ತಿರುಪತಿಯಲ್ಲಿ ಮೋದಿ ವಿಶೇಷ ಪ್ರಾರ್ಥನೆ
ತಿರುಮಲ, ಮೇ.1: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಗುರುವಾರ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನರೇಂದ್ರ ಮೋದಿ ಅವರೊಂದಿಗೆ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಹಾಗೂ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ವೆಂಕಟೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ್ದಾರೆ.
ತಿರುಪತಿ ತಿಮ್ಮಪ್ಪನ ಸನ್ನಿಧಿ ಸುಮಾರು 20 ನಿಮಿಷಗಳ ಕಾಲ ಮೋದಿ ಅವರು ಪ್ರಾರ್ಥನೆಯಲ್ಲಿ ತೊಡಗಿದ್ದರು. ತಿರುಪತಿ ತಿರುಮಲ ದೇವಸ್ಥಾನಂ ವತಿಯಿಂದ ಮೋದಿ ಅವರಿಗೆ ಭವ್ಯ ಸ್ವಾಗತ ನೀಡಲಾಗಿದೆ. ವೇದ ಘೋಷಗಳ ಮೂಲಕ ಆಶೀರ್ವದಿಸಲಾಗಿದೆ.
ತಿರುಪತಿಗೆ ಆಗಮಿಸುವುದಕ್ಕೂ ಮುನ್ನ ಮೋದಿ, ನಾಯ್ಡು ಹಾಗೂ ಪವನ್ ಅವರು ಶ್ರೀಕಾಳಹಸ್ತಿಯಲ್ಲಿ ವಾಯುಲಿಂಗೇಶ್ವರ ಸನ್ನಿಧಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರುಮೋದಿ, ನಾಯ್ಡು ಹಾಗೂ ಪವನ್ ಮೂವರು ತಿರುಪತಿಯಿಂದ 100 ಕಿ.ಮೀ ದೂರದಲ್ಲಿರುವ ಮದನಪಲ್ಲಿಗೆ ತೆರಳಿದ್ದಾರೆ.
ಆಂಧ್ರಪ್ರದೇಶದಲ್ಲಿ ಎರಡು ದಿನಗಳ ಚುನಾವಣಾ ಪ್ರಚಾರ ಕಾರ್ಯದಲ್ಲಿ ಮೋದಿ ಅವರು ನಿರತರಾಗಿದ್ದಾರೆ. ಹೈದರಾಬಾದಿನಲ್ಲಿ ನಾಯ್ಡು ಹಾಗೂ ಪವನ್ ಜತೆ ವೇದಿಕೆ ಹಂಚಿಕೊಂಡ ಮೋದಿ ಅವರು ಮತ್ತೊಮ್ಮೆ ಎನ್ ಡಿಎ ಮೈತ್ರಿ ಬಲಗೊಳಿಸಲು ಆಂಧ್ರಪ್ರದೇಶದಲ್ಲಿ ಮತ್ತೊಮ್ಮೆ ಮೋದಿ ಕಾಣಿಸಿಕೊಂಡಿದ್ದಾರೆ.
ನರೇಂದ್ರ ಮೋದಿ ಅವರು ಈ ಹಿಂದೆ ಕಾಶಿ ವಿಶ್ವನಾಥ, ಪುರಿ ಜಗನ್ನಾಥ ದೇಗುಲಕ್ಕೂ ಭೇಟಿ ನೀಡಿ ಆಶೀರ್ವಾದ ಬೇಡಿದ್ದನ್ನು ಇಲ್ಲಿ ಸ್ಮರಿಸಬಹುದು.(ಪಿಟಿಐ)