ಭಾರತ ಆರೆಸ್ಸೆಸ್, ಬಿಜೆಪಿ ಕೈಯಲ್ಲಿ ಜೀತದಾಳಾಗಿದೆ: ರಾಹುಲ್
ನವದೆಹಲಿ, ಜೂನ್ 11: ಮುಂಬರಲಿರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹಿಂದುಳಿದ ವರ್ಗಗಳನ್ನು ತಲುಪಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ದೆಹಲಿಯಲ್ಲಿ ಆಯೋಜನೆಯಾಗಿದ್ದ ಒಬಿಸಿ ಸಮಾವೇಶದಲ್ಲಿ ಅವರು ಬಿಜೆಪಿ ಮತ್ತು ಆರ್.ಎಸ್.ಎಸ್ ವಿರುದ್ಧ ಹರಿಹಾಯ್ದಿದ್ದಾರೆ.
"ಆರ್.ಎಸ್.ಎಸ್ ಜನರನ್ನು ವಿಭಜನೆ ಮಾಡುವುದರಲ್ಲಿ ನಿರತವಾಗಿದೆ. ಒಬಿಸಿ ಸಮುದಾಯವನ್ನು ಒಡೆಯಲು ಅದು ಬಯಸಿದೆ," ಎಂದು ಒಬಿಸಿ ಸಮ್ಮೇಳನದಲ್ಲಿ ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿ ಬಾಯಿಗೆ ಆಹಾರವಾದ ಮೋದಿಯ ಉತ್ತರ
"ಜನರು ತಮ್ಮ ಸ್ವತಂತ್ರ ಅಭಿಪ್ರಾಯವನ್ನು ಹೇಳಲು ಹೆದರುವ ಪರಿಸ್ಥಿತಿ ಇದೆ. ಆರ್.ಎಸ್.ಎಸ್ ಅಥವಾ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಯಾವುದೇ ವಿಚಾರಗಳಿದ್ದರೂ ಅದರ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಬಿಜೆಪಿ ಜನಪ್ರತಿನಿಧಿಗಳೇ ಹೆದರುತ್ತಾರೆ," ಎಂದು ಅವರು ಆರೋಪಿಸಿದರು.
"ಇವತ್ತು ನಮ್ಮ ದೇಶ ಬಿಜೆಪಿ ಮತ್ತು ಆರ್.ಎಸ್.ಎಸ್ 2-3 ನಾಯಕರಿಗೆ ಜೀತದಾಳಾಗಿದೆ. ಸಂಸದರಿಂದ ಹಿಡಿದು ಎಲ್ಲರೂ ಮಾತನಾಡಲು ಹೆದರುತ್ತಿದ್ದಾರೆ. ಹೆಚ್ಚಿನವರನ್ನು ಮಾತನಾಡಲು ಬಿಡುತ್ತಿಲ್ಲ. ನಮ್ಮಂಥವರು ಮಾತನಾಡಿದರೂ ಬಿಜೆಪಿಯವರು ಆಲಿಸುತ್ತಿಲ್ಲ. ಆರ್.ಎಸ್.ಎಸ್ ಗೆ ಮಾತ್ರ ವಿವರಣೆ ನೀಡಲಾಗುತ್ತದೆ," ಎಂದು ಅವರು ಟೀಕಿಸಿದರು.
"ಭಾರತದಲ್ಲಿ ನಿಜವಾಗಿ ಕೆಲಸ ಮಾಡುವವರು ಹಿಂದಿನ ಕೋಣೆಯಲ್ಲೇ ಉಳಿದು ಬಿಡುತ್ತಿದ್ದಾರೆ. ಅವರ ದುಡಿಮೆಯ ಲಾಭವನ್ನು ಬೇರೆಯವರು ಉಣ್ಣುತ್ತಿದ್ದಾರೆ. ಯಾರಿಗೆ ಕೌಶಲ್ಯ ಇದೆಯೋ, ಕಷ್ಟಪಟ್ಟು ದುಡಿಯುತ್ತಿದ್ದಾರೋ ಅವರಿಗೆ ಭಾರತದಲ್ಲಿ ಸ್ಥಾನಮಾನ ಸಿಗುತ್ತಿಲ್ಲ," ಎಂದು ವಿಷಾದ ವ್ಯಕ್ತಪಡಿಸಿದರು.
ಬಿಜೆಪಿಗೆ ಬಹುಮತ ಬರದಿದ್ದರೆ ಪ್ರಣಬ್ ಪಿಎಂ? ಆರೆಸ್ಸೆಸ್ ತಂತ್ರ
ಪ್ರಧಾನಿ ನರೇಂದ್ರ ಮೋದಿ ಉದ್ಯಮಿಗಳಿಗೆ ಮಾತ್ರ ಕೆಲಸಗಳನ್ನು ಮಾಡಿಕೊಡುತ್ತಾರೆ. ರೈತರನ್ನು ಮೇಲೆತ್ತುವ ಬಗ್ಗೆ ಅವರು ಯಾವತ್ತೂ ಆಲೋಚಿಸಿಲ್ಲ ಎಂದು ರಾಹುಲ್ ಗಾಂಧಿ ದೂರಿದರು.
"ಪ್ರಧಾನಿ ನರೇಂದ್ರ ಮೋದಿಯವರ ಕಚೇರಿಯಲ್ಲಿ ನೀವು ರೈತರನ್ನುಕಾಣಲು ಸಾಧ್ಯವಿಲ್ಲ. ಮೋದಿ ಸರಕಾರದಲ್ಲಿ ರೈತರಿಗೆ ಸಿಗಬೇಕಾದುದು ಸಿಕ್ಕಿಲ್ಲ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಅವರ ಸಾಲಗಳನ್ನು ಮನ್ನಾ ಮಾಡಿಲ್ಲ," ಎಂದು ಕಿಡಿಕಾರಿದರು.
ದೇಶದ ಯುವಕರಿಗೆ ಸರಿಯಾದ ಅವಕಾಶಗಳಿಲ್ಲ ಎಂಬುದನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, "ಅಮೆರಿಕಾದಲ್ಲಿ ಕೋಕಾ ಕೋಲಾದ ಮಾಲಿಕ ಪಾನೀಯ ಮಾರುತ್ತಿದ್ದರು. ಮೆಕ್ ಡೊನಾಲ್ಡ್ ಮಾಲಿಕ ಢಾಬಾ ನಡೆಸುತ್ತದ್ದರು. ಫೋರ್ಡ್ ಕಂಪನಿಯ ಮಾಲಿಕರು ಮೆಕ್ಯಾನಿಕ್ ಆಗಿದ್ದರು. ಆದರೆ ಭಾರತದಲ್ಲಿ ಮೆಕ್ಯಾನಿಕ್ ಒಬ್ಬರು ಅಟೋಮೊಬೈಲ್ ಕಂಪನಿ ಸ್ಥಾಪಿಸಿದ ಉದಾಹರಣೆ ಇದೆಯಾ?" ಎಂದು ರಾಹುಲ್ ಪ್ರಶ್ನಿಸಿದರು.
ಭಾರತದಲ್ಲಿ ಕೌಶಲ್ಯವಿಲ್ಲ ಎಂದು ಕೇಂದ್ರ ಸರಕಾರ ಹೇಳುತ್ತಿರುವ ಹೇಳಿಕೆಯನ್ನು ರಾಹುಲ್ ಇದೇ ಸಂದರ್ಭದಲ್ಲಿ ಖಂಡಿಸಿದರು. "ದೇಶದಲ್ಲಿ ಕೌಶಲ್ಯದ ಕೊರತೆಯಿದೆಯೆಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇದು ಒಂದು ಸುಳ್ಳು. ಒಬಿಸಿಯವರಲ್ಲಿ ಯಾವುದೇ ಕೌಶಲದ ಕೊರತೆಯಿಲ್ಲ. ಅವರು ಸಮರ್ಥರಾಗಿದ್ದಾರೆ," ಎಂದು ರಾಹುಲ್ ತಿರುಗೇಟು ನೀಡಿದ್ದು, ಕೌಶಲ್ಯವನ್ನು ಪತ್ತೆ ಹಚ್ಚಲು ಸರಕಾರ ವಿಫಲವಾಗಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.