ಮೋದಿ : ಒಬ್ಬ ವ್ಯಕ್ತಿ, ಒಂದೇ ಮಾತು, ವಿಭಿನ್ನ ಅವತಾರ
ಬೆಂಗಳೂರು, ಫೆ. 22 : ದೇಶದಾದ್ಯಂತ ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಅಲೆ ಇದೆ ಎಂದು, ಬಿಜೆಪಿ ವಿರೋಧಿ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರೇ ಒಪ್ಪಿಕೊಂಡಿದ್ದಾರೆ. ಮಾತಿನ ಮೋಡಿ ಮಾಡುತ್ತ ಜನರನ್ನು ಸೆಳೆಯುತ್ತಿರುವ ರಂಗುರಂಗಿನ ಮನುಷ್ಯ ಅಂದ್ರೆ ಅದು ಮೋದಿ ಒಬ್ಬರೇ. ಆದರೆ, ಕಾಂಗ್ರೆಸ್ ನಾಯಕರು ಮಾತ್ರ ಒಪ್ಪಿಕೊಳ್ಳಲು ತಯಾರಿಲ್ಲ. ಹೇಗೆ ಒಪ್ಪಿಕೊಳ್ಳುತ್ತಾರೆ ಹೇಳಿ?
ಫೆಬ್ರವರಿ 28ರಂದು ಹುಬ್ಬಳ್ಳಿಗೂ ಬರುತ್ತಿರುವ ನರೇಂದ್ರ ಮೋದಿ ಅವರು ದೇಶದ ಉದ್ದಗಲಕ್ಕೂ ಸಂಚರಿಸುತ್ತ, ವಿಶಿಷ್ಟ ಶೈಲಿಯಲ್ಲಿ ಭಾಷಣಗಳನ್ನು ಬಿಗಿಯುತ್ತ ತಮ್ಮ ಛಾಪು ಮೂಡಿಸುತ್ತ ಸಾಗುತ್ತಿದ್ದಾರೆ. ಎಲ್ಲೆಲ್ಲೂ ಅವರದೇ ಸುದ್ದಿ. ಅವರು ಡಿಸೈನರ್ ಕುರ್ತಾ ತೊಟ್ಟರೂ ಸುದ್ದಿ, ವಿಶಿಷ್ಟ ಜಾಕೆಟ್ ತೊಟ್ಟರೂ ಸುದ್ದಿ. ಇನ್ನು ಹೋದಲ್ಲೆಲ್ಲ ಅಭಿಮಾನಿಗಳು ತೊಡಿಸುವ ವಿಭಿನ್ನ ಬಗೆಯ ಟೋಪಿ ತೊಟ್ಟರೆ ಸುದ್ದಿ ಮಾಡದೆ ಇರಲಾಗುತ್ತದಾ?
ಬೆಂಗಳೂರಿಗೇ ಬರಲಿ, ತುಮಕೂರಿಗೇ ಹೋಗಲಿ, ಗೌಹಾತಿಗೆ ಭೇಟಿ ನೀಡಲಿ, ಅರುಣಾಚಲ ಪ್ರದೇಶದಲ್ಲಿ ಮಾತಿನ ಮೋಡಿ ಮಾಡಲಿ... ಆಯಾ ಪ್ರದೇಶಕ್ಕೆ ತಕ್ಕಂತೆ ವೇಷ ತೊಟ್ಟು, ಆಯಾ ಪ್ರದೇಶದ ಮಾತುಗಳನ್ನಾಡುತ್ತ, ನೇರವಾಗಿ ಅವರ ಹೃದಯಕ್ಕೆ ಲಗ್ಗೆ ಇಡುತ್ತಿರುವ ನರೇಂದ್ರ ಮೋದಿ ಅವರು ಜನರನ್ನು ಅಪಾರ ಪ್ರಮಾಣದಲ್ಲಿ ಸೆಳೆಯುತ್ತಿದ್ದಾರೆ ಎಂದರೆ ಸುಳ್ಳಾಗದು. ಇಂಥದೊಂದು ಆಕ್ಟಿವಿಸಂ ಇತರ ನಾಯಕರಲ್ಲಿ ಕಾಣಸುತ್ತಿಲ್ಲ ಎಂಬುದು ವಿಪರ್ಯಾಸ.
ದೇಶ ಉಳಿಸಿ ಎಂಬ ಕರೆಯೊಂದಿಗೆ ಅವರು ಮಾಡುತ್ತಿರುವ ಪ್ರಖರ ಭಾಷಣಗಳು ಮಾತ್ರ ಸುದ್ದಿಪುಟಗಳನ್ನು ಸೇರುತ್ತಿಲ್ಲ, ಅವರಿಗೆ ತೊಡಿಸಲಾಗುತ್ತಿರುವ ಪೇಟ, ಟೋಪಿ, ಪಗಡಾ, ಮುಂಡಾಸುಗಳು ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. 'ಒಬ್ಬ ವ್ಯಕ್ತಿ, ಒಂದೇ ಮಾತು, ವಿಭಿನ್ನ ಅವತಾರಗಳು' ಎಂಬ ಅವರ ಮಾತೇ ಅವರಿಗೆ ಅನ್ವರ್ಥಕವಾಗಿದೆ. ಮೋದಿಯವರು ಯಾವ ಪ್ರದೇಶಕ್ಕೆ ಹೋಗಿದ್ದಾಗ ಎಂಥ ಪೇಟ ಅಥವಾ ಮುಂಡಾಸು ತೊಟ್ಟಿದ್ದರು ಎಂಬುದು ಈ ಚಿತ್ರಗಳಲ್ಲಿವೆ ನೋಡಿರಿ.
ದಾವಣಗೆರೆಯಲ್ಲಿ ಕೇಸರಿ ಪೇಟ ತೊಟ್ಟ ಮೋದಿ
ದಾವಣಗೆರೆಯಲ್ಲಿ ಫೆ.18ರಂದು ನಡೆದ ಸಮಾವೇಶದಲ್ಲಿ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಜೊತೆ ಉಭಯ ಕುಶಲೋಪರಿ ನಡೆಸುತ್ತಿರುವ ನರೇಂದ್ರ ಮೋದಿ, ಪ್ರೀತಿಯನ್ನು ಬಡ್ಡಿ ಸಮೇತ ಹಿಂದಿರುಗಿಸುವುದಾಗಿ ವಾಗ್ದಾನ ಮಾಡಿದ್ದಾರೆ.
ವಿಶಿಷ್ಟ ಟರ್ಬಾನ್ ನಲ್ಲಿ ನರೇಂದ್ರ ಮೋದಿ
ಶುಕ್ರವಾರ ಅಹ್ಮದಾಬಾದ್ ನಲ್ಲಿ ಗೃಹ ಕೈಗಾರಿಕೆ ಮೇಳದಲ್ಲಿ ವಿಶಿಷ್ಟ ಟರ್ಬಾನ್ ತೊಟ್ಟಿರುವ ನರೇಂದ್ರ ಮೋದಿ.
ಮಂಗಳೂರಿನಲ್ಲಿ ಕೇಸರಿ ಪೇಟದಲ್ಲಿ ಮೋದಿ
ಮಂಗಳೂರಿನಲ್ಲಿ ನಡೆದ ಭಾರತ ಗೆಲ್ಲಿಸಿ ಅಭಿಯಾನದಲ್ಲಿ ಕೇಸರಿ ಪೇಟ ತೊಟ್ಟು, ಯಕ್ಷಗಾನದ ಸ್ಮರಣಿಕೆ ಹಿಡಿದಿರುವ ನರೇಂದ್ರ ಮೋದಿ.
ಹೇಗಿದೆ ಈ ಟೋಪಿ?
ಅರುಣಾಚಲ ಪ್ರದೇಶವನ್ನು ಭಾರತದ ಸ್ವಿಟ್ಜರ್ ಲೆಂಡ್ ಎಂದು ಬಣ್ಣಿಸಿದ ಮೋದಿ ಅವರು ಅಲ್ಲಿಯ ಪ್ರದೇಶಿಕ ಸೌಂದರ್ಯವನ್ನು ಸೂಸುವ ಟೋಪಿಯನ್ನು ತೊಟ್ಟು ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು.
ಚೆನ್ನೈನಲ್ಲಿ ಮೋದಿ ಟೋಪಿಯಲ್ಲಿ ನವಿಲುಗರಿ
ಚೆನ್ನೈ ಬಳಿಯ ವಂಡಲೂರ್ ನಲ್ಲಿ ನಡೆದ ಸಮಾವೇಶದಲ್ಲಿ ನವಿಲುಗರಿ ಇರುವ ಟೋಪಿಯನ್ನು ತೊಟ್ಟಿರುವ ನರೇಂದ್ರ ಮೋದಿ ಅವರಿಗೆ ಬೃಹತ್ ಪುಷ್ಪಮಾಲೆಯಿಂದ ಸನ್ಮಾನ.
ಇಂಫಾಲ ಸೊಗಡಿನ ವಿಶಿಷ್ಟ ಟೋಪಿ
ಇಷ್ಟೊಂದು ಬಗೆಬಗೆಯ ಟೋಪಿ ತೊಟ್ಟ ಇನ್ನೊಬ್ಬ ರಾಜಕಾರಣಿ ಭಾರತದಲ್ಲಿರಲಿಕ್ಕಿಲ್ಲ. ನರೇಂದ್ರ ಮೋದಿ ಅವರಿಗೆ ಪ್ರಧಾನಿ 'ಟೋಪಿ' ಧರಿಸುವುದೊಂದು ಬಾಕಿಯಿದೆ.
ಹಿಮಾಚಲ ಪ್ರದೇಶದಲ್ಲಿ ಮೋದಿ
ಟೋಪಿ ಎಂಥದ್ದು ತೊಟ್ಟರೇನಂತೆ? ಬೆಲೆ ಇರಬೇಕಾದದ್ದು ಅವರ ಮಾತುಗಳಿಗೆ, ಅವರ ಕೃತಿಗಳಿಗೆ ಅಲ್ಲವೆ? ಹಿಮಾಚಲ ಪ್ರದೇಶದಲ್ಲಿ ವಿಶಿಷ್ಟ ಟೋಪಿ ತೊಟ್ಟು ಕಂಗೊಳಿಸುತ್ತಿರುವ ಮೋದಿ.
ಆಸ್ಸಾಂನ 'ಜಾಪಿ' ಟೋಪಿ ತೊಟ್ಟ ಮೋದಿ
ಆಸ್ಸಾಂನ ಗೌಹಾತಿಯಲ್ಲಿ ನಡೆದ ಮಹಾಜಾಗರಣ ಸಮಾವೇಶದಲ್ಲಿ, ಅಲ್ಲಿಯ ವಿಶೇಷ 'ಜೋಪಿ' ಟೋಪಿ ತೊಟ್ಟ ಮೋದಿ ಅಭಿಮಾನಿಗಳತ್ತ ಅಭಿಮಾನದಿಂದ ಕೈಬೀಸುತ್ತಿರುವುದು.
ಭಾರತ್ ಬಿಕಾಸ್ ಸಮಾಬೇಶ್ ದಲ್ಲಿ ಮೋದಿ
ಆಸ್ಸಾಂ ರಾಜ್ಯದ ರಾಮನಗರದಲ್ಲಿರುವ ಸಿಲ್ಚಾರ್ ನಲ್ಲಿ ಶನಿವಾರ ನಡೆದ 'ಭಾರತ್ ಬಿಕಾಸ್ ಸಮಾಬೇಶ್'ನಲ್ಲಿ ಸ್ಥಳೀಯ ಪೇಟವನ್ನು ಧರಿಸಿದ್ದ ಮೋದಿ ಚೀನಾ ವಿರುದ್ಧ ಗುಡುಗಿದ್ದಾರೆ.
ಬುಡಕಟ್ಟು ಜನಾಂಗದ ಡುಮ್ಲಕ್ ಪೇಟ
ಅರುಣಾಚಲ ಪ್ರದೇಶದ ಪೂರ್ವ ಸಿಯಾಂಗ್ ಜಿಲ್ಲೆಯಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶದಲ್ಲಿ ಆದಿ ಬುಡಕಟ್ಟು ಜನಾಂಗ ಧರಿಸುವ ಡುಮ್ಲಕ್ ಪೇಟ ಧರಿಸಿರುವ ನರೇಂದ್ರ ಮೋದಿ.