ಡಿಸೆಂಬರ್ 26; ಮೋದಿ ಮನ್ ಕೀ ಬಾತ್ ಮುಖ್ಯಾಂಶಗಳು
ನವದೆಹಲಿ, ಡಿಸೆಂಬರ್ 26; ಭಾರತದ ಪ್ರಧಾನಿ ನರೇಂದ್ರ ಮೋದಿ 'ಮನ್ ಕೀ ಬಾತ್' ತಿಂಗಳ ರೇಡಿಯೋ ಕಾರ್ಯಕ್ರಮದ ಮೂಲಕ ಭಾನುವಾರ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಮನ್ ಕೀ ಬಾತ್ ಸರಣಿಯ 84ನೇ ಕಾರ್ಯಕ್ರಮ ಇದಾಗಿತ್ತು.
2020ನೇ ವರ್ಷದ ಕೊನೆಯ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, "ಮುಂದಿನ ಮನ್ ಕೀ ಬಾತ್ 2022ರಲ್ಲಿ ನಡೆಯಲಿದೆ. ನಾವು ಹೊಸ ಕೆಲಸಗಳನ್ನು ಮಾಡೋಣ ಮತ್ತು ನಮ್ಮ ರಾಷ್ಟ್ರದ ಪ್ರಗತಿ ಮತ್ತು ಭಾರತೀಯರ ಸಬಲೀಕರಣವನ್ನು ಮನಸ್ಸಿನಲ್ಲಿಟ್ಟುಕೊಳ್ಳೋಣ" ಎಂದು ಕರೆ ನೀಡಿದರು.
ನವೆಂಬರ್ 28; ಮೋದಿ ಮನ್ ಕೀ ಬಾತ್ ಮುಖ್ಯಾಂಶಗಳು
ಕೋವಿಡ್ ಪರಿಸ್ಥಿತಿ ಬಗ್ಗೆ ಮಾತನಾಡಿದ ನರೇಂದ್ರ ಮೋದಿ, "ಕೋವಿಡ್ ರೂಪಾಂತರಿ ಒಮಿಕ್ರಾನ್ ಬಗ್ಗೆ ನಾವು ಹೆಚ್ಚು ಜಾಗರೂಕರಾಗಿರಬೇಕು ಮತ್ತು ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು. ಹೊಸ ವರ್ಷದ ಸಂಭ್ರಮಾಚರಣೆ ಮಾಡುವಾಗ ಕೊರೊನಾ ಮರೆಯಬಾರದು" ಎಂದರು.
ಮೋದಿ ಮನ್ ಕೀ ಬಾತ್; ನದಿಗಳ ಮಹತ್ವ ತಿಳಿಸಿದ ಪ್ರಧಾನಿ
ತಮಿಳುನಾಡಿನಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ಗೆ ಮೋದಿ ನಮನ ಸಲ್ಲಿಸಿದರು. ಆಗಸ್ಟ್ 2021ರಲ್ಲಿ ಅವರಿಗೆ ಶೌರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು ಎಂದು ಮೋದಿ ನೆನಪು ಮಾಡಿಕೊಂಡರು.
2021ರ ಹಿನ್ನೋಟ; ವರ್ಷದ ವ್ಯಕ್ತಿ ಬಸವರಾಜ ಬೊಮ್ಮಾಯಿ
ಪುಸ್ತಕ ಓದುವ ಹವ್ಯಾಸವನ್ನು ಹೆಚ್ಚಿಸಿಕೊಳ್ಳುವ ಕುರಿತು ಮಾತನಾಡಿದ ಮೋದಿ ಸ್ಕ್ರೀನ್ ಟೈಂ ಹೆಚ್ಚಾಗುತ್ತಿರುವ ಕುರಿತು ಮಾತನಾಡಿದರು. 2021ರಲ್ಲಿ ನೀವು ಓದಿದ ಪುಸ್ತಕದ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಿ ಎಂದು ಮೋದಿ ಕರೆ ನೀಡಿದರು. ಇತರರು 2022ರಲ್ಲಿ ಪುಸ್ತಕಗಳನ್ನು ಓದಲು ನೀವು ಸಹಾಯ ಮಾಡುತ್ತೀರಿ ಎಂಬ ಭರವಸೆ ಇದೆ ಎಂದರು.
ಮನ್ ಕೀ ಬಾತ್ ಪೂರ್ಣ ಇಲ್ಲಿ ಕೇಳಿ
Sharing this month’s #MannKiBaat. https://t.co/dOFZ9K412f
— Narendra Modi (@narendramodi) December 26, 2021
ಮೋದಿ ಭಾಷಣದ ಮುಖ್ಯಾಂಶಗಳು
* ಎಲ್ಲರ ಪ್ರಯತ್ನದಿಂದ ಭಾರತವು 100 ವರ್ಷಗಳಲ್ಲಿ ಎದುರಾದ ಅತಿದೊಡ್ಡ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸಾಧ್ಯವಾಯಿತು. ಪ್ರತಿ ಸಂಕಷ್ಟ ಸಮಯದಲ್ಲಿ ನಾವು ಕುಟುಂಬದಂತೆ ಒಬ್ಬರಿಗೊಬ್ಬರು ನೆರವಾಗಿದ್ದೇವೆ. ತಂತಮ್ಮ ಪ್ರದೇಶದಲ್ಲಿ ಅಥವಾ ನಗರದಲ್ಲಿ ಯಾರಿಗಾದರೂ ಸಹಾಯದ ಅವಶ್ಯಕತೆ ಇದ್ದಲ್ಲಿ ಸಾಧ್ಯವಾದುದಕ್ಕಿಂತ ಹೆಚ್ಚಿನದನ್ನು ಮಾಡಲು ಪ್ರಯತ್ನಿಸಿದ್ದೇವೆ. ಇಂದು ವಿಶ್ವದಲ್ಲಿರುವ ಲಸಿಕೆಯ ಅಂಕಿಅಂಶಗಳನ್ನು ನಾವು ಭಾರತದ ಅಂಕಿಅಂಶಗಳೊಂದಿಗೆ ಹೋಲಿಸಿದರೆ, ದೇಶವು ಅಭೂತಪೂರ್ವ ಕೆಲಸವನ್ನು ಮಾಡಿದೆ, ದೊಡ್ಡ ಗುರಿಯನ್ನು ಸಾಧಿಸಿದೆ.
Recommended Video
* ಲಸಿಕೆಯ 140 ಕೋಟಿ ಡೋಸ್ಗಳ ಮೈಲಿಗಲ್ಲಿನ ಸಾಧನೆ ಪ್ರತಿಯೊಬ್ಬ ಭಾರತೀಯರ ಪಾಲುದಾರಿಕೆಯಿಂದಾಗಿದೆ. ಇದರಿಂದ ಪ್ರತಿಯೊಬ್ಬ ಭಾರತೀಯನೂ ವ್ಯವಸ್ಥೆಯ ಮೇಲಿಟ್ಟಿರುವ ಭರವಸೆಯನ್ನು, ವಿಜ್ಞಾನಿಗಳ ಮತ್ತು ವಿಜ್ಞಾನದ ಮೇಲಿಟ್ಟಿರುವ ಭರವಸೆಯನ್ನು ಸಾಬೀತುಪಡಿಸುತ್ತದೆ ಮತ್ತು ಸಮಾಜದೆಡೆ ತನ್ನ ಕರ್ತವ್ಯವನ್ನು ನಿಭಾಯಿಸುವ ಭಾರತೀಯರ ಇಚ್ಛಾಶಕ್ತಿಗೆ ಸಾಕ್ಷಿಯೂ ಆಗಿದೆ. ಆದರೆ ಸ್ನೇಹಿತರೆ, ಕೊರೊನಾದ ಹೊಸ ರೂಪಾಂತರಿ ಬಂದೆರಗಿದೆ ಎಂಬುದರ ಬಗ್ಗೆಯೂ ಗಮನಹರಿಸಬೇಕಿದೆ.
* ನಮ್ಮ ವಿಜ್ಞಾನಿಗಳು ಈ ಹೊಸ ರೂಪಾಂತರಿ ಒಮಿಕ್ರಾನ್ನ ಅಧ್ಯಯನವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಪ್ರತಿ ದಿನ ಅವರಿಗೆ ಹೊಸ ಮಾಹಿತಿ ಲಭಿಸುತ್ತಿದೆ. ಅವರ ಸಲಹೆ ಮೇರೆಗೆ ಕೆಲಸ ಕಾರ್ಯ ನಡೆಯುತ್ತಿದೆ. ಹೀಗಿರುವಾಗ ಸ್ವಯಂ ಜಾಗರೂಕತೆ, ಸ್ವಂತ ನೀತಿ ನಿಯಮಗಳು ಕೊರೊನಾ ರೂಪಾಂತರಿ ವಿರುದ್ಧ ಹೋರಾಡಲು ದೇಶದ ಬಹುದೊಡ್ಡ ಶಕ್ತಿಯಾಗಿದೆ. ನಮ್ಮ ಸಾಮೂಹಿಕ ಶಕ್ತಿಯೇ ಕೊರೊನಾವನ್ನು ಸೋಲಿಸಲಿದೆ. ಇದೇ ಜವಾಬ್ದಾರಿಯೊಂದಿಗೆ ನಾವು 2022 ಅನ್ನು ಪ್ರವೇಶಿಸಬೇಕಿದೆ.
* ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿಯೂ ಸೇರಿದಂತೆ ಅನೇಕ ವೀರರನ್ನು ಕಳೆದುಕೊಂಡಿದ್ದೇವೆ. ವರುಣ್ ಸಿಂಗ್ ಹಲವಾರು ದಿನ ಮೃತ್ಯುವಿನೊಂದಿಗೆ ಧೈರ್ಯದಿಂದ ಹೋರಾಡಿದರು ಆದರೆ ಅವರೂ ನಮ್ಮನ್ನಗಲಿದರು. ವರುಣ್ ಆಸ್ಪತ್ರೆಯಲ್ಲಿದ್ದಾಗ, ಸಾಮಾಜಿಕ ಜಾಲತಾಣದಲ್ಲಿ ನೋಡಿದ ಸಂಗತಿಯೊಂದು ನನ್ನ ಹೃದಯವನ್ನು ಕಲಕಿತು. ಈ ವರ್ಷದ ಅಗಸ್ಟ್ ತಿಂಗಳಲ್ಲಿ ಅವರನ್ನು ಶೌರ್ಯ ಚಕ್ರದಿಂದ ಗೌರವಿಸಲಾಗಿತ್ತು. ಈ ಸನ್ಮಾನದ ನಂತರ ಅವರು ತಮ್ಮ ಶಾಲಾ ಪ್ರಾಂಶುಪಾಲರಿಗೆ ಒಂದು ಪತ್ರ ಬರೆದಿದ್ದರು. ಆ ಪತ್ರವನ್ನು ಓದಿ ಯಶಸ್ಸಿನ ಶಿಖರಕ್ಕೇರಿದರೂ ಅವರು ತಮ್ಮ ಬೇರುಗಳನ್ನು ಮರೆತಿಲ್ಲ ಎಂದು ನನಗೆ ಅನ್ನಿಸಿತು.
* ಲಕ್ನೋದ ನಿವಾಸಿಯಾಗಿರುವ ನಿಲೇಶ್ ಅವರ ಒಂದು ಪೋಸ್ಟ್ ಕುರಿತು ಕೂಡಾ ಚರ್ಚಿಸಲು ಬಯಸುತ್ತೇನೆ. ನಿಲೇಶ್ ಅವರು ಲಕ್ನೋದಲ್ಲಿ ನಡೆದ ಒಂದು ವಿಶಿಷ್ಟ ಡ್ರೋನ್ ಪ್ರದರ್ಶನವನ್ನು ಬಹಳ ಪ್ರಶಂಸಿಸಿದ್ದಾರೆ. ಈ ಡ್ರೋನ್ ಪ್ರದರ್ಶನವನ್ನು ಲಕ್ನೋದ ರೆಸಿಡೆನ್ಸಿ ಪ್ರದೇಶದಲ್ಲಿ ಆಯೋಜಿಸಲಾಗಿತ್ತು. 1857 ಕ್ಕೂ ಮೊದಲಿನ ಸ್ವಾತಂತ್ರ್ಯ ಸಂಗ್ರಾಮದ ಸಾಕ್ಷಿಗಳು, ರೆಸಿಡೆನ್ಸಿಯ ಗೋಡೆಗಳ ಮೇಲೆ ಇಂದಿಗೂ ಕಾಣಬರುತ್ತದೆ. ರೆಸಿಡೆನ್ಸಿಯಲ್ಲಿ ನಡೆದ ಡ್ರೋನ್ ಪ್ರದರ್ಶನದಲ್ಲಿ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ವಿವಿಧ ಆಯಾಮಗಳಿಗೆ ಜೀವ ತುಂಬಲಾಯಿತು. ಚೌರಿ-ಚೌರಾ ಚಳವಳಿಯಿರಲಿ, ಕಾಕೋರಿಟ್ರೆನ್ನ ಘಟನೆಯೇ ಇರಲಿ ಅಥವಾ ನೇತಾಜಿ ಸುಭಾಷ್ ಅವರ ಅದಮ್ಯ ಸಾಹಸ ಮತ್ತು ಪರಾಕ್ರಮವೇ ಇರಲಿ, ಈ ಡ್ರೋನ್ ಪ್ರದರ್ಶನ ಎಲ್ಲರ ಮನಸೂರೆಗೊಂಡಿತು. ನೀವು ಕೂಡಾ ಇದೇ ರೀತಿ ನಿಮ್ಮ ನಗರಗಳಲ್ಲಿ, ಗ್ರಾಮಗಳಲ್ಲಿ, ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದ ವಿಶಿಷ್ಟ ಅಂಶಗಳನ್ನು ಜನರ ಮುಂದೆ ತರಬಹುದು.
* ತೆಲಂಗಾಣದ ಡಾಕ್ಟರ್ ಕುರೇಲಾ ವಿಠಲಾಚಾರ್ಯ ಅವರಿಗೆ 84 ವರ್ಷ ವಯಸ್ಸು. ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುವುದಕ್ಕೆ ವಯಸ್ಸು ಮುಖ್ಯವಲ್ಲ ಎಂಬ ಮಾತಿಗೆ ವಿಠಾಲಾಚಾರ್ಯ ಒಂದು ಉದಾಹರಣೆ. ವಿಠಲಾಚಾರ್ಯ ಅವರಿಗೆ ಬಾಲ್ಯದಿಂದಲೂ ಒಂದು ದೊಡ್ಡ ಗ್ರಂಥಾಲಯ ತೆರೆಯಬೇಕೆಂಬ ಇಚ್ಛೆಯಿತ್ತು. ಆಗ ದೇಶ ಗುಲಾಮಗಿರಿಯಲ್ಲಿತ್ತು. ಬಾಲ್ಯದ ಕನಸು ಕನಸಾಗಿಯೇ ಉಳಿದುಬಿಟ್ಟಂತಹ ಪರಿಸ್ಥಿತಿಗಳು ಆ ಸಮಯದಲ್ಲಿದ್ದವು. ಕಾಲಾಂತರದಲ್ಲಿ ವಿಠಲಾಚಾರ್ಯ ಅವರು ಲೆಕ್ಚರರ್ ಆದರು, ತೆಲುಗು ಭಾಷೆಯನ್ನು ಆಳವಾಗಿ ಅಧ್ಯಯನ ಮಾಡಿದರು, ಮತ್ತು ಅದರಲ್ಲಿ ಅನೇಕ ಕೃತಿಗಳನ್ನು ರಚಿಸಿದರು 6-7 ವರ್ಷಗಳ ಹಿಂದೆ ಅವರು ಪುನಃ ತಮ್ಮ ಕನಸನ್ನು ಸಾಕಾರಗೊಳಿಸಲು ಆರಂಭಿಸಿದರು. ಅವರು ತಮ್ಮ ಸ್ವಂತ ಪುಸ್ತಕಗಳಿಂದ ಗ್ರಂಥಾಲಯ ಆರಂಭಿಸಿದರು. ತಮ್ಮ ಜೀವಮಾನದ ಗಳಿಕೆಯನ್ನು ಇದರಲ್ಲಿ ತೊಡಗಿಸಿದರು. ಕ್ರಮೇಣ ಜನರು ಇದರೊಂದಿಗೆ ಸೇರಲಾರಂಭಿಸಿದರು ಮತ್ತು ಕೊಡುಗೆ ನೀಡಲಾರಂಬಿಸಿದರು. ಯದಾದ್ರಿ-ಭುವನಗಿರಿ ಜಿಲ್ಲೆಯಲ್ಲಿ ರಮಣ್ಣಾ ಪೇಟ್ಮಂಡಲ್ ದಲ್ಲಿರುವ ಈ ಗ್ರಂಥಾಲಯದಲ್ಲಿ ಸುಮಾರು 2 ಲಕ್ಷ ಪುಸ್ತಕಗಳಿವೆ.
* ಮನ್ ಕೀ ಬಾತ್ನಲ್ಲಿ ಈ ನಾವು ಈ ಬಾರಿಯೂ ಅನೇಕ ವಿಷಯಗಳ ಬಗ್ಗೆ ಮಾತನಾಡಿದೆವು. ಪ್ರತಿಬಾರಿಯಂತೆ, ಒಂದು ತಿಂಗಳ ನಂತರ ನಾವು ಪುನಃ ಭೇಟಿಯಾಗೋಣ. ಆದರೆ ಅದು 2022ರಲ್ಲಿ. ಪ್ರತಿಯೊಂದು ಹೊಸ ಆರಂಭವೂ ನಮ್ಮ ಸಾಮರ್ಥ್ಯವನ್ನು ಗುರುತಿಸುವ ಒಂದು ಅವಕಾಶವನ್ನು ಹೊತ್ತು ತರುತ್ತದೆ. ಯಾವ ಗುರಿಗಳನ್ನು ನಾವು ಮೊದಲು ಕಲ್ಪನೆ ಕೂಡಾ ಮಾಡಿರಲಿಲ್ಲವೋ, ದೇಶ ಇಂದು ಅವುಗಳಿಗಾಗಿ ಪ್ರಯತ್ನ ಮಾಡುತ್ತಿದೆ.