ಗ್ರಾಮಗಳ ಮುಖ್ಯಸ್ಥರಿಗೆ ವಿಶೇಷ ಪತ್ರ ಬರೆದ ಪ್ರಧಾನಿ ಮೋದಿ
Recommended Video
ನವದೆಹಲಿ, ಜೂನ್ 15: ಗ್ರಾಮೀಣ ಪ್ರದೇಶಗಳಲ್ಲಿ ಉದ್ಭವಿಸಿರುವ ನೀರಿನ ಸಮಸ್ಯೆಗಳ ವಿಚಾರದಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಮುಂಗಾರು ಸಂದರ್ಭದಲ್ಲಿ ನೀರು ಸಂಗ್ರಹಣೆಗೆ ಮನವಿ ಮಾಡಿ ಗ್ರಾಮಗಳ ಮುಖ್ಯಸ್ಥರಿಗೆ (ಗ್ರಾಮ ಪ್ರಧಾನ್) ವೈಯಕ್ತಿಕ ಪತ್ರ ಬರೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಸಹಿ ಇರುವ ಈ ಪತ್ರವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಜಿಲ್ಲಾ ಕಲೆಕ್ಟರ್ಗಳ ಮೂಲಕ ಗ್ರಾಮಗಳ ಮುಖ್ಯಸ್ಥರಿಗೆ ತಲುಪಿಸಲಾಗುತ್ತದೆ.
ಎರಡು ತಿಂಗಳಲ್ಲಿ ಭದ್ರಾ ನೀರು ವಿವಿ ಸಾಗರಕ್ಕೆ: ನಾರಾಯಣ ಸ್ವಾಮಿ
ಪ್ರಧಾನಿಯ ಪತ್ರ ಅನೇಕ ಗ್ರಾಮಗಳನ್ನು ತಲುಪಿದ್ದು, ಅಲ್ಲಿ ಚರ್ಚೆಯ ವಿಚಾರವಾಗಿದೆ. ಪ್ರಸ್ತುತದ ಮುಂಗಾರು ಅವಧಿಯಲ್ಲಿ ನೀರು ಸಂಗ್ರಹಣೆ ಪ್ರಕ್ರಿಯೆಗೆ ಆಸಕ್ತಿ ತೋರಿಸುವಂತೆ ಗ್ರಾಮಸ್ಥರಿಗೆ ಉತ್ತೇಜನ ನೀಡಲು ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸಬೇಕು ಎಂದು ಗ್ರಾಮಗಳ ಮುಖ್ಯಸ್ಥರಿಗೆ ಮೋದಿ ಮನವಿ ಮಾಡಿದ್ದಾರೆ.
ಬಹುತೇಕ ಗ್ರಾಮಗಳ ಮುಖ್ಯಸ್ಥರಿಗೆ ಈ ಪತ್ರ ತಲುಪಿದೆ. ಉತ್ತರ ಪ್ರದೇಶದ ಆಮ್ರೋಹ ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಉಮೇಶ್ ಮಿಶ್ರಾ ಅವರು ಎಲ್ಲ 601 ಗ್ರಾಮಗಳ ಮುಖ್ಯಸ್ಥರಿಗೆ ಪತ್ರ ತಲುಪಿಸಿರುವುದಾಗಿ ತಿಳಿಸಿದ್ದಾರೆ. ಈಗಾಗಲೇ ಗ್ರಾಮೀಣ ಪ್ರದೇಶಗಳಲ್ಲಿ 775 ಕೊಳಗಳ ನಿರ್ಮಾಣಕ್ಕೆ ಅವರು ಯೋಜನೆ ರೂಪಿಸಿದ್ದು, 500 ಕೊಳಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದಿದ್ದಾರೆ.
ದೇವರ ಆಶೀರ್ವಾದ ಮಳೆ
ಹಿಂದಿ ಭಾಷೆಯಲ್ಲಿ ಬರೆದಿರುವ ಪತ್ರದಲ್ಲಿ, 'ಪ್ರಿಯ ಸರಪಂಚರೇ ನಮಸ್ಕಾರ. ಪಂಚಾಯತಿಯಲ್ಲಿನ ನಿಮ್ಮ, ನನ್ನ ಎಲ್ಲ ಸಹೋದರ ಮತ್ತು ಸಹೋದರಿಯರ ಆರೋಗ್ಯ ಉತ್ತಮವಾಗಿದೆ ಎಂದು ಭಾವಿಸುತ್ತೇನೆ. ಈಗ ಮಳೆಗಾಲ ಪ್ರಾರಂಭವಾಗಲಿದೆ. ಸಾಕಷ್ಟು ಮಳೆ ನೀರಿನಿಂದ ನಮಗೆ ಆಶೀರ್ವಾದ ಮಾಡಿರುವ ದೇವರಿಗೆ ನಾವು ಕೃತಜ್ಞರಾಗಿರುತ್ತೇವೆ. ಈ ಆಶೀರ್ವಾದವನ್ನು (ನೀರು) ಸಂರಕ್ಷಿಸಲು ಎಲ್ಲ ಪ್ರಯತ್ನ ಮತ್ತು ತಯಾರಿಗಳನ್ನು ನಾವು ಮಾಡಬೇಕಿದೆ' ಎಂದು ಹೇಳಿದ್ದಾರೆ.
ನೀರು ಸಂಗ್ರಹಣೆ ಕುರಿತು ಚರ್ಚಿಸಿ
ಒಂದು ಪುಟದ ಪತ್ರದಲ್ಲಿ ಮಳೆ ನೀರು ಕೊಯ್ಲಿನ ಕುರಿತು ವಿಶೇಷ ಮನವಿ ಸಲ್ಲಿಸಿರುವ ಅವರು, ಗ್ರಾಮಸಭೆಗಳನ್ನು ನಡೆಸಿ ತಮ್ಮ ಸಂದೇಶವನ್ನು ತಲುಪಿಸುವಂತೆ ಹೇಳಿದ್ದಾರೆ. 'ನೀರನ್ನು ಹೇಗೆ ಸಂಗ್ರಹಿಸುವುದು ಎಂಬ ಬಗ್ಗೆ ಗ್ರಾಮದಲ್ಲಿ ಚರ್ಚೆ ನಡೆಸುವಂತೆ ಕೋರುತ್ತೇನೆ. ಪ್ರತಿ ಮಳೆಹನಿಯನ್ನೂ ಸಂಗ್ರಹಿಸಲು ನೀವು ಸೂಕ್ತ ಸಿದ್ಧತೆಗಳನ್ನು ಮಾಡುತ್ತೀರಿ ಎಂದು ನಾನು ನಂಬುತ್ತೇನೆ' ಎಂದು ಬರೆದಿದ್ದಾರೆ.
ಮುಂಗಾರು ಮಳೆ ಬರಲು ನೂರೆಂಟು ಕಸರತ್ತು!
ಚೆಕ್ಡ್ಯಾಂ, ಕೊಳ ನಿರ್ಮಿಸಿ
ಸೂಕ್ತ ರೀತಿಯಲ್ಲಿ ಮಳೆ ನೀರಿನ ಸಂಗ್ರಹ ಮಾಡಲು ಚೆಕ್ ಡ್ಯಾಂಗಳು ಮತ್ತು ಕೊಳಗಳನ್ನು ನಿರ್ಮಿಸುವಂತೆಯೂ ಪ್ರಧಾನಿ ಸಲಹೆ ನೀಡಿದ್ದಾರೆ. ಈ ಮೂಲಕ ಮಳೆ ನೀರು ಹರಿದು ವ್ಯರ್ಥವಾಗದಂತೆ ತಡೆದು ಬೇಸಿಗೆಗೆ ಜನ ಜಾನುವಾರುಗಳಿಗೆ ಸಾಕಷ್ಟು ನೀರು ಸಂಗ್ರಹಿಸುವುದು ಅಗತ್ಯ ಎಂದು ತಿಳಿಸಿದ್ದಾರೆ.
ಇಂದು ನೀತಿ ಆಯೋಗ ಸಮಿತಿ ಸಭೆ
ಜೂನ್ 15ರಂದು ನೀತಿ ಆಯೋಗ ಸಮಿತಿಯ ಮಹತ್ವ ಸಭೆ ನಡೆಯಲಿದೆ. ಈ ವೇಳೆ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಅಭಾವ ನೀಗಿಸಲು ಮಳೆ ನೀರು ಸಂಗ್ರಹದ ಯೋಜನೆಗೆ ಆದ್ಯತೆ ನೀಡುವ ವಿಚಾರಕ್ಕೆ ಮೋದಿ ಅವರು ಆದ್ಯತೆ ನೀಡಲಿದ್ದಾರೆ. ಮೋದಿ ಅವರ ಸಲಹೆಯಂತೆ ಹೊಸದಾಗಿ ರಚನೆಗೊಂಡಿರುವ ಜಲಶಕ್ತಿ ಸಚಿವಾಲಯವು ದೇಶದಲ್ಲಿನ ನೀರಿನ ಲಭ್ಯತೆಯನ್ನು ಪರಾಮರ್ಶಿಸಲು ಎಲ್ಲ ರಾಜ್ಯಗಳ ಸಚಿವರೊಂದಿಗೆ ಅಂತರ್ ರಾಜ್ಯ ಸಭೆ ನಡೆಸಿತ್ತು.