ಗೆಳೆಯನ ಅಗಲಿಕೆಗೆ ದೂರದ ದೇಶದಿಂದಲೇ ಕಣ್ಣೀರಿಟ್ಟ ಪ್ರಧಾನಿ ಮೋದಿ
ನವದೆಹಲಿ, ಆಗಸ್ಟ್ 24: ಈ ತಿಂಗಳ ಆರಂಭದಲ್ಲಷ್ಟೇ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರನ್ನು ಕಳೆದುಕೊಂಡು ಆಘಾತ ಅನುಭವಿಸಿದ್ದ ಬಿಜೆಪಿಗೆ ಮತ್ತೊಂದು ಕಹಿ ಸುದ್ದಿ ಎದುರಾಗಿದೆ. ಅರುಣ್ ಜೇಟ್ಲಿ ಅವರ ನಿಧನದಿಂದ ಬಿಜೆಪಿ ದೊಡ್ಡ ಚಿಂತನಾ ಶಕ್ತಿಯೊಂದನ್ನು ಕಳೆದುಕೊಂಡಿದೆ.
ಅರುಣ್ ಜೇಟ್ಲಿ ಅವರಿಗೆ ಪರಮಾಪ್ತರಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶ ಪ್ರವಾಸದಲ್ಲಿದ್ದಾರೆ. ಬಹುರಾಷ್ಟ್ರಗಳ ಪ್ರವಾಸದಲ್ಲಿರುವ ಮೋದಿ ಅವರು ಶನಿವಾರ ಯುಎಇಯಲ್ಲಿದ್ದಾರೆ. ದೂರದ ಊರಿನಿಂದಲೇ ಅವರು ದುಃಖ ಹಂಚಿಕೊಂಡಿದ್ದಾರೆ. ಮೋದಿ ಅವರು ಇದೇ ವಿದೇಶ ಪ್ರವಾಸ ಮೊಟಕುಗೊಳಿಸಿ ಬರಲಿದ್ದಾರೆಯೇ ಅಥವಾ ಭಾನುವಾರ ಆಗಮಿಸಲಿದ್ದಾರೆಯೇ ಎನ್ನುವುದು ಖಚಿತವಾಗಿಲ್ಲ.
Breaking News ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ಇನ್ನಿಲ್ಲ
ಜೇಟ್ಲಿ ಅವರ ಅಗಲುವಿಕೆಯ ನೋವನ್ನು ಹಂಚಿಕೊಂಡು ಮೋದಿ ಅವರು ಸರಣಿ ಟ್ವೀಟ್ಗಳನ್ನು ಮಾಡಿದ್ದಾರೆ. ಜೇಟ್ಲಿ ಒಬ್ಬ ರಾಜಕೀಯ ದಿಗ್ಗಜ. ಬೌದ್ಧಿಕ ಮತ್ತು ಕಾನೂನಿನ ಜ್ಞಾನವುಳ್ಳವರು. ಭಾರತಕ್ಕೆ ದೊಡ್ಡ ಮಟ್ಟದ ಕೊಡುಗೆ ನೀಡಿದ ಮಹಾನ್ ನಾಯಕ ಅವರು. ಅವರ ನಿಧನ ಅತೀವ ದುಃಖ ತಂದಿದೆ. ಅವರ ಪತ್ನಿ ಸಂಗೀತಾ ಅವರೊಂದಿಗೆ ಮತ್ತು ಮಗ ರೋಹನ್ ಅವರೊಂದಿಗೆ ಮಾತನಾಡಿ ನನ್ನ ಸಂತಾಪ ಸೂಚಿಸಿದ್ದೇನೆ. ಓಂ ಶಾಂತಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಬಹುಮುಖಿ ವ್ಯಕ್ತಿಯತ್ವದ ಜೇಟ್ಲಿ
'ಜೀವನಪೂರ್ತಿ ಮೇಧಾವಿತನದ ವರ ಪಡೆದವರು, ಅದ್ಭುತ ಹಾಸ್ಯ ಪ್ರಜ್ಞೆ ಮತ್ತು ಚರಿಷ್ಮಾ ಹೊಂದಿದ್ದ ಅರುಣ್ ಜೇಟ್ಲಿ ಅವರನ್ನು ಸಮಾಜದ ಎಲ್ಲ ವರ್ಗಗಳ ಜನರೂ ಮೆಚ್ಚಿಕೊಳ್ಳುತ್ತಿದ್ದರು. ಅವರು ಬಹುಮುಖಿ ವ್ಯಕ್ತಿತ್ವವುಳ್ಳವರು. ಭಾರತದ ಸಂವಿಧಾನ, ಇತಿಹಾಸ, ಸಾರ್ವಜನಿಕ ನೀತಿ, ಅಧಿಕಾರ ಮತ್ತು ಆಡಳಿತದ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು' ಎಂದು ಮೋದಿ ಸ್ಮರಿಸಿದ್ದಾರೆ.
ಬೆಳವಣಿಗೆಗೆ ಮಹತ್ವದ ಕೊಡುಗೆ
'ತಮ್ಮ ಸುದೀರ್ಘಾವಧಿ ರಾಜಕೀಯ ವೃತ್ತಿ ಬದುಕಿನಲ್ಲಿ ಅರುಣ್ ಜೇಟ್ಲಿ ಅವರು ವಿವಿಧ ಸಚಿವ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಈ ಮೂಲಕ ಅವರು ಭಾರತದ ಆರ್ಥಿಕ ಬೆಳವಣಿಗೆಗೆ, ನಮ್ಮ ರಕ್ಷಣಾ ಸಾಮರ್ಥ್ಯವನ್ನು ವೃದ್ಧಿಸಲು, ಜನಪರ ಕಾನೂನುಗಳನ್ನು ಸೃಷ್ಟಿಸಲು ಮತ್ತು ಇತರೆ ದೇಶಗಳೊಂದಿಗೆ ವ್ಯಾಪಾರ ವೃದ್ಧಿಗೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ' ಎಂದು ಶ್ಲಾಘಿಸಿದ್ದಾರೆ.
LIVE: ಜೇಟ್ಲಿ ಅಗಲಿಕೆಗೆ ಸಂತಾಪ, ಪತ್ನಿ, ಪುತ್ರಗೆ ಮೋದಿ ಕರೆ
ಪಕ್ಷದ ನೆಚ್ಚಿನ ವ್ಯಕ್ತಿ
'ಬಿಜೆಪಿ ಮತ್ತು ಅರುಣ್ ಜೇಟ್ಲಿ ನಡುವಿನದ್ದು ಮುರಿಯಲಾಗದ ಬಾಂಧವ್ಯ. ಪ್ರಖರ ವಿದ್ಯಾರ್ಥಿ ನಾಯಕರಾಗಿ ತುರ್ತು ಪರಿಸ್ಥಿತಿ ವೇಳೆ ನಮ್ಮ ಪ್ರಜಾಪ್ರಭುತ್ವವನ್ನು ರಕ್ಷಿಸುವಲ್ಲಿ ಮುಂಚೂಣಿ ಹೋರಾಟದಲ್ಲಿದ್ದರು. ಅವರು ನಮ್ಮ ಪಕ್ಷದ ಅತಿ ಮೆಚ್ಚುಗೆಯ ವ್ಯಕ್ತಿಯಾಗಿ ಅವರು ಬೆಳೆದಿದ್ದರು. ಪಕ್ಷದ ಕಾರ್ಯಕ್ರಮಗಳನ್ನು ಮತ್ತು ಸಿದ್ಧಾಂತಗಳನ್ನು ಸಮಾಜದಲ್ಲಿ ಅಭಿವ್ಯಕ್ತಿಸುವ ಸಾಮರ್ಥ್ಯ ಹೊಂದಿದ್ದರು' ಎಂದಿದ್ದಾರೆ.
ಪ್ರಧಾನಿ ಹುದ್ದೆಗೆ ಮೋದಿ ಹೆಸರು ಸೂಚಿಸಿದ್ದ ಜೇಟ್ಲಿ ಎಂಬ ಟ್ರಬಲ್ ಶೂಟರ್
ಮಿಸ್ ಮಾಡಿಕೊಳ್ಳಲಿದ್ದೇವೆ
'ಜೇಟ್ಲಿ ಅವರ ನಿಧನದಿಂದ ನಾನು ಹಲವು ದಶಕಗಳಿಂದ ಬಲ್ಲೆನೆಂಬ ಗೌರವ ಹೊಂದಿದ್ದ ಮೌಲ್ಯಯುತ ಗೆಳೆಯನನ್ನು ಕಳೆದುಕೊಂಡಿದ್ದೇನೆ. ವಿಚಾರಗಳ ಕುರಿತ ಅವರ ಒಳನೋಟಗಳು ಮತ್ತು ವಿಚಾರಗಳನ್ನು ಕೂಲಂಕಷವಾಗಿ ಅರ್ಥಮಾಡಿಕೊಳ್ಳುವ ಶಕ್ತಿ ಕೆಲವೇ ಮಂದಿಗೆ ಇರುವಂಥದ್ದು. ಅವರು ಚೆನ್ನಾಗಿ ಬದುಕಿದ್ದರು, ಅನೇಕ ಸಂತಸದ ಸ್ಮರಣೀಯ ಗಳಿಗೆಗಳೊಂದಿಗೆ ನಮ್ಮನ್ನು ಅವರು ಬಿಟ್ಟುಹೋಗಿದ್ದಾರೆ. ನಾವು ಅವರನ್ನು ಮಿಸ್ ಮಾಡಿಕೊಳ್ಳಲಿದ್ದೇವೆ' ಎಂದು ಹೇಳಿದ್ದಾರೆ.