'ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಧ್ವಂಸ ಮಾಡಿದ ಪ್ರಧಾನಿ ನರೇಂದ್ರ ಮೋದಿ'
ಬ್ಯಾಂಕಿಂಗ್ ವ್ಯವಸ್ಥೆಯನ್ನು ಮೋದಿ ಜೀ ಧ್ವಂಸ ಮಾಡಿಬಿಟ್ಟರು. ನೀರವ್ ಮೋದಿ 30,000 ಕೋಟಿ ರುಪಾಯಿ ಜತೆ ದೇಶ ಬಿಟ್ಟು ಹೋದರೂ ಪ್ರಧಾನಮಂತ್ರಿಗಳು ಒಂದು ಮಾತನಾಡಲಿಲ್ಲ. ನಮ್ಮನ್ನು ಬಲವಂತವಾಗಿ ಸರತಿಯಲ್ಲಿ ನಿಲ್ಲಿಸಿ, ನಮ್ಮ ಜೇಬಿನಿಂದ 500, 1000 ರುಪಾಯಿ ಕಸಿದುಕೊಂದು, ನೀರವ್ ಮೋದಿಯ ಜೇಬು ತುಂಬಿಸಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ನಗದು ಕೊರತೆ ಸಮಸ್ಯೆ ಬಗ್ಗೆ ಮಂಗಳವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಸಂಸತ್ ನಲ್ಲಿ ನಿಲ್ಲುವುದಕ್ಕೂ ಪ್ರಧಾನಮಂತ್ರಿ ಹೆದರ್ತಾರೆ. ಅದು ರಫೇಲ್ ನ ವಿಚಾರ ಇರಬಹುದು ಅಥವಾ ನೀರವ್ ಮೋದಿ ವಿಚಾರ ಇರಬಹುದು. ನಾವು ಹದಿನೈದು ನಿಮಿಷ ಭಾಷಣ ಮಾಡಿದರೂ ಸಂಸತ್ ನಲ್ಲಿ ಮೋದಿ ಅವರು ನಿಲ್ಲಲಾರರು ಎಂದು ಲೇವಡಿ ಮಾಡಿದ್ದಾರೆ.
ಎಟಿಎಂಗಳಲ್ಲಿ ದುಡ್ಡಿಲ್ಲ, 85ರಷ್ಟು ಸಮಸ್ಯೆಯಿಲ್ಲ ಎನ್ನುವ ಸರಕಾರ
ಕರ್ನಾಟಕ, ಆಂಧ್ರಪ್ರದೇಶ, ರಾಜಸ್ತಾನ, ಉತ್ತರಪ್ರದೇಶ, ಮಧ್ಯಪ್ರದೇಶ, ತೆಲಂಗಾಣ ಹಾಗೂ ದೆಹಲಿಯಲ್ಲಿ ಎಟಿಎಂಗಳಲ್ಲಿ ಹಣ ಇಲ್ಲದೇ ಖಾಲಿ ಕೈಲಿ ವಾಪಸಾಗುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಸಾಕಷ್ಟು ಹಣ ಚಲಾವಣೆಯಲ್ಲಿದೆ. ಆದರೆ ಎಲ್ಲೋ ಕೆಲ ಪ್ರದೇಶದಲ್ಲಿ ಬೇಡಿಕೆ ಹೆಚ್ಚಾಗಿ ಸಮಸ್ಯೆ ಆಗಿದೆ ಎಂದು ಹೇಳಿದ್ದಾರೆ.
ಈ ವಿಚಾರವಾಗಿ ರಾಹುಲ್ ಗಾಂಧಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.