ಮೋದಿಗೆ ಸಹಾರಾದಿಂದ 40 ಕೋಟಿ ಲಂಚ : ರಾಹುಲ್ ಆರೋಪ
ರಾಹುಲ್ ಆರೋಪಗಳನ್ನು ಬಿಜೆಪಿ ಸಾರಾಸಗಟಾಗಿ ತಳ್ಳಿಹಾಕಿದ್ದು, ಒಂದೂ ಚುನಾವಣೆಯನ್ನು ಗೆಲ್ಲಲು ವಿಫಲರಾಗಿರುವ ರಾಹುಲ್ ಹತಾಶರಾಗಿ ಮೋದಿಯವರ ಮೇಲೆ ಇಂತಹ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಪ್ರತಿದಾಳಿ ನಡೆಸಿದೆ.
ಮೆಹ್ಸಾನ (ಗುಜರಾತ್), ಡಿಸೆಂಬರ್ 21 : ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾಗುವ ಮೊದಲು, ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಸಹಾರಾ ಕಂಪನಿಯಿಂದ 40 ಕೋಟಿ ರುಪಾಯಿ ಲಂಚ ಪಡೆದಿದ್ದರು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಗಂಭೀರ ಆರೋಪ ಮಾಡಿದ್ದಾರೆ.
ಗುಜರಾತ್ ನಲ್ಲಿ ಬುಧವಾರ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, 2014ರಲ್ಲಿ ಸಹಾರಾ ಕಂಪನಿಯ ಮೇಲೆ ಐಟಿ ದಾಳಿ ನಡೆದಾಗ ಸಿಕ್ಕಿರುವ ದಾಖಲೆಗಳಲ್ಲಿ 2013-14ರಲ್ಲಿ ಮೋದಿ ಅವರು ಪಡೆದಿರುವ ಲಂಚಗಳ ವಿವರಗಳಿವೆ ಎಂದು ಸಾರಿದರು.
ಕೆಲ ದಿನಗಳ ಹಿಂದೆ ನರೇಂದ್ರ ಮೋದಿ ಅವರ ಭ್ರಷ್ಟಾಚಾರದ ಬಗ್ಗೆ ಸಾಕ್ಷ್ಯಗಳಿದ್ದು, ಒಂದೊಂದಾಗಿ ವಿವರ ನೀಡುವುದಾಗಿ ರಾಹುಲ್ ಘೋಷಿಸಿಕೊಂಡಿದ್ದರು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೂಡ, ರಾಹುಲ್ ಅವರೇ ಮೋದಿ ಭ್ರಷ್ಟಾಚಾರವನ್ನು ಎಂದು ಬಯಲು ಮಾಡುತ್ತೀರಿ ಎಂದು ಕೆಣಕಿದ್ದರು. [ಭ್ರಷ್ಟಾಚಾರದಲ್ಲಿ ಸ್ವತಃ ಪ್ರಧಾನಿ ಭಾಗಿ, ನನ್ನ ಹತ್ರ ಸಾಕ್ಷ್ಯ ಇದೆ: ರಾಹುಲ್]
ಇದೀಗ ರಾಹುಲ್ ಅವರು ಮೋದಿಯವರ ತವರು ರಾಜ್ಯ ಗುಜರಾತ್ ನಲ್ಲಿಯೇ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. 2013ರ ಅಕ್ಟೋಬರ್ ನಿಂದ 2014ರ ಫೆಬ್ರವರಿಯೊಳಗೆ 40 ಕೋಟಿ ರು. ಹಣ ಸಹಾರಾ ಕಂಪನಿಯಿಂದ ಮೋದಿ ಜೇಬು ಸೇರಿದೆ ಎಂದು ಆರೋಪಿಸಿದರು.
ಐಟಿಯಲ್ಲಿರುವ ದಾಖಲೆಗಳ ಪ್ರಕಾರ, 2013ರ ಅ. 30ರಂದು ಸಹಾರಾ ಕಂಪನಿಯಿಂದ 2.5 ಕೋಟಿ ರು., ನ. 13ರಂದು 5 ಕೋಟಿ ರು., ನ. 27ರಂದು 2.5 ಕೋಟಿ ರು., ನ. 29ರಂದು 5 ಕೋಟಿ ರು., ಡಿ.6ರಂದು 5 ಕೋಟಿ ರು., ಡಿ.19ರಂದು 5 ಕೋಟಿ ರು., 2014ರ ಜ.13ರಂದು 5 ಕೋಟಿ ರು., ಜ.28ರಂದು 5 ಕೋಟಿ ರು., ಫೆ.22ರಂದು 5 ಕೋಟಿ ರು. ನೀಡಲಾಗಿದೆ ಎಂದು ವಿವರ ಬಹಿರಂಗಪಡಿಸಿದರು. [ಟ್ವಿಟ್ಟರಲ್ಲಿ ಅಪಹಾಸ್ಯಕ್ಕೀಡಾದ ರಾಹುಲ್ 'ಭೂಕಂಪ'ದ ಮಾತು]
ತಮ್ಮ ವಾಗ್ದಾಳಿಯನ್ನು ಮುಂದುವರಿಸುತ್ತ, ನಿಮ್ಮ ಪ್ರಧಾನಿ ನನಗೆ ಸಂಸತ್ತಿನಲ್ಲಿ ಮಾತನಾಡಲು ಬಿಡಲಿಲ್ಲ, ನನ್ನ ಮುಂದೆ ನಿಲ್ಲಲು ಅವರಿ ತಯಾರಿಲ್ಲ, ಅವರಿಗೆ ಹೆದರಿಕೆ, ಯಾಕೋ ತಿಳಿಯುತ್ತಿಲ್ಲ ಎಂದು ತಮ್ಮ ಎಂದಿನ ಹಾಸ್ಯದ ಶೈಲಿಯಲ್ಲಿ ಮೋದಿಯನ್ನು ಕೆಣಕಿದರು.
ಕನಿಷ್ಠ 6ರಿಂದ 7 ತಿಂಗಳು ನಿಮ್ಮ (ಬಡ ಜನರ) ಹಣವನ್ನು ಬ್ಯಾಂಕಿನಲ್ಲಿ ಇಡುವುದು ಮೋದಿಯವರ ಉದ್ದೇಶ. ಆ ಹಣದ ಸಹಾಯದಿಂದ ಶ್ರೀಮಂತರ ಸಾಲವನ್ನು ಮನ್ನಾ ಮಾಡುವುದು ಮೋದಿಯವರ ಹುನ್ನಾರ ಎಂದು ರಾಹುಲ್ ಮಾತಿನ ಕಿಡಿ ಸಿಡಿಸಿದರು. [ರಾಹುಲ್ ಗಾಂಧಿಗೆ ಸಾಡೇಸಾತಿ ಶನಿ ಶುಭ ತರುತ್ತಾ?]
ರೈತರ ಕೈಯಿಂದ ಮೋದಿಯವರು ನಗದನ್ನು ಕಸಿದುಕೊಂಡಿದ್ದಾರೆ. ಬ್ಯಾಂಕ್ ನಿಂದ ಸಾಲ ಪಡೆದ ಬಡ ರೈತರ ಅದನ್ನು ಮರಳಿಸದಿದ್ದಾಗ ಅವರನ್ನು ಜೈಲಿಗೆ ತಳ್ಳಲಾಗುತ್ತಿದೆ. ಆದರೆ, ಅದೇ ಶ್ರೀಮಂತರು ಸಾಲ ಹಿಂತಿರುಗಿಸದಿದ್ದರೆ ಅವರನ್ನು ಡಿಫಾಲ್ಟರ್ ಎಂದು ಹಣಪಟ್ಟಿ ಕಟ್ಟಿ ಅವರನ್ನು ಪಾರು ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ನಿಮ್ಮ (ಮೋದಿ) ಅಪನಗದೀಕರಣದಿಂದ ಗುಜರಾತ್ನ ನಿರ್ಮಾಣ, ಜವಳಿ, ನೇಯ್ಗೆಯ ಉದ್ಯಮಗಳು ಸಂಕಷ್ಟಕ್ಕೀಡಾಗಿವೆ. ನಿಮ್ಮ ಮೋದಿ ಕಪ್ಪು ಹಣದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿಲ್ಲ, ಹಿಂದೂಸ್ತಾನದ ಬಡಜನರ ಮೇಲೆ ಫೈರ್ ಬಾಂಬಿಂಗ್ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
ರಾಹುಲ್ ಗಾಂಧಿಯವರ ಆರೋಪಗಳನ್ನು ಬಿಜೆಪಿ ಸಾರಾಸಗಟಾಗಿ ತಳ್ಳಿಹಾಕಿದ್ದು, ಒಂದೂ ಚುನಾವಣೆಯನ್ನು ಗೆಲ್ಲಲು ವಿಫಲರಾಗಿರುವ ರಾಹುಲ್ ಗಾಂಧಿಯವರು ಹತಾಶರಾಗಿ ಮೋದಿಯವರ ಮೇಲೆ ಇಂತಹ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಪ್ರತಿದಾಳಿ ನಡೆಸಿದೆ.