ಹಿಂದೂ ಮಹಾಸಭಾದಿಂದ ನಾಥೂರಾಂ ಗೋಡ್ಸೆ ವೆಬ್ಸೈಟ್ ಅನಾವರಣ
ಮೀರಠ್, ನಾಗ್ಪುರ, ನ 16: ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಗುಂಡಿಟ್ಟು ಹತ್ಯೆಗೈದಿದ್ದ ನಾಥೂರಾಮ್ ಗೋಡ್ಸೆಯನ್ನು ಗಲ್ಲಿಗೇರಿಸಿದ ದಿನದಂದು ಗೋಡ್ಸೆ ಹೆಸರಿನಲ್ಲಿ ವೆಬ್ಸೈಟ್ ಬಿಡುಗಡೆ ಮಾಡುವ ಮೂಲಕ ಅಖಿಲ ಭಾರತ ಹಿಂದೂ ಮಹಾಸಭಾ ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ.
ಗೋಡ್ಸೆಯನ್ನು ಗಲ್ಲಿಗೇರಿಸಿದ ದಿನವಾದ ಭಾನುವಾರ ನವೆಂಬರ್ 15ರ ದಿನವನ್ನು ಹಿಂದೂ ಮಹಾಸಭಾ ಬಲಿದಾನ ದಿವಸವನ್ನಾಗಿ ಆಚರಣೆಮಾಡಿದೆ. ಮತ್ತು ನಾಥೂರಾಮ್ ಗೋಡ್ಸೆ ಹೆಸರಿನಲ್ಲಿ ವೆಬ್ ಸೈಟ್ವೊಂದನ್ನು (www.nathuramgodse.in) ಸಹ ಬಿಡುಗಡೆ ಮಾಡಿದೆ.
ನಾಥೂರಾಮ್ ಗೋಡ್ಸೆ ಸಮಾಜದಲ್ಲಿ ಮಾಡಿರುವ ಉತ್ತಮ ಕೆಲಸಗಳನ್ನು ಸಾರ್ವಜನಿಕರಿಗೆ ತಲುಪಿಸುವ ಸಲುವಾಗಿ "ನಾಥೂರಾಮ್ ಗೋಡ್ಸೆ- ದ ರಿಯಲ್ ಫರ್ಗಾಟನ್ ಹೀರೋ ಆಫ್ ಭಾರತ್ " ಎಂಬ ಹೆಸರಿನಲ್ಲಿ ವೆಬ್ ಸೈಟ್ ಆರಂಭಿಸಲಾಗಿದೆ. (ಕರ್ನಾಟಕ ಸೇರಿ ದೇಶದೆಲ್ಲೆಡೆ ಗೋಡ್ಸೆ ಪ್ರತಿಮೆ ಸ್ಥಾಪನೆ)
ಇದಕ್ಕಾಗಿ ಆರು ಸದಸ್ಯರ ಐಟಿ ತಂಡ ಕೆಲಸ ಮಾಡಲಿದೆ. ಬಲಿದಾನ ದಿನಾಚರಣೆಯ ಅಂಗವಾಗಿ ಸದಸ್ಯರು ದೇಶದ ವಿವಿದೆಡೆ ಇರುವ 120 ಕಚೇರಿಗಳಲ್ಲಿ ಕಾರ್ಯಕ್ರಮವನ್ನ ನಡೆಸಿದ್ದಾರೆಂದು ಮಹಾಸಭಾ ಸಮಿತಿಯು ತಿಳಿಸಿದೆ.
ಗೋಡ್ಸೆ ಒಬ್ಬ ನರಹಂತಕ, ಸಮಾಜ ಘಾತುಕ ಆತನನ್ನು ಗೌರವಿಸುವುದು, ಸನ್ಮಾನಿಸುವುದು, ಗೋಡ್ಸೆ ಶೌರ್ಯ ದಿನವನ್ನಾಗಿ ಆಚರಿಸುವುದಕ್ಕೆ ನಮ್ಮ ವಿರೋಧವಿದೆ ಎಂದು RSSನ ಹಿರಿಯ ನಾಯಕ ಎಂ ಜಿ ವೈದ್ಯ ಹೇಳಿದ್ದಾರೆ.
ಗೋಡ್ಸೆಯನ್ನು ಗೌರವಿಸುವುದು, ಗಾಂಧಿಯನ್ನು ಕೊಂದಾತನಿಗೆ ಮರ್ಯಾದೆ ಕೊಡುವುದಕ್ಕೆ ನಮ್ಮ ಸಮ್ಮತವಿಲ್ಲ. ಕೊಲ್ಲುವ ಅಧಿಕಾರ ಯಾರಿಗೂ ಇಲ್ಲ, ಹಾಗಾಗಿ ಗೋಡ್ಸೆ ಕೃತ್ಯ ಸರಿಯಾದುದಲ್ಲ ಎಂದು ವೈದ್ಯ ಸ್ಪಷ್ಟ ಪಡಿಸಿದ್ದಾರೆ.
ಗೋಡ್ಸೆ ವೆಬ್ಸೈಟ್ ವಿಳಾಸಕ್ಕೆ ಇಲ್ಲಿ ಕ್ಲಿಕ್ಕಿಸಿ