ಸಂಭ್ರಮ ತರಲಿ ಸೌಹಾರ್ದತೆಯ ರಾಮನವಮಿ
ಇಂದು ಜಾತಿ-ಮತದ ಭೇದ ಮರೆತು ಭಾರತದಾದ್ಯಂತ ಆಚರಣೆಗೊಳ್ಳುತ್ತಿರುವ ರಾಮನವಮಿಯ ಕೆಲವು ಚಿತ್ರಗಳು ಇಲ್ಲಿವೆ.
ಇಂದು (ಏಪ್ರಿಲ್ 5) ದೇಶದಾದ್ಯಂತ ಸಂಭ್ರಮದಿಂದ ರಾಮನವಮಿ ಆಚರಣೆಗೊಳ್ಳುತ್ತಿದೆ. ಚೈತ್ರ ಮಾಸದ ಶುದ್ಧ ನವಮಿಯಂದು ಅವತಾರವೆತ್ತಿದ ಮರ್ಯಾದಾ ಪುರುಷೋತ್ತಮನ ಆರಾಧನೆಗೆ ಈ ದಿನ ಮೀಸಲು. ವಿಷ್ಣುವಿನ ದಶಾವತಾರಗಳಲ್ಲಿ ಒಬ್ಬನಾದ ಶ್ರೀರಾಮ ಹಿಂದುಗಳ ಪಾಲಿನ ಆರಾಧ್ಯ ದೈವ.
ಶೌರ್ಯ, ಸಹನೆ, ನ್ಯಾಯನಿಷ್ಠುರತೆ, ಪ್ರಾಮಾಣಿಕತೆ, ಪಿತೃವಾಕ್ಯಪರಿಪಾಲನೆ ಎಂಬ ಪದಗಳಿಗೆಲ್ಲ ಅನ್ವರ್ಥವಾಗಿರುವ ರಾಮ ತ್ರೇತಾಯುಗದಲ್ಲಿ ಅವತಾರವೆತ್ತಿ, ರಾವಣನ ಅಹಂಕಾರವನ್ನು ಮೆಟ್ಟಿನಿಂತು ಅಜ್ಞಾನ, ದುರಹಂಕಾರದ ಕತ್ತಲೆಯನ್ನು ಕಳೆದು ಸುಜ್ಞಾನದ ಜ್ಯೋತಿ ಬೆಳಗಿದವ.
ಅಯೋಧ್ಯೆಯ ರಾಜನಾಗಿ, ಒಂದು ಮಾದರಿ ರಾಜ್ಯ ಹೇಗಿರಬೇಕೆಂಬುದನ್ನು ತೋರಿಸಿಕೊಟ್ಟವನು ರಾಮ. ಅದಕ್ಕೆಂದೇ ಇಂದಿಗೂ ಮಾದರಿ ರಾಜ್ಯ ಎಂದೊಡನೆ 'ರಾಮರಾಜ್ಯ'ದ ಪರಿಕಲ್ಪನೆ ಮನಸ್ಸಿನಲ್ಲಿ ಮೂಡುತ್ತದೆ.
ಇಂದು ಜಾತಿ-ಮತದ ಭೇದ ಮರೆತು ಭಾರತದಾದ್ಯಂತ ಆಚರಣೆಗೊಳ್ಳುತ್ತಿರುವ ರಾಮನವಮಿಯ ಕೆಲವು ಚಿತ್ರಗಳು ಇಲ್ಲಿವೆ.
ಜಾತಿ-ಮತ ಮೀರಿದ ಹಬ್ಬ
ಮಧ್ಯಪ್ರದೇಶದ ಜಬಲ್ ಪುರದಲ್ಲಿ ಬುರ್ಖಾ ತೊಟ್ಟ ಮಹಿಳೆಯೊಬ್ಬರು ಶ್ರೀರಾಮ ನವಮಿಯ ಸಲುವಾಗಿ ರಾಮ-ಲಕ್ಷ್ಮಣರ ವೇಷ ಧರಿಸಿದ ಇಬ್ಬರು ಮಕ್ಕಳ ಕೈಹಿಡಿದು ನಡೆಯುತ್ತಿದ್ದ ದೃಶ್ಯ ಎಂಥವರನ್ನೂ ಆಕರ್ಷಿಸುವಂತಿತ್ತು. ಜಾತಿ-ಮತವನ್ನು ಮೀರಿ ಸೌಹಾರ್ದತೆ ಮತ್ತು ಒಗ್ಗಟ್ಟನ್ನು ಸಾಧಿಸುವ ಪ್ರಯತ್ನಕ್ಕೆ ಈ ಚಿತ್ರ ಮುನ್ನುಡಿ ಬರೆಯಿತು.
ಹಬ್ಬದಂದು ಕೋಮುಗಲಭೆ
ಮೇಲಿನ ಚಿತ್ರಕ್ಕೆ ವ್ಯತಿರಿಕ್ತ ಎಂಬಂತೆ ಬಿಹಾರದ ನವಾಡದಲ್ಲಿ ಶ್ರೀರಾಮ ನವಮಿಗಾಗಿ ಹಚ್ಚಲಾಗಿದ್ದ ಪೋಸ್ಟರ್ ಗಳನ್ನು ಹರಿದು ಕೋಮುಗಲಭೆಯ ವಾತಾವರಣವನ್ನು ಸೃಷ್ಟಿಸಲಾಗಿತ್ತು. ಸ್ಥಳಕ್ಕೆ ಭದ್ರತಾ ಪಡೆಯ ಸಿಬ್ಬಂದಿಗಳನ್ನು ನಿಯೋಜಿಸಿ, ವಾತಾವರಣವನ್ನು ತಹಬಂದಿಗೆ ತರಲಾಯ್ತು. ಇಲ್ಲಿ ಹಬ್ಬದ ವಾತಾವರಣ ಮಾಯವಾಗಿ ಎಲ್ಲೆಲ್ಲೂ ಬಿಗಿಬಂದೋಬಸ್ತ್ ಏರ್ಪಟ್ಟಿದೆ!
ಗಿರಿರಾಜ್ ಸಿಂಗ್ ಭೇಟಿ
ನವಾಡದಲ್ಲಿ ಸಂಭವಿಸಿದ ಕೋಮುಗಲಭೆಯಿಂದಾಗಿ ಆಕ್ರೋಶಗೊಂದಿದ್ದ ಜನರಿಗೆ ಸೌಹಾರ್ದತೆಯ ಪಾಠ ಮಾಡಲಿಕ್ಕಾಗಿ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಸ್ಥಳಕ್ಕೆ ಆಗಮಿಸಿದ್ದರು
ದರ್ಶನಕ್ಕಾಗಿ ಸಾಲು ಸಾಲು
ಪಂಜಾಬಿನ ಪಟಿಯಾಲದ ದೇವಾಲಯವೊಂದರ ಮುಂದೆ ರಾಮನವಮಿ ಆಚರಣೆಯಂದು ರಾಮದರ್ಶನಕ್ಕಾಗಿ ಬಿಸಿಲ ಬೇಗೆಯನ್ನೂ ಮರೆತು ಜನರು ಸಾಲುಗಟ್ಟಿ ನಿಂತಿದ್ದರು.
|
ಮೋದಿ ಶುಭಾಶಯ
ಪ್ರಧಾನಿ ನರೇಂದ್ರ ಮೋದಿ ರಾಮನ ಮಹಿಮೆಯನ್ನು ಸಾರುವ ವಿಡಿಯೊವೊಂದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್ ಲೋಡ್ ಮಾಡಿ, ರಾಮನವಮಿಯ ಹಾರ್ದಿಕ ಶುಭ ಕಾಮನೆಯನ್ನು ರಾಷ್ಟ್ರದ ಜನರಿಗೆ ರವಾನಿಸಿದ್ದಾರೆ.
|
ಯೋಗಿ ಆದಿತ್ಯನಾಥ್ ಶುಭಾಶಯ
ಸಮಸ್ತ ದೇಶವಾಸಿಗಳಿಗೂ ಶ್ರೀರಾಮನವಮಿ ಮಂಗಳವನ್ನುಂಟುಮಾಡಲೆಂದು ಹಾರೈಸುತ್ತೇನೆಂದು ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿದ್ದಾರೆ.