ಇದು ದೇಶವಾಸಿಗಳಿಗಿಂತ ಕಣಿವೆ ಮಂದಿಯನ್ನೇ ಟಾರ್ಗೆಟ್ ಮಾಡಿದ ಭಾಷಣ
ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ನೀಡಲಾಗಿದ್ದ ವಿಶೇಷಾಧಿಕಾರವನ್ನು ಹಿಂಪಡೆದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಗುರುವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಇದು ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣ ಎಂಬುದಕ್ಕಿಂತ ಕಣಿವೆ ರಾಜ್ಯದ ಜನರಿಗೆ ವಿಶ್ವಾಸ ತುಂಬುವ ಪ್ರಯತ್ನದಂತೆ ಕಾಣಿಸುತ್ತಿದೆ.
ಜಮ್ಮು ಮತ್ತು ಕಾಶ್ಮೀರದ ಇತಿಹಾಸ, ನಡೆದ ಹಿಂಸಾಚಾರಗಳು, ಚುನಾವಣೆಗಳಲ್ಲಿ ಜನರ ಪಾಲ್ಗೊಳ್ಳುವಿಕೆ ಇಲ್ಲದಿರುವುದ, ಸಿನೆಮಾ ಶೂಟಿಂಗ್ಗೆ ಬಳಕೆಯಾಗುತ್ತಿದ್ದ ಗತದ ನೆನಪುಗಳು, ಭಯೋತ್ಪಾದಕರ ನುಸುಳುವಿಕೆ ಕುರಿತು ಮಾಹಿತಿ ನೀಡಿದ ಮುಸ್ಲಿಂ ಮೌಲ್ವಿ ಹೀಗೆ ನಾನಾ ಅಂಶಗಳನ್ನು ತಮ್ಮ ಭಾಷಣದ ಉದ್ದಕ್ಕೂ ಪ್ರಸ್ತಾಪಿಸಿದರು.
PM Modi Speech Today LIVE: ಜಮ್ಮು ಕಾಶ್ಮೀರ ತಾತ್ಕಾಲಿಕ ಕೇಂದ್ರಾಡಳಿತ ಪ್ರದೇಶ: ಮೋದಿ
ಜಮ್ಮು ಮತ್ತು ಕಾಶ್ಮೀರದ ಜನತೆಯನ್ನು 'ಜತೆಗೆ ಬನ್ನಿ' ಎಂದು ಆಹ್ವಾನ ನೀಡಿದ ಅವರು ಭವಿಷ್ಯದಲ್ಲಿ ಕಣಿವೆ ರಾಜ್ಯದಲ್ಲಿ ಪ್ರವಾಸೋದ್ಯಮವೂ ಸೇರಿದಂತೆ ಶಿಕ್ಷಣ ಸಂಸ್ಥೆಗಳು ಹಾಗೂ ಅಭಿವೃದ್ಧಿ ಪಥದ ವಿಚಾರವನ್ನು ಮುಂದಿಟ್ಟರು.
"ನಿಮಗೆ ಗಾಬರಿ ಅನ್ನಿಸಬಹುದು, ದಶಕಗಳ ಕಾಲ ಜಮ್ಮು ಮತ್ತು ಕಾಶ್ಮೀರದಲ್ಲಿ ಮತದಾನದ ಹಕ್ಕನ್ನು ಪಡೆದ ಕೋಟ್ಯಾಂತರ ಮಂದಿ ಚುನಾವಣೆಗಳಲ್ಲಿ ಮತದಾನವನ್ನೇ ಮಾಡಿಲ್ಲ. ಚುನಾವಣೆಗಳಲ್ಲಿ ಸ್ಪರ್ಧಿಸಲೂ ಹುಮ್ಮಸ್ಸು ತೋರಲಿಲ್ಲ. ಭಾರತ ಪಾಕ್ ವಿಭಜನೆ ನಂತರ ಇರುವ ಭಾರತದ ಜತೆ ಬಂದವರು. ಜತೆಗೆ ಎಂಬ ಅನ್ಯಾಯ ಮುಂದುವರಿತಾ?,'' ಎಂದು ಪ್ರಧಾನಿ ಮೋದಿ ಪ್ರಸ್ತಾಪಿಸಿದರು.
"ಇಡೀ ಜಗತ್ತಿನಲ್ಲಿ ಜಮ್ಮು ಕಾಶ್ಮೀರ ದೊಡ್ಡ ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆಯುವ ಎಲ್ಲಾ ಸಾಮರ್ಥ್ಯವನ್ನು ಹೊಂದಿದೆ. ಒಂದು ಕಾಲದಲ್ಲಿ ಬಾಲಿವುಡ್ ಸಿನೆಮಾ ನಿರ್ಮಾಣಕ್ಕೆ ಇದು ನೆಚ್ಚಿನ ತಾಣವಾಗಿತ್ತು. ನನಗೆ ಭರವಸೆ ಇದೆ, ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಸಿನೆಮಾಗಳೂ ಇಲ್ಲಿ ನಿರ್ಮಾಣವಾಗಲಿವೆ,'' ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ನಿರ್ದಿಷ್ಟ ಕಾಲಾವಧಿಗೆ ಮಾತ್ರವೇ ಕೇಂದ್ರಾಡಳಿತ ಪ್ರದೇಶವಾಗಿ ಇಡಲಾಗುವುದು ಎಂಬ ವಿಚಾರವನ್ನೂ ತಿಳಿಸಿದರು. "ಜಮ್ಮು ಮತ್ತು ಕಾಶ್ಮೀರವನ್ನು ನಿರ್ದಿಷ್ಟ ಕಾಲಾವಧಿಗೆ ಕೇಂದ್ರಾಡಳಿ ಪ್ರದೇಶವಾಗಿ ಘೋಷಿಸುವುದು ನಾವು ಹಲವು ಸುತ್ತಿನ ಚರ್ಚೆಯ ನಂತರ ತೆಗೆದುಕೊಂಡ ನಿರ್ಧಾರವಾಗಿದೆ. ಕೇಂದ್ರದ ಜತೆಗೆ ನೇರ ಸಂಪರ್ಕದೊಂದಿಗೆ ತಳಮಟ್ಟದಲ್ಲಿ ದೊಡ್ಡ ಬದಲಾವಣೆ ತರಲು ನೆರವಾಗುತ್ತದೆ,'' ಎಂದರು.
ಹೀಗೆ ಭಾಷಣದ ಉದ್ದಕ್ಕೂ ಕಣಿವೆ ರಾಜ್ಯದ ಜನರ ವಿಶ್ವಾಸವನ್ನು ಗೆಲ್ಲುವ ಮಾತುಗಳು ಎದ್ದು ಕಾಣಿಸಿತು.