ಮೈಕಲ್ ಮಾಮಾ ಜೊತೆ ಗಾಂಧಿ ಕುಟುಂಬಕ್ಕೆ ಏನು ಸಂಬಂಧ : ಮೋದಿ ವ್ಯಂಗ್ಯ
ಸೊಲ್ಲಾಪುರ, ಜನವರಿ 09 : "ರಫೇಲ್ ಬಗ್ಗೆ ಸದ್ದು ಮಾಡುತ್ತಿರುವ ಕಾಂಗ್ರೆಸ್ ನಾಯಕರೇ ಹೇಳಿ, ರಫೇಲ್ ಸ್ಪರ್ಧಿ ಕಂಪನಿ ಪರ ಲಾಬಿ ಮಾಡಿದ ಮೈಕಲ್ ಮಾಮಾ ಜೊತೆ ಅವರ ಸಂಬಂಧವಾದರೂ ಎಂಥದು? ಅವರಿಗೆ ನಾವು ಉತ್ತರ ನೀಡಬಾರದೆ? ಚೌಕಿದಾರ ಅವರನ್ನು ಈ ಕುರಿತು ಪ್ರಶ್ನೆ ಕೇಳಬಾರದೆ?"
ಹೀಗೆಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಮೇಲೆ ವಾಗ್ದಾಳಿ ಮಾಡಿದ್ದಾರೆ. ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣದಲ್ಲಿ ಬಂಧಿತನಾಗಿರುವ ಇಂಗ್ಲೆಂಡ್ ಸಂಜಾತ ಕ್ರಿಶ್ಚಿಯನ್ ಮೈಕಲ್, ರಫೇಲ್ ಕಂಪನಿಯ ಸ್ಪರ್ಧಿ ಯೂರೋಫೈಟರ್ ಕಂಪನಿಗಾಗಿ ಲಾಬಿ ನಡೆಸಿದ್ದ ಎಂದು ವರದಿ ಬಂದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮೋದಿಯವರು ಬುಧವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
'ಪ್ರಧಾನಿ ಹಸ್ತಕ್ಷೇಪ ಮಾಡಿದರಾ, ಇಲ್ಲವಾ? ಇಷ್ಟುದ್ದ ಭಾಷಣ ಏಕೆ?'
ಈ ಕಮಿಷನ್ ಹೊಡೆಯುವವನ ಸ್ನೇಹಿತರೆಲ್ಲ ಈ ಚೌಕಿದಾರನನ್ನು ಬೆದರಿಸಬಹುದೆಂದು ತಿಳಿದುಕೊಂಡಿದ್ದಾರೆ. ಅವರಿಗೆ ನಿರಾಶೆ ಆಗುವುದು ಖಂಡಿತ. ಏಕೆಂದರೆ, ಈ ಚೌಕಿದಾರ ಯಾವತ್ತೂ ಮೈಮರೆತು ನಿದ್ದೆ ಮಾಡುವುದಿಲ್ಲ ಅಥವಾ ಆತನನ್ನು ಹೆದರಿಸಲು ಸಾಧ್ಯವಿಲ್ಲ. ಅವರು ನನ್ನ ಮೇಲೆ ಬೈಗುಳಗಳ ಮಳೆಗರೆದರು, ಸುಳ್ಳು ಹೇಳಿದರೆ, ಆದರೆ ಸ್ವಚ್ಛ ಮಾಡುವ ನನ್ನ ಅಭಿಯಾನ ಖಂಡಿತ ಮುಂದುವರಿಯುತ್ತದೆ ಎಂದು ಮೋದಿ ಮಾರ್ಮಿಕವಾಗಿ ನುಡಿದರು.
ರಫೇಲ್ ಸ್ಪರ್ಧಿ ಕಂಪನಿಗಾಗಿ ಲಾಬಿ
ಫ್ರಾನ್ಸ್ ನ ಡಸ್ಸಾಲ್ಟ್ ಕಂಪನಿಯ ಜೊತೆ ಭಾರತ 36 ರಫೇಲ್ ಯುದ್ಧ ವಿಮಾನಗಳನ್ನು ಕೊಳ್ಳುವ ಒಪ್ಪಂದ ಮಾಡಿಕೊಳ್ಳುವ ಮೊದಲೇ, ಇನ್ನೊಬ್ಬ ಅಗಸ್ಟಾ ವೆಸ್ಟ್ ಲ್ಯಾಂಡ್ ಮಧ್ಯವರ್ತಿ ಗಿಡೋ ಹಷ್ಕೆ ಮತ್ತು ಕ್ರಿಶ್ಚಿಯನ್ ಮೈಕಲ್ ಜತೆಗೂಡಿ ರಫೇಲ್ ಯುದ್ಧ ವಿಮಾನದ ಸ್ಪರ್ಧಿ ಯೂರೋಫೈಟರ್ ಪರವಾಗಿ ಯೋಜನೆ ರೂಪಿಸಿದ್ದರು. ಇದು ಗಿಡೋ ಹಷ್ಕೆಯಿಂದ ವಶಪಡಿಸಿಕೊಳ್ಳಲಾಗಿರುವ ಪ್ರಮುಖ ದಾಖಲೆಯೊಂದರಲ್ಲಿ ಬಯಲಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಮೈಕಲ್ ಮಾಮಾ ಗಾಂಧಿ ಕುಟುಂಬಕ್ಕೂ ನಂಟು
ರಫೇಲ್ ಡೀಲ್ ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸುತ್ತಿರುವುದಕ್ಕೂ ಕ್ರಿಶ್ಚಿಯನ್ ಮೈಕಲ್ ಮಾಮಾನ ಜೊತೆ ಗಾಂಧಿ ಕುಟುಂಬಕ್ಕೆ ಇರುವ ನಂಟಿಗೂ ಸಂಬಂಧವಿದೆ ಎಂದು ಬಿಜೆಪಿ ಈಗಾಗಲೆ ಆರೋಪಿಸಿದೆ. ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದಲ್ಲಿ ಕೇಳಿಬರುತ್ತಿರುವ ಭ್ರಷ್ಟಾಚಾರದ ಆರೋಪವನ್ನು ಮುಚ್ಚಿಡಲೆಂದೇ ರಫೇಲ್ ಡೀಲ್ ನಲ್ಲಿ ಬಿಜೆಪಿ ಭ್ರಷ್ಟಾಚಾರ ನಡೆಸಿದೆ ಎಂದು ಸುಳ್ಳು ಹೇಳುತ್ತಿದೆ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಡೆದ ಅಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ, ಭಾರತೀಯ ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಿಗೆ ಲಂಚ ನೀಡಲೆಂದು ಮೈಕಲ್ ಅಗಸ್ಟಾ ಕಂಪನಿಯಿಂದ ಹಣ ಪಡೆದಿದ್ದ ಎಂದು ಆರೋಪಿಸಲಾಗಿದೆ.
ಕ್ರಿಶ್ಚಿಯನ್ ನಿಂದ ಕುಟುಂಬಕ್ಕೆ ಹಣ ಸಂದಾಯ! ಆ 'ಕುಟುಂಬ' ಯಾವುದು?
ಚೌಕಿದಾರನನ್ನು ಬೆಂಬಲಿಸುತ್ತೀರಲ್ಲವೆ?
ಈ ಕ್ರಿಶ್ಚಿಯನ್ ಮೈಕಲ್ ನ ಸೌದೆಬಾಜಿ (ಡೀಲಿಂಗ್) ನಿಂದಾಗಿಯೇ, ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ನಡೆಸಿದ್ದ 126 ರಫೇಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದ ಕೂಡ ಮುರಿದುಬಿದ್ದಿತ್ತು ಎಂದು ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಕಾಂಗ್ರೆಸ್ಸನ್ನು ಕಟುಕಿದರು. ಇಂಥವರ ವಿರುದ್ಧ ಸೆಣಸುತ್ತಿರುವ ಚೌಕಿದಾರನ್ನು ನೀವು ಬೆಂಬಲಿಸುತ್ತೀರಲ್ಲ ಎಂದು ನರೇಂದ್ರ ಮೋದಿಯವರು ಬೃಹತ್ ಸಮಾವೇಶದಲ್ಲಿ ನೆರೆದಿದ್ದ ಜನರನ್ನು ಕೇಳಿದರು. ಜನರು ಒಕ್ಕೊರಲಿನಿಂದ ಹೌದು ಎಂದು ಕೂಗಿದರು.
ಮೋದಿ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ
ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ 58 ಸಾವಿರ ಕೋಟಿಯಷ್ಟು ಭಾರೀ ಭ್ರಷ್ಟಾಚಾರ ನಡೆದಿದ್ದು, ಅದರಲ್ಲಿ ದಿವಾಳಿ ಅಂಚಿನಲ್ಲಿದ್ದ ರಿಲಯನ್ಸ್ ಡಿಫೆನ್ಸ್ ಕಂಪನಿಯ ಮಾಲಿಕ ಅನಿಲ್ ಅಂಬಾನಿಯನ್ನು ಮೇಲೆತ್ತಲು 30 ಸಾವಿರ ಕೋಟಿಯಷ್ಟು ಹಣವನ್ನು ನೀಡಲಾಗಿದೆ. ಈ ಹಗರಣದಲ್ಲಿ, ಅನಿಲ್ ಅಂಬಾನಿಗೆ ಆಫ್ ಸೆಟ್ ಕಾಂಟ್ರಾಕ್ಟ್ ದೊರಕಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ನೇರವಾಗಿ ಭಾಗಿಯಾಗಿದ್ದಾರೆ. ಚೌಕಿದಾರ್ ಚೋರ್ ಹೈ ಎಂದು ಪ್ರತಿ ಭಾಷಣದಲ್ಲಿ ರಾಹುಲ್ ಗಾಂಧಿ ಅವರು ಹೇಳುತ್ತಲೇ ಇದ್ದಾರೆ. ಈ ರಫೇಲ್ ಹಗರಣದಿಂದ ಪ್ರಧಾನಿ ಮೋದಿ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ರಾಹುಲ್ ಗಾಂಧಿ ಕಿಡಿ ಕಾರುತ್ತಲೇ ಬಂದಿದ್ದಾರೆ.
ರಫೇಲ್ ಟೇಪ್ ಅಸಲಿಯೋ ನಕಲಿಯೋ? ಸವಾಲೇಕೆ ಸ್ವೀಕರಿಸಲಿಲ್ಲ ರಾಹುಲ್?
ದಮನಿತರ ಹಕ್ಕುಗಳಿಗೆ ಚ್ಯುತಿ ಇಲ್ಲ
ಇದೇ ಭಾಷಣದಲ್ಲಿ ಬಡತನದಲ್ಲಿರುವ ಮೇಲ್ಜಾತಿಯವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10ರಷ್ಟು ರಿಯಾಯಿತಿ ದೊರಕಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಯಶಸ್ವಿಯಾಗಿ ಮಂಡಿಸಿರುವುದು ಭಾರತೀಯ ಜನತಾ ಪಕ್ಷದ ಬಗ್ಗೆ ಸಲ್ಲದ ಸುಳ್ಳು ಹೇಳುತ್ತಿರುವ ಪಕ್ಷಕ್ಕೆ ತಕ್ಕ ಉತ್ತರ ನೀಡಿದೆ. ಈ ಮಸೂದೆಯಿಂದಾಗಿ ದಲಿತರು ಮತ್ತು ದಮನಿತರ ಹಕ್ಕುಗಳಿಗೆ ಯಾವುದೇ ಧಕ್ಕೆಯಾಗುವುದಿಲ್ಲ. ದಮನಿತ ವರ್ಗವನ್ನು ಮೇಲೆತ್ತುವಲ್ಲಿ ಸಹಾಯ ಮಾಡಲಿರುವ ಈ ಮಸೂದೆಯ ಮಂಡನೆ ಐತಿಹಾಸಿಕವಾದದ್ದು ಎಂದು ಅವರು ಬಣ್ಣಿಸಿದರು.
ಈಶಾನ್ಯ ರಾಜ್ಯದ ಜನತೆಗೆ ಮೋದಿ ಅಭಯ
ಇದೇ ರೀತಿ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫಘಾನಿಸ್ತಾನ ಬಂದು ಇಲ್ಲಿ ನೆಲೆಸಿರುವ ಮುಸ್ಲಿಮೇತರ ನಾಗರಿಕರಿಗೆ ಭಾರತೀಯ ನಾಗರಿಕತ್ವ ದೊರಕಿಸಿಕೊಡುವ ಸಿಟಿಜನ್ ಶಿಪ್ ಮಸೂದೆಯಿಂದಾಗಿ ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳಲ್ಲಿ ನೆಲೆಸಿರುವ ಜನರ ಹಕ್ಕುಗಳಿಗೆ ಕೂಡ ಯಾವುದೇ ಧಕ್ಕೆ ಆಗುವುದಿಲ್ಲ ಎಂದು ಮೋದಿಯವರು ವಾಗ್ದಾನ ಮತ್ತು ಅಭಯ ನೀಡಿದರು. ಆದರೆ, ಈಶಾನ್ಯ ರಾಜ್ಯಗಳಲ್ಲಿ ಈ ಮಸೂದೆಯ ವಿರುದ್ಧ ಪ್ರತಿಭಟನೆಗಳು ಆರಂಭವಾಗಿವೆ.