ಸಂವಿಧಾನಕ್ಕೆ, ಸಿಜೆಐಗೆ, ಜನತೆಗೆ ಅವಮಾನ ಮಾಡಿದ್ದಾರೆ ಮೋದಿ: ರಾಹುಲ್
ನವದೆಹಲಿ, ಅಕ್ಟೋಬರ್ 25: ತಮ್ಮ ಭ್ರಷ್ಟಾಚಾರ ಬಯಲಾಗುವುದನ್ನು ತಡೆಯಲು ನರೇಂದ್ರ ಮೋದಿ ಅವರು ಅಸಾಂವಿಧಾನಿಕವಾಗಿ ಸಿಬಿಐ ನಿರ್ದೇಶಕರನ್ನು ಬಲವಂತದಿಂದ ರಜೆ ಮೇಲೆ ಕಳಿಸಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಫೆಲ್ ತನಿಖೆ ಮಾಡುತ್ತಿದ್ದ ಸಿಬಿಐ ನಿರ್ದೇಶಕರನ್ನು ಮೋದಿ ಅವರು ತಮ್ಮ ಶಕ್ತಿ ಉಪಯೋಗಿಸಿ ನಿಯಮಬಾಹಿರವಾಗಿ ರಾತ್ರಿ 2 ಗಂಟೆ ಸಮಯದಲ್ಲಿ ಸಿಬಿಐ ನಿರ್ದೇಶಕರನ್ನು ರಜೆ ಮೇಲೆ ಕಳಿಸಿದ್ದಾರೆ ಎಂದು ರಾಹುಲ್ ಹೇಳಿದರು.
ಮೋದಿಗೆ ಸಂಚಕಾರ ತರಲಿದ್ದ ಕೇಸುಗಳ ತನಿಖೆ ಮಾಡುತ್ತಿದ್ದ ಅಲೋಕ್ ಕುಮಾರ್
ಸಿಬಿಐ ನಿರ್ದೇಶಕರನ್ನು ನೇಮಿಸುವ ಹಾಗೂ ತೆರವು ಮಾಡುವ ಅಧಿಕಾರ ಮುಖ್ಯ ನ್ಯಾಯಮೂರ್ತಿಗೆ, ವಿರೋಧ ಪಕ್ಷ ನಾಯಕರಿಗೆ ಹಾಗೂ ಪ್ರಧಾನಿ ಮೂವರಿಗೆ ಇದೆ. ಆದರೆ ಅಲೋಕ್ ವರ್ಮಾ ವಿಚಾರದಲ್ಲಿ ಮೋದಿ ಅಸಾಂವಿಧಾನಿಕವಾಗಿ ನಡೆದುಕೊಂಡಿದ್ದಾರೆ. ನಿಯಮ ಮುರಿದಿದ್ದಾರೆ. ತಾವು ಸಿಕ್ಕಿಹಾಕಿಕೊಳ್ಳುವ ಭಯದಿಂದ ಅವರು ಹೀಗೆ ಮಾಡಿದ್ದಾರೆ ಎಂದು ಹೇಳಿದರು.
ರಫೆಲ್ ತನಿಖೆ ಮಾಡುತ್ತಿದ್ದ ಸಿಬಿಐ
ಸಿಬಿಐ ನಿರ್ದೇಶಕ ಅಲೋಕ್ ವರ್ಮಾಗೆ ಯಶವಂತ್ ಸಿನ್ಹಾ, ಅರುಣ್ ಶೌರಿ ಮತ್ತು ಪ್ರಶಾಂತ್ ಭೂಷಣ್ ಅವರುಗಳು ರಫೆಲ್ ಡೀಲ್ ಬಗ್ಗೆ ದೂರು ನೀಡಿದ್ದರು.ಅದರಂತೆ ಅವರು ತನಿಖೆ ನಡೆಸಿ ವರದಿ ಮಾಡಿದ್ದರು. ಆದರೆ ರಾತ್ರಿ 2 ಗಂಟೆಗೆ ಸಿಬಿಐ ನಿರ್ದೇಶಕರನ್ನು ಹೊರದಬ್ಬಿದ ಕೇಂದ್ರ ಸರ್ಕಾರ, ಅವರ ಕೊಠಡಿಗೆ ಬೀಗ ಜಡಿದಿದೆ. ಅಲ್ಲಿದ್ದ ಮಹತ್ವದ ದಾಖಲೆಗಳನ್ನು ತೆಗೆದುಕೊಂಡು ಸಾಕ್ಷ ನಾಶ ಮಾಡಿದೆ ಎಂದು ಆರೋಪಿಸಿದರು.
ಭ್ರಷ್ಟಾಚಾರ ಮುಚ್ಚಿಕೊಳ್ಳಲು ಮೋದಿ ಯತ್ನ
ಮೋದಿ ಅವರು ತಮ್ಮ ಭ್ರಷ್ಟಾಚಾರವನ್ನು ಮುಚ್ಚಿಹಾಕಿಕೊಳ್ಳಲು ದೇಶದ ಎಲ್ಲಾ ಸರ್ಕಾರಿ ಸಂಸ್ಥೆಗಳನ್ನು ಬಳಸಿಕೊಳ್ಳಲಿದ್ದಾರೆ. ಆದರೆ ದೇಶದ ಜನರಿಗೆ ಸತ್ಯ ಅರಿವಾಗುತ್ತಿದೆ. ಅವರು ಎಷ್ಟೆ ಬಚಾವಾಗಲು ಯತ್ನಿಸಿದರೂ ಸಹ ಕಾಂಗ್ರೆಸ್ ಪಕ್ಷ ಅವರನ್ನು ಬಿಡುವುದಿಲ್ಲ ಎಂದು ಹೇಳಿದರು.
ಸಿಬಿಐ ಮುಖ್ಯಸ್ಥ ಅಲೋಕ್ ಮೇಲೆ ಕಣ್ಗಾವಲು ಸುದ್ದಿಗೆ ರೆಕ್ಕೆಪುಕ್ಕ!
ತಮ್ಮ ಕೈಗೊಂಬೆಯನ್ನು ನೇಮಿಸಿದ್ದಾರೆ
ನಿಷ್ಠಾವಂತ ಅಧಿಕಾರಿಯನ್ನು ಒತ್ತಾಯಪೂರ್ವಕವಾಗಿ ರಜೆ ಮೇಲೆ ಕಳಿಸಿ ಈಗ ಅದೇ ಸ್ಥಾನಕ್ಕೆ ತಮ್ಮ ಕೈಗೊಂಬೆಯನ್ನು ಮೋದಿ ತಂದು ಕೂರಿಸಿದ್ದಾರೆ. ಈಗಾಗಲೇ ಹಲವು ಪ್ರಕರಣಗಳು ಮೈಮೇಲಿರುವ ವ್ಯಕ್ತಿಯನ್ನು ಮೋದಿ ಅವರು ಸಿಬಿಐ ನಿರ್ದೇಶಕ ಸ್ಥಾನಕ್ಕೆ ತಂದು ಕೂರಿಸಿದ್ದಾರೆ. ತಮ್ಮ ಅಣತಿಯನ್ನು ಅವರಂತೆ ಆಡಿಸಲು ಹೀಗೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಗೂಢಾಚಾರಿಕೆ ಮಾಡುವುದು ಬಿಜೆಪಿ ಗುಣ
ಅಲೋಕ್ ಕುಮಾರ್ ಮನೆ ಬಳಿ ಗೂಡಾಚಾರಿಕೆ ಮಾಡುತ್ತಿದ್ದವರನ್ನು ಬಂಧಿಸಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್, ಅದು ಬಿಜೆಪಿಯವರ ಮಾಮೂಲಿ ಕಾರ್ಯಕ್ರಮ. ಅವರಿಗೆ ಯಾರ ಮೇಲೆ ಅನುಮಾನ ಇರುತ್ತದೆಯೋ ಅವರ ಮೇಲೆಲ್ಲಾ ಗೂಢಾಚಾರಿಕೆ ಮಾಡುತ್ತಾರೆ ಎಂದು ಹೇಳಿದರು.