ಕಾಂಗ್ರೆಸ್ ರಕ್ತದಲ್ಲಿ ಕೃಷಿ ಮಾಡುತ್ತಿದೆ: ಕೃಷಿ ಸಚಿವರ ಆರೋಪ
ನವದೆಹಲಿ, ಫೆಬ್ರವರಿ 5: ಪ್ರತಿಭಟನೆ ನಡೆಸುತ್ತಿರುವ ರೈತರ ಅಹವಾಲುಗಳನ್ನು ಕೇಳಲು ಕೇಂದ್ರ ಸರ್ಕಾರ ಸಿದ್ಧವಿದೆ. ಆದರೆ ಅದು ಮೂರು ಕಾಯ್ದೆಗಳಲ್ಲಿ ಸಮಸ್ಯೆ ಇದೆ ಎಂದು ಅರ್ಥವಲ್ಲ ಎಂಬುದಾಗಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಶುಕ್ರವಾರ ರಾಜ್ಯಸಭೆಯಲ್ಲಿ ಹೇಳಿದರು.
ರಾಜ್ಯಸಭೆಯಲ್ಲಿ ವಿರೋಧಪಕ್ಷಗಳ ವಿರುದ್ಧ ಕಿಡಿಕಾರಿದ ತೋಮರ್, ಮೂರು ಕೃಷಿ ಕಾಯ್ದೆಗಳಲ್ಲಿ ಒಂದೇ ಒಂದು ಲೋಪ ಇರುವುದನ್ನು ತೋರಿಸಲು ವಿರೋಧಪಕ್ಷಗಳು ಮತ್ತು ರೈತ ಒಕ್ಕೂಟಗಳಿಗೆ ಸಾಧ್ಯವಾಗಿಲ್ಲ ಎಂದರು.
ಕಾಂಗ್ರೆಸ್ ಹೆಸರು ಹೇಳಿಕೊಂಡು ಎಷ್ಟು ಸಮಯ ಉಳಿಯುತ್ತೀರಿ?: ಸರ್ಕಾರಕ್ಕೆ ಖರ್ಗೆ ತರಾಟೆ
'ಕೃಷಿ ಮಾಡಲು ನೀರು ಅಗತ್ಯ ಎನ್ನುವುದು ಎಲ್ಲರಿಗೂ ತಿಳಿದಿದೆ. ಆದರೆ ಕಾಂಗ್ರೆಸ್ ಮಾತ್ರ ರಕ್ತದಲ್ಲಿ ಕೃಷಿ ಮಾಡುತ್ತಿದೆ. ಬಿಜೆಪಿ ಎಂದಿಗೂ ಹಾಗೆ ಮಾಡುವುದಿಲ್ಲ. ಮೋದಿ ಸರ್ಕಾರವು ರೈತರ ಕಲ್ಯಾಣಕ್ಕಾಗಿ ಬದ್ಧವಾಗಿದೆ. ನಾವು ನಮ್ಮ ಪ್ರತಿಷ್ಠೆಯ ಮೇಲೆ ನಿಂತಿಲ್ಲ. ಈ ಕಾನೂನಿನಲ್ಲಿ ಕರಾಳ ಎನ್ನುವುದು ಯಾವುದು ಇದೆ ಎಂದು ಕೇಳುತ್ತಿದ್ದೇವೆ. ಅದನ್ನು ಯಾರೂ ತೋರಿಸಲು ಮುಂದೆ ಬರುತ್ತಿಲ್ಲ' ಎಂದು ಅವರು ಹೇಳಿದರು. ಮುಂದೆ ಓದಿ.
ಒಂದು ರಾಜ್ಯಕ್ಕೆ ಪ್ರತಿಭಟನೆ ಸೀಮಿತ
ಸರ್ಕಾರವು ತಿದ್ದುಪಡಿಗಳನ್ನು ಮಾಡಲು ಸಿದ್ಧವಿದೆ ಎಂದರೆ ಕೃಷಿ ಕಾಯ್ದೆಗಳಲ್ಲಿ ಯಾವುದೇ ಸಮಸ್ಯೆ ಇದೆ ಎಂದು ಅರ್ಥವಲ್ಲ. ನಿರ್ದಿಷ್ಟ ರಾಜ್ಯವೊಂದರ ಜನರಿಗೆ ತಪ್ಪು ಮಾಹಿತಿ ನೀಡಲಾಗಿದೆ. ಕೃಷಿ ಕಾಯ್ದೆ ವಿರುದ್ಧದ ಪ್ರತಿಭಟನೆ ಒಂದೇ ಒಂದು ರಾಜ್ಯಕ್ಕೆ ಸೀಮಿತವಾಗಿದೆ ಎಂದರು.
ಅಂತಹ ನಿಯಮ ಇದ್ದರೆ ತೋರಿಸಿ
'ಈ ಕಾನೂನುಗಳು ಜಾರಿಯಾದರೆ ಬೇರೆಯವರು ತಮ್ಮ ಭೂಮಿಗಳನ್ನು ಆಕ್ರಮಿಸಿಕೊಳ್ಳಬಹುದು ಎಂದು ಹೇಳುವ ಮೂಲಕ ರೈತರನ್ನು ದಿಕ್ಕುತಪ್ಪಿಸಲಾಗುತ್ತಿದೆ. ಯಾವುದೇ ರೈತರ ಭೂಮಿಯನ್ನು ಯಾವುದೇ ವ್ಯಾಪಾರಿಯು ಕಿತ್ತುಕೊಳ್ಳಲು ಅನುಕೂಲ ಮಾಡಿಕೊಡುವಂತಹ ಒಂದೇ ಒಂದು ನಿಯಮ ಒಪ್ಪಂದ ಕೃಷಿ ಕಾಯ್ದೆಯಲ್ಲಿ ಇದ್ದರೆ ತಿಳಿಸಿ' ಎಂದು ಸವಾಲು ಹಾಕಿದರು.
Chakka Jam: ಕೇಂದ್ರ ಸರ್ಕಾರಕ್ಕೆ 'ಚೆಕ್' ಕೊಡುತ್ತಾ "ಛಕ್ಕಾ ಜಾಮ್"?
ರೈತರ ಕಲ್ಯಾಣಕ್ಕೆ ಬದ್ಧ
ಆತ್ಮನಿರ್ಭರ ಪ್ಯಾಕೇಜ್ ಅಡಿ ಒಂದು ಲಕ್ಷ ಕೋಟಿ ರೂಪಾಯಿ ಕೃಷಿ ಮೂಲ ಸೌಕರ್ಯ ನಿಧಿಯನ್ನು ಒದಗಿಸಲಾಗಿದೆ. ಕೃಷಿ ವಲಯಕ್ಕೆ ಅಗತ್ಯ ಪ್ರಮಾಣದ ಹೂಡಿಕೆ ತಲುಪುವಂತೆ ಮಾಡಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಹೊಸ ಕೃಷಿ ಕಾಯ್ದೆಗಳು ರೈತರ ಆದಾಯವನ್ನು ವೃದ್ಧಿಸಲು ಅನುಕೂಲಕರವಾಗಿವೆ. ರೈತರ ಕಲ್ಯಾಣಕ್ಕೆ ಮೋದಿ ಸರ್ಕಾರ ಬದ್ಧವಾಗಿದೆ ಎಂದು ಪುನರುಚ್ಚರಿಸಿದರು.
ರೈತರ ಬದುಕಲ್ಲಿ ಸಕಾರಾತ್ಮಕ ಬದಲಾವಣೆ
ರೈತರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುವುದರತ್ತ ನಾವು ಗಮನ ಹರಿಸಿದ್ದೇವೆ. ತರಕಾರಿ ಮತ್ತು ಹಣ್ಣುಗಳನ್ನು ರೈಲಿನಲ್ಲಿ ಸಾಗಣೆ ಮಾಡಲಾಗುತ್ತದೆ ಎಂದು ಯಾರು ಯೋಚಿಸಿದ್ದರು? ಮೊಬೈಲ್ ಕೋಲ್ಡ್ ಸ್ಟೋರೇಜ್ ಉಳ್ಳ 100ಕಿಸಾನ್ ರೈಲುಗಳನ್ನು ಶುರುಮಾಡಲಾಗಿದೆ. ಇವು ರೈತರು ತಮ್ಮ ಉತ್ಪನ್ನಕ್ಕೆ ಸೂಕ್ತ ಬೆಲೆ ಪಡೆಯಲು ಸಹಾಯಕವಾಗಿವೆ ಎಂದು ತಿಳಿಸಿದರು.