಿ, ಕೇಂದ್ರ ಚುನಾವಣಾ ಆಯೋಗ ಎಲ್ಲವನ್ನೂ ಮೋದಿ ಸರಕಾರ ತನ್ನ ಕೈಗೊಂಬೆಯಾಗಿಸಿದೆ ಎಂದು ರಾಹುಲ್ ಗಾಂಧಿ ಹಲವು ಬಾರಿ ಆರೋಪಿಸಿದ್ದರು.
Breaking: ಸೋನಿಯಾ, ರಾಹುಲ್ ಗಾಂಧಿಗೆ ಇಡಿ ನೋಟಿಸ್
ಕೆಲವು ದಿನಗಳಿಂದ ಸದ್ದು ಮಾಡದ ನ್ಯಾಷನಲ್ ಹೆರಾಲ್ಡ್ ಕೇಸ್ ಈಗ ಮತ್ತೆ ಸದ್ದು ಮಾಡುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಸಂಸದ ರಾಹುಲ್ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ನೋಟಿಸ್ ಕಳುಹಿಸಿದೆ.
ಜೂನ್ ಎರಡರಂದು ಖುದ್ದಾಗಿ ಹಾಜರಾಗುವಂತೆ ರಾಹುಲ್ ಗಾಂಧಿಗೆ ನೊಟೀಸ್ ನೀಡಲಾಗಿತ್ತು. ಆದರೆ, ಸದ್ಯ ರಾಹುಲ್ ವಿದೇಶ ಪ್ರವಾಸದಲ್ಲಿ ಇರುವುದರಿಂದ ಸಮಯಾವಕಾಶ ಕೇಳಿದ್ದರು. ಅದಕ್ಕೆ ಅಸ್ತು ಎಂದಿದ್ದ ಇಡಿ, ಈಗ ಜೂನ್ ಹದಿಮೂರರಂದು ರಾಹುಲ್ ಹಾಜರಾಗಬೇಕಾಗಿದೆ.
ನ್ಯಾಷನಲ್ ಹೆರಾಲ್ಡ್ ಹಗರಣ ಏನು? ರಾಹುಲ್, ಸೋನಿಯಾ ಮೇಲಿನ ಆರೋಪವೇನು?
ಸುಬ್ರಮಣಿಯನ್ ಸ್ವಾಮಿ ನೀಡಿದ ಕ್ರಿಮಿನಲ್ ಕಂಪ್ಲೇಂಟ್ ಆಧರಿಸಿ ಪ್ರಕರಣ ಆರಂಭ
2010ರಲ್ಲಿ ಸುಬ್ರಮಣಿಯನ್ ಸ್ವಾಮಿ ನೀಡಿದ ಕ್ರಿಮಿನಲ್ ಕಂಪ್ಲೇಂಟ್ ಆಧರಿಸಿ ಪ್ರಕರಣ ಆರಂಭವಾಗಿತ್ತು. ಆರಂಭದಲ್ಲಿ ಸಿಬಿಐ ಇದರ ತನಿಖೆಯನ್ನು ನಡೆಸಿತ್ತಾದರೂ, ಮನಿ ಲಾಂಡ್ರಿಂಗ್ ಕೇಸ್ ಆಗಿರುವುದರಿಂದ, ಜಾರಿ ನಿರ್ದೇಶನಾಲಯದಿಂದ ತನಿಖೆ ಆರಂಭವಾಗಿತ್ತು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಜಾಮೀನು ಪಡೆದು ಬಂಧನದಿಂದ ಆ ವೇಳೆ ಪಾರಾಗಿದ್ದರು. ಜೂನ್ ಎಂಟರಂದು ಸೋನಿಯಾಗೆ ಮತ್ತು ಜೂನ್ ಹದಿಮೂರಕ್ಕೆ ರಾಹುಲ್ ಹಾಜರಾಗಬೇಕಿದೆ. ಸೋನಿಯಾ ಅವರಿಗೆ ಕೋವಿಡ್ ಸೋಂಕು ತಗುಲಿದ್ದರಿಂದ, ಮುಂದಿನ ವಾರ ಅವರು ಕೂಡಾ ಇಡಿ ಮುಂದೆ ಹಾಜರಾಗುವ ಸಾಧ್ಯತೆಯಿದೆ.
ಎಐಸಿಸಿಯ ಅಕ್ಬರ್ ರಸ್ತೆಯಲ್ಲಿರುವ ಪ್ರಧಾನ ಕಚೇರಿ
ಜೂನ್ ಹದಿಮೂರರಂದು ಕಾಂಗ್ರೆಸ್ಸಿನ ಹೈಕಮಾಂಡ್ ಇಡಿ ಮುಂದೆ ಹಾಜರಾಗುವ ದಿನದಂದು ಕಾಂಗ್ರೆಸ್ ಭಾರೀ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪಕ್ಷದ ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲಾ ಸಂಸದರು, ಹಿರಿಯ ಮುಖಂಡರು ಮತ್ತು ಪ್ರಮುಖರಿಗೆ ಎಐಸಿಸಿಯ ಅಕ್ಬರ್ ರಸ್ತೆಯಲ್ಲಿರುವ ಪ್ರಧಾನ ಕಚೇರಿಗೆ ಸೋಮವಾರ ಬೆಳಗ್ಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ.
ಎ.ಪಿ.ಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಜಾರಿ ನಿರ್ದೇಶನಾಲಯ
ರಾಜಧಾನಿಯಲ್ಲಿರುವ ಎ.ಪಿ.ಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಜಾರಿ ನಿರ್ದೇಶನಾಲಯಕ್ಕೆ ಭಾರೀ ಮೋರ್ಚಾದೊಂದಿಗೆ ರಾಹುಲ್ ಗಾಂಧಿ ಜೊತೆ ತೆರಳಲು ಸಕಲ ಸಿದ್ದತೆ ಆರಂಭವಾಗಿದೆ. ಈ ಸಂಬಂಧ ಎಲ್ಲಾ ರಾಜ್ಯಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳ ಜೊತೆ ವರ್ಚುಯಲ್ ಸಭೆಯನ್ನು ನಡೆಸಲಾಗಿದೆ. ಜೊತೆಗೆ, ಅಂದು ಎಲ್ಲಾ ರಾಜ್ಯಗಳಲ್ಲೂ ಪ್ರತಿಭಟನೆ ನಡೆಸುವಂತೆ ಸೂಚಿಸಲಾಗಿದೆ.
ಸೋನಿಯಾ, ರಾಹುಲ್ ಇಡಿ ಅಧಿಕಾರಿಗಳ ಮುಂದೆ ಹಾಜರಾಗಲಿದ್ದಾರೆ
ಬಿಜೆಪಿಯ ಸೇಡಿನ ರಾಜಕಾರಣದಿಂದ ನ್ಯಾಷನಲ್ ಹೆರಾಲ್ಡ್ ಕೇಸನ್ನು ಮತ್ತೆ ಹೊರಗೆ ತರಲಾಗಿದೆ. ಸೋನಿಯಾ ಮತ್ತು ರಾಹುಲ್ ಗಾಂಧಿಯವರು ಇಡಿ ಅಧಿಕಾರಿಗಳ ಮುಂದೆ ಹಾಜರಾಗಲಿದ್ದಾರೆ. ಇದರಲ್ಲಿ ಮುಚ್ಚು ಮರೆ ಏನೂ ಇಲ್ಲ ಎಂದು ಕಾಂಗ್ರೆಸ್ ನಾಯಕರು ಸ್ಪಷ್ಟ ಪಡಿಸಿದ್ದಾರೆ. ನ್ಯಾಷನಲ್ ಹೆರಾಲ್ಡ್ ಅನ್ನು ಪ್ರತಿ ಬಾರಿ ಗುರಿಯಾಗಿಸುವ ಮೂಲಕ ಬಿಜೆಪಿಯು ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಿದೆ ಮತ್ತು ಅಗೌರವಿಸಿದೆ ಎನ್ನುವುದು ಕಾಂಗ್ರೆಸ್ಸಿನ ಆರೋಪ.