ತಾಯಿ-ಮಗುವಿನ ಆರೋಗ್ಯ ಕಾಪಾಡಲು ಕೇಂದ್ರದ ದಿಟ್ಟ ಹೆಜ್ಜೆ
ನವದೆಹಲಿ, ಆಗಸ್ಟ್, 01: ತಾಯಿ ಹಾಗೂ ಮಗುವಿನ ಮರಣ ತಡೆಯಲು ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆಯೊಂದನ್ನು ಇರಿಸಿದೆ. ಇನ್ನು ಮುಂದೆ ಪ್ರತಿ ತಿಂಗಳು 9ನೇ ತಾರಿಕಿನಂದು ದೇಶಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಗರ್ಭಿಣಿಯರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಮನ್ ಕಿ ಬಾತ್ನ 22ನೇ ಆವೃತ್ತಿಯಲ್ಲಿ ಮಾತನಾಡಿದ ಪ್ರಧಾನಿ ಹಲವಾರು ವಿಚಾರಗಳನ್ನು ದೇಶದ ಮುಂದೆ ಇಟ್ಟರು. ಅದರಲ್ಲಿ ಪ್ರಮುಖವಾಗಿ ಗರ್ಭಿಣಿಯರ ಆರೋಗ್ಯ ಸಮಸ್ಯೆ ಮತ್ತು ಹೆರಿಗೆ ಸಮಯದಲ್ಲಿ ಸಾವನ್ನಪ್ಪುತ್ತಿರುವ ಪ್ರಕರಣಗಳನ್ನು ಉಲ್ಲೇಖ ಮಾಡಿದರು.[ಸ್ವಾತಂತ್ರ್ಯ ದಿನಾಚರಣೆ ದಿನ ಮೋದಿ ಜೀವಕ್ಕೆ ಕಂಟಕ]
ಕೇಂದ್ರ ಸರ್ಕಾರ ಗರ್ಭಿಣಿಯರಿಗಾಗಿ 'ಸುರಕ್ಷಿತ ಮಾತೃತ್ವ ಅಭಿಯಾನ' ಆರಂಭಿಸಿದೆ. ಪ್ರತಿ ತಿಂಗಳ 9ನೇ ತಾರೀಕು ಸರ್ಕಾರಿ ಆಸ್ಪತ್ರೆಗಳಲ್ಲಿ ಗರ್ಭಿಣಿಯರಿಗೆ ಉಚಿತ ತಪಾಸಣೆ ನಡೆಯಲಿದ್ದು ಸಲಹೆ ಮತ್ತು ಆರೋಗ್ಯ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದರು.
ಕ್ರೀಡಾಪಟುಗಳಿಗೆ ಶುಭಾಶಯ
ರಿಯೋ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಕ್ರೀಡಾಪಟುಗಳಿಗೆ ಶುಭ ಕೋರಿದ ಪ್ರಧಾನಿ ದೇಶದ ಹಿರಿಮೆಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಿ ಎಂದು ಹಾರೈಸಿದರು.
ರೋಗಗಳ ಬಗ್ಗೆ ಎಚ್ಚರ
ಮಳೆಗಾಲದಲ್ಲಿ ಅಂಟಿಕೊಳ್ಳಬಹುದಾದ ರೋಗಗಳ ಬಗ್ಗೆ ಜಾಗೃತರಾಗಿರಬೇಕು. ಸರ್ಕಾರಿ ಇಲಾಖೆಗಳು ತಿಳುಸುವ ಸೂಚನೆಗಳ ಜತೆ ಸ್ವಯಂ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು.
ನಿಮ್ಮ ಸಲಹೆ ಬೇಕಿದೆ
ಸ್ವಾತಂತ್ರ್ಯ ದಿನಾಚರಣೆಯಂದು ನಾನು ಮಾಡಲಿರುವ ಭಾಷಣಕ್ಕೆ ನಿಮ್ಮ ಸಲಹೆ ಬೇಕು. ಸಾಮಾಜಿಕ ತಾಣ ಮತ್ತು ಪತ್ರದ ಮೂಲಕ ನನ್ನಗೆ ನಿಮ್ಮ ಇಂಗಿತವನ್ನು ತಿಳಿಸಿ.
ಅಟಲ್-ಕಲಾಂ
ಎಪಿಜೆ ಅಬ್ದುಲ್ ಕಲಾಂ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಕನಸುಗಳನ್ನು ಮೋದಿ ಮತ್ತೆ ಸ್ಮರಿಸಿದರು. ಅವುಗಳನ್ನು ಸಾಕಾರ ಮಾಡಲು ಎಲ್ಲರ ಸಹಕಾರ ಕೋರಿದರು.
ಸಂಶೋಧನೆಗೆ ಮುಂದಾಗಿ
ಭಾರತ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಅವಕ್ಕೆ ತಾಂತ್ರಿಕ ಪರಿಹಾರ ಹುಡುಕಬೇಕಾಗಿದೆ. ಹೀಗಾಗಿ ಯುವಕರು ಸಂಶೋಧನೆಗೆ ಮಂದಾಗಬೇಕು ಎಂದು ಪ್ರಧಾನಿ ಕರೆ ನೀಡಿದರು.
ಅಟಲ್ ಟಿಂಕರಿಂಗ್ ಲ್ಯಾಬ್
ಯಾವುದೇ ಶಾಲೆ 'ಅಟಲ್ ಟಿಂಕರಿಂಗ್ ಲ್ಯಾಬ್' ತೆರೆದರೆ ಅದಕ್ಕೆ 10 ಲಕ್ಷ ರೂ. ನೀಡಲಾಗುತ್ತದೆ. ಐದು ವರ್ಷಗಳ ಕಾಲ ನಿರ್ವಹಣೆಗೆ ಅಷ್ಟೇ ಮೊತ್ತ ಒದಗಿಸಲಾಗುತ್ತದೆ ಎಂದು ಮೋದಿ ತಿಳಿಸಿದರು.