ತ್ರಿವಳಿ ತಲಾಖ್, ಶಬರಿಮಲೆ ಒಂದೇ ಮಾದರಿ ಸಮಸ್ಯೆಗಳಲ್ಲ: ಮೋದಿ
ನವದೆಹಲಿ, ಜನವರಿ 01 : ಶಬರಿಮಲೆ ಮತ್ತು ತ್ರಿವಳಿ ತಲಾಖ್ ಎರಡೂ ಒಂದು ರೀತಿಯ ಸಮಸ್ಯೆ ಅಲ್ಲ. ಎರಡೂ ಸಂಪೂರ್ಣ ವಿರುದ್ಧವಾದ ಸಮಸ್ಯೆ ಆಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂದರ್ಶನದಲ್ಲಿ ಹೇಳಿದರು.
ತ್ರಿವಳಿ ತಲಾಖ್ ಮಹಿಳೆಯರ ಹಕ್ಕುಗಳ ಉಲ್ಲಂಘನೆ ಎಂದು ಬಿಜೆಪಿ ಹೇಳುತ್ತದೆ. ಆದರೆ ಅದೇ ಶಬರಿಮಲೆ ವಿವಾದದಲ್ಲಿ ಸಂಪ್ರಾಯವಾದಿ ನಿಲುವು ತಳೆದು ಮಹಿಳೆ ಶಬರಿಮಲೆ ಪ್ರವೇಶಿಸಬಾರದು ಎನ್ನುತ್ತದೆ ಎಂದು ಈ ವಿವಾದಕ್ಕೆ ಸಂಬಂಧಿಸಿದ ಪ್ರಶ್ನೆಗೆ ನರೇಂದ್ರ ಮೋದಿ ಅವರು ವಿವರವಾದ ಉತ್ತರ ನೀಡಿದರು.
ನರೇಂದ್ರ ಮೋದಿ ಸಂದರ್ಶನ: ರಾಮ ಮಂದಿರಕ್ಕೆ ಸುಗ್ರೀವಾಜ್ಞೆ ಇಲ್ಲ
ಪಾಕಿಸ್ತಾನ ಸೇರಿದಂತೆ ತ್ರಿವಳಿ ತಲಾಖ್ಗೆ ಹಲವು ಮುಸ್ಲಿಂ ರಾಷ್ಟ್ರಗಳಲ್ಲಿಯೇ ನಿಷೇಧ ಇದೆ. ತ್ರಿವಳಿ ತಲಾಖ್ ಸಂಪ್ರದಾಯದ ವಿಷಯವೇ ಆಗಿದ್ದರೆ ಮುಸ್ಲಿಂ ರಾಷ್ಟ್ರಗಳಲ್ಲಿ ಅದಕ್ಕೆ ನಿಷೇಧ ಇರುತ್ತಿರಲಿಲ್ಲ. ಇದು ಲಿಂಗ ಸಮಾನತೆ, ಸಾಮಾಜಿಕ ನ್ಯಾಯದ ವಿಷಯ ಆಗಿದೆ ಎಂದು ಮೋದಿ ವಿವರಣೆ ನೀಡಿದರು.
ಶಬರಿಮಲೆ ಮತ್ತು ಮುಸ್ಲಿಂ ಸಮುದಾಯದಲ್ಲಿ ಜಾರಿಯಲ್ಲಿರುವ ತ್ರಿವಳಿ ತಲಾಖ್ ಎರಡೂ ವಿಭಿನ್ನ ಸಮಸ್ಯೆಗಳು. ಎರಡನ್ನೂ ತುಲನೆ ಮಾಡಿ ನೋಡಲೇಬಾರದು ಎಂದು ಮೋದಿಯವರು ಎಎನ್ಐಗೆ ನೀಡಿದ ಸಂದರ್ಶನದಲ್ಲಿ ನುಡಿದಿದ್ದಾರೆ.
ಶಬರಿಮಲೆ ಸಂಪ್ರದಾಯ ಪಾಲನೆ ಆಗಬೇಕು
ಎಲ್ಲರಿಗೂ ಸಮಾನ ಹಕ್ಕು ಕೊಡಬೇಕು ಎಂಬದು ಭಾರತದ ಸ್ವಭಾವ. ದೇಶದ ಕೆಲವು ದೇವಸ್ಥಾನಗಳಿಗೆ ಗಂಡಸರು ಸಹ ಹೋಗುವಂತಿಲ್ಲ, ಹಾಗೆಯೇ ಕೆಲವು ದೇವಾಲಯಗಳಿಗೆ ಹೆಂಗಸರು ಹೋಗುವಂತಿಲ್ಲ. ಅದು ಆಯಾ ದೇವಾಲಯಗಳು ಪಾಲಿಸಿಕೊಂಡು ಬಂದಿರುವ ಸಂಪ್ರದಾಯ. ಶಬರಿಮಲೆಯದ್ದೂ ಸಹ ಸಂಪ್ರದಾಯವೇ ವಿನಃ ಮಹಿಳೆಯ ಹಕ್ಕಿನ ವಿಷಯವಲ್ಲ ಎಂದು ಮೋದಿ ಹೇಳಿದರು.
ರಾಮ ಮಂದಿರ ಕುರಿತ ಮೋದಿ ಹೇಳಿಕೆಗೆ ಶ್ರೀರಾಮ ಸೇನೆ ವಿರೋಧ
ರಾಮ ಮಂದಿರಕ್ಕೆ ಸುಗ್ರೀವಾಜ್ಞೆ ಇಲ್ಲ
ತ್ರಿವಳಿ ತಲಾಖ್ ವಿಷಯದಲ್ಲಿ ಸುಪ್ರಿಂಕೋರ್ಟ್ ತೀರ್ಪು ಬಂದ ನಂತರ ತ್ರಿವಳಿ ತಲಾಖ್ ವಿಷಯದಲ್ಲಿ ಸುಗ್ರೀವಾಜ್ಞೆ ಹೊರಡಿಸಿದ್ದೆವು. ಆದರೆ ರಾಮ ಮಂದಿರ ಆಗಬಾರದೆಂದು ಹಲವು ವರ್ಷಗಳಿಂದ ಸರ್ಕಾರಗಳು ಯತ್ನಿಸಿವೆ. ಈಗಲೂ ವಿಷಯ ಸುಪ್ರಿಂಕೋರ್ಟ್ನಲ್ಲಿದೆ. ನಾನು ಕಾಂಗ್ರೆಸ್ನ ಗೆಳೆಯರಲ್ಲಿ ಕೇಳಿಕೊಳ್ಳುವುದೆಂದರೆ ತಮ್ಮ ಲಾಯರ್ಗಳಿಗೆ ಹೇಳಿ ಪ್ರಕರಣ ಇನ್ನಷ್ಟು ತಡ ಆಗುತ್ತಿರುವುದನ್ನು ತಡೆಯಿರಿ ಎಂದು ಮೋದಿ ಹೇಳಿದರು. ಬಿಜೆಪಿಯು ನ್ಯಾಯಾಲಯದ ತೀರ್ಪು ಬಂದ ನಂತರವಷ್ಟೆ ರಾಮ ಮಂದಿರ ನಿರ್ಮಾಣಕ್ಕೆ ಮುಂದಾಗುತ್ತದೆ ಎಂದು ಮೋದಿ ಹೇಳಿದರು.
ಮನ್-ಕೀ-ಬಾತ್ನಲ್ಲಿ ಸೂಲಗಿತ್ತಿ ನರಸಮ್ಮನಿಗೆ ಮೋದಿ ನಮನ
'ಕಾಂಗ್ರೆಸ್ ಪರಿಸ್ಥಿತಿ ಬೇರೆಯೇ ಇದೆ'
ಕಾಂಗ್ರೆಸ್ ಪರಿಸ್ಥಿತಿ ಬೇರೆಯದ್ದೇ ಆಗಿದೆ. ಕಾಂಗ್ರೆಸ್ ಇಂದು ಮುಂದಾಳತ್ವ ವಹಿಸಿರುವ ಮೈತ್ರಿಕೂಟದಲ್ಲಿರುವ ಪಕ್ಷಗಳು ಒಂದೊಮ್ಮೆ ಕಾಂಗ್ರೆಸ್ಗೆ ವಿರುದ್ಧವೇ ಇದ್ದ ಪಕ್ಷಗಳಾಗಿವೆ. ಕಾಂಗ್ರೆಸ್ನ ಅಧಿಕಾರಶಾಹಿತನದಿಂದ ಬೇಸೆತ್ತು ಹೊರ ಬಂದಿದ್ದ ಪಕ್ಷಗಳು ಇಂದು ಮತ್ತೆ ಕಾಂಗ್ರೆಸ್ ಕಡೆ ಹೋಗುತ್ತಿವೆ. ಈಗ ಕಾಂಗ್ರೆಸ್ ಮತ್ತೆ ತನ್ನ ಅಧಿಕಾರಶಾಹಿತನ ಪ್ರದರ್ಶಿಸುತ್ತಿದೆ ಎಂದು ಮೋದಿ ಅವರು ಕಾಂಗ್ರೆಸ್ನ ಮಹಾಘಟಬಂಧನ್ ಅನ್ನು ಟೀಕಿಸಿದರು.
'2019 ರಲ್ಲಿ ಗೆಲುವು ನಮ್ಮದೆ'
2019 ರ ಲೋಕಸಭೆ ಚುನಾವಣೆಯ ಬಗ್ಗೆ ಮಾತನಾಡಿದ ಮೋದಿ, ಮುಂದಿನ ಚುನಾವಣೆಯಲ್ಲಿ ನಾವು ಖಂಡಿತ ಬಹುಮತದಿಂದ ಗೆದ್ದುಬರುತ್ತೇವೆ. ನಾವು ಮೈತ್ರಿ ಧರ್ಮ ಪಾಲಿಸಿದ್ದೇವೆ. ನಾವು ಮಾಡಿಕೊಂಡಿರುವ ಮೈತ್ರಿ ದೇಶದ ಅಭಿವೃದ್ಧಿಗೆ ಎಂದು ಅವರು ಹೇಳಿದರು.