ಗೋಧ್ರಾ ಹಿಂಸಾಚಾರಕ್ಕೆ ಮೋದಿ ಕಾರಣ ಅಲ್ಲ: ರಾಜ್ದೀಪ್ ಸರ್ದೇಸಾಯಿ ಅಚ್ಚರಿಯ ಹೇಳಿಕೆ
ನವದೆಹಲಿ, ಏಪ್ರಿಲ್ 26: ಗುಜರಾತ್ನ ಗೋಧ್ರಾದಲ್ಲಿ 2002ರಲ್ಲಿ ನಡೆದ ಹಿಂಸಾಚಾರದ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಕಾರಣರಲ್ಲ ಎಂದು ಹಿರಿಯ ಪತ್ರಕರ್ತ ರಾಜ್ದೀಪ್ ಸರ್ದೇಸಾಯಿ ಹೇಳಿದ್ದಾರೆ.
ಪ್ರಧಾನಿ ಮೋದಿ ಮತ್ತು ಬಿಜೆಪಿಯ ಕಟು ಟೀಕಾಕಾರರಾದ ರಾಜ್ದೀಪ್ ಸರ್ದೇಸಾಯಿ ಅವರ ಹೇಳಿಕೆ ಅಚ್ಚರಿ ಮೂಡಿಸಿದೆ. ಕರಸೇವಕರಿದ್ದ ರೈಲಿಗೆ ಬೆಂಕಿ ಹಚ್ಚಿದ ಘಟನೆ ಬೆನ್ನಲ್ಲೇ ಗುಜರಾತ್ನಲ್ಲಿ ನಡೆದ ಹಿಂಸಾಚಾರದ ಭೀಕರ ಘಟನೆಗೆ ಆಗ ಗುಜರಾತ್ನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರೇ ಕಾರಣ ಎಂದು ಅವರ ವಿರೋಧಿಗಳು ಆರೋಪಿಸಿದ್ದರು. ರಾಜ್ದೀಪ್ ಸರ್ದೇಸಾಯಿ ಕೂಡ ವಿರುದ್ಧ ಗೋಧ್ರಾ ದುರಂತಕ್ಕೆ ಸಂಬಂಧಿಸಿದಂತೆ ಮೋದಿ ಅವರ ವಿರುದ್ಧ ಹರಿಹಾಯ್ದಿದ್ದರು.
ಲೇಖಕ-ಪತ್ರಕರ್ತ ಮನು ಜೋಸೆಫ್ ಅವರು ನಡೆಸಿದ ಸಂದರ್ಶನದಲ್ಲಿ ರಾಜ್ದೀಪ್ ಸರ್ದೇಸಾಯಿ ಅವರು ಸಾಬರಮತಿ ಎಕ್ಸ್ಪ್ರೆಸ್ ರೈಲಿಗೆ ಬೆಂಕಿ ಹಚ್ಚಿದ ಘಟನೆ ಬಳಿಕ ನಡೆದ ಗೋಧ್ರಾ ಹಿಂಸಾಚಾರ, ಹತ್ಯಾಕಾಂಡಕ್ಕೆ ಮೋದಿ ಅವರು ಹೊಣೆಗಾರರಲ್ಲ ಎನ್ನುವುದು ತಮ್ಮ ವೈಯಕ್ತಿಕ ನಂಬಿಕೆ ಎಂದಿದ್ದಾರೆ.
ಗೋಧ್ರಾ ಬೆಂಕಿ ಪ್ರಕರಣ: ಆರೋಪಿ ಯಾಕೂಬ್ಗೆ ಜೀವಾವಧಿ ಶಿಕ್ಷೆ
'ಗಲಭೆಗೆ ಮೋದಿ ಅಥವಾ ಇನ್ನಾರನ್ನಾದರೂ ಹೊಣೆಗಾರರನ್ನಾಗಿ ಮಾಡುವುದು ನ್ಯಾಯಸಮ್ಮತವಲ್ಲ. ಅವರು ಹಿಂಸೆಗೆ ಕರೆ ನೀಡಿರಲಿಲ್ಲ ಅಥವಾ ಅದಕ್ಕೆ ಪ್ರಚೋದನೆ ನೀಡಿರಲಿಲ್ಲ' ಎಂದು ಸರ್ದೇಸಾಯಿ ಹೇಳಿದ್ದಾರೆ ಎಂಬುದಾಗಿ ಸಂದರ್ಶನದ ಕೆಲವು ಅಂಶಗಳನ್ನು ಪ್ರಕಟಿಸಿರುವ 'ಓಪಿ ಇಂಡಿಯಾ' ವರದಿ ತಿಳಿಸಿದೆ.
ಗುಜರಾತ್ ಹಿಡಿತ ಮೋದಿ ಬಳಿ ಇರಲಿಲ್ಲ
ಮೋದಿ ಅವರು ಗಲಭೆಯನ್ನು ತಡೆಯಲು ಪ್ರಯತ್ನಿಸದೆಯೇ ಸುಮ್ಮನಾಗಿದ್ದರು ಎಂದಿದ್ದಾರೆ. ಮೋದಿ ಅವರು 2002ರಲ್ಲಿ ಆಗಷ್ಟೇ ಅಧಿಕಾರಕ್ಕೆ ಬಂದಿದ್ದರು. ಆಗ ಗುಜರಾತ್ ರಾಜ್ಯದ ಹಿಡಿತ ಅವರ ಕೈಯಲ್ಲಿ ಇರಲಿಲ್ಲ. ಅದು ನಿಜವಾಗಿ ವಿಎಚ್ಪಿ ನಾಯಕ ಪ್ರವೀಣ್ ತೊಗಾಡಿಯಾ ಅವರ ಹಿಡಿತದಲ್ಲಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಿಲ್ಕಿಸ್ ಬಾನೊಗೆ 50 ಲಕ್ಷ ಪರಿಹಾರ ನೀಡಲು ಗುಜರಾತ್ ಸರಕಾರಕ್ಕೆ ಸುಪ್ರೀಂ ಆದೇಶ
ಮೋದಿ ಪವರ್ಫುಲ್ ಆಗಿರಲಿಲ್ಲ
ಜನರು ಅಂದುಕೊಂಡಿರುವಷ್ಟು ಮೋದಿ ಶಕ್ತಿಶಾಲಿಯಾಗಿರಲಿಲ್ಲ. 2002ರ ಗಲಭೆ ಸಂದರ್ಭದಲ್ಲಿ ಪ್ರವೀಣ್ ತೊಗಾಡಿಯಾ ಮುಂಚೂಣಿಯಲ್ಲಿದ್ದಿದ್ದರಿಂದ ಮೋದಿ ಹಿಂದಕ್ಕೆ ಉಳಿದಿದ್ದರು. ಯಾವಾಗಲೂ ಹಿಂಸಾಚಾರದಲ್ಲಿ ರಾಜಕೀಯ ಲಾಭಗಳು ಇರುತ್ತವೆ ಎಂದ ರಾಜ್ದೀಪ್, 2002ರ ಘಟನೆ ಬಳಿಕ ಮೋದಿ ಅವರು ರಾಜಕೀಯ ಲಾಭ ಪಡೆದುಕೊಂಡಿದ್ದರು ಎಂದು ಪರೋಕ್ಷವಾಗಿ ಹೇಳಿದ್ದಾರೆ.
2002ರ ಗೋಧ್ರಾ ರೈಲಿಗೆ ಬೆಂಕಿಹಚ್ಚಿದ ಕೇಸ್,ಇಬ್ಬರಿಗೆ ಜೀವಾವಧಿ ಶಿಕ್ಷೆ
ಮಾಧ್ಯಮಗಳ ವರದಿ ಬಗ್ಗೆ ವಿಷಾದ
ಮಾಧ್ಯಮಗಳಲ್ಲಿ ಗಲಭೆಯ ಕುರಿತು ಮಾಡಿದ ವರದಿಗಳ ರೀತಿಯ ಕುರಿತು ವಿಷಾದ ವ್ಯಕ್ತಪಡಿಸಿದ ಅವರು, ಗುಜರಾತ್ ಹಿಂಸಾಚಾರವನ್ನು ಮಾಧ್ಯಮಗಳು ವೈಭವೀಕರಿಸಿದವು ಎಂದು ಒಪ್ಪಿಕೊಂಡರು. ಗಲಭೆಯಂತಹ ಸೂಕ್ಷ್ಮ ಘಟನೆಗಳನ್ನು ವರದಿ ಮಾಡುವ ಸಂದರ್ಭದಲ್ಲಿ ಮಾಧ್ಯಮಗಳು ಸ್ವಯಂ ಸೆನ್ಸಾರ್ಶಿಪ್ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
ರಕ್ತ ಅಂಟಿಕೊಂಡಿದೆ ಎಂದಿದ್ದರು
ಇತ್ತೀಚಿನವರೆಗೂ ರಾಜ್ದೀಪ್ ಸರ್ದೇಸಾಯಿ ಅವರು ಗುಜರಾತ್ ಹಿಂಸಾಚಾರದ ಘಟನೆಗೆ ಬಿಜೆಪಿ ಮತ್ತು ಮೋದಿ ಕಾರಣ ಎಂಬ ವಾದವನ್ನು ಮುಂದಿಡುತ್ತಿದ್ದರು. 2009ರಲ್ಲಿ ಟ್ವೀಟ್ ಮಾಡಿದ್ದಾಗ ಅವರು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ತಮ್ಮ ಕೈಗಳಲ್ಲಿ ರಕ್ತ ಅಂಟಿಕೊಂಡಿವೆ ಎಂದಿದ್ದರು. 2002ರ ಗಲಭೆಗೆ ಬಿಜೆಪಿ ಕ್ಷಮೆ ಕೋರಬೇಕು ಎಂದೂ ಅವರು ಆಗ್ರಹಿಸಿದ್ದರು. ಈಗ ಮೋದಿ ಅವರು ಘಟನೆಗೆ ಕಾರಣರಲ್ಲ ಎಂದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
|
ತಪ್ಪು ಒಪ್ಪಿಕೊಳ್ಳಬೇಕು ಎಂದಿದ್ದ ರಾಜ್ದೀಪ್
ರಾಹುಲ್ ಮತ್ತು ಕಾಂಗ್ರೆಸ್ಸಿಗರು 1992ರ ಅಯೋಧ್ಯಾ ಗಲಭೆಗೂ ಮುನ್ನ 1984ರಲ್ಲಿ ನಡೆದ ಸಿಖ್ಖರ ಹತ್ಯಾಕಾಂಡ ಅತ್ಯಂತ ಭೀಕರ ಎಂಬುದನ್ನು ಒಪ್ಪಿಕೊಳ್ಳಬೇಕು. ಹಾಗೆಯೇ 2002ರ ಘಟನೆಯನ್ನು ಬಿಜೆಪಿ ಒಪ್ಪಿಕೊಳ್ಳಬೇಕು. ನಮ್ಮ ಮಹಾನ್ ಸಂತರ ಮಾತಗಳನ್ನು ಆಲಿಸಿ, ಸತ್ಯವನ್ನು ಒಪ್ಪಿಕೊಳ್ಳುವುದು ಮತ್ತು ಕ್ಷಮೆ ಕೋರುವುದು ಪಾಪದಿಂದ ಮುಕ್ತಿಗೊಳ್ಳುವ ಮೊದಲ ಹಂತ ಎಂದು ಅವರು 2018ರಲ್ಲಿ ಟ್ವೀಟ್ ಮಾಡಿದ್ದರು.