ಆತ್ಮ ನಿರ್ಭರ ಭಾರತಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ಸಹಕಾರಿ; ಮೋದಿ
ನವದೆಹಲಿ, ಸೆಪ್ಟೆಂಬರ್ 7: "ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಯುವಕರಿಗೆ ಅಗತ್ಯ ಕೌಶಲ್ಯಗಳು ಬೇಕು. ಅದಕ್ಕಾಗಿ ಪ್ರಾಯೋಗಿಕ ಕಲಿಕೆಯ ಅಗತ್ಯವಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020 ಇದಕ್ಕೆ ಅವಕಾಶವನ್ನು ಕಲ್ಪಿಸಲಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಸೋಮವಾರ ಪ್ರಧಾನಿ ನರೇಂದ್ರ ಮೋದಿ 'ರಾಷ್ಟ್ರೀಯ ಶಿಕ್ಷಣ ನೀತಿ' ಕುರಿತ ರಾಜ್ಯಪಾಲರ ಸಮಾವೇಶ ಉದ್ದೇಶಿಸಿ ಮಾತನಾಡಿದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್, ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಮುಖ್ಯಸ್ಥ ಕಸ್ತೂರಿ ರಂಗನ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಶಿಕ್ಷಕರ ವೇತನ ಏರಿಕೆ ಮಾಡಿದ ಬಿಹಾರ ಶಿಕ್ಷಣ ಇಲಾಖೆ
'ಉನ್ನತ ಶಿಕ್ಷಣ ಪರಿವರ್ತನೆಯಲ್ಲಿ ಎನ್ಇಪಿ-2020 ಪಾತ್ರ' ಎಂಬುದು ಈ ಸಮಾವೇಶದ ಪ್ರಮುಖ ವಿಚಾರವಾಗಿತ್ತು. ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಾವೇಶ ಉದ್ದೇಶಿಸಿ ಮಾತನಾಡಿದರು.
ನೂತನ ಶಿಕ್ಷಣ ನೀತಿ ಒಪ್ಪಿದ ಮೊದಲ ರಾಜ್ಯ ಕರ್ನಾಟಕ
ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, "ರಾಷ್ಟ್ರೀಯ ಶಿಕ್ಷಣ ನೀತಿ ಭಾರತವನ್ನು ಸಮಾನ, ಸ್ಪರ್ಧಾತ್ಮಕ ಮತ್ತು ಕ್ರಿಯಾಶೀಲ ಜ್ಞಾನದ ಸಮಾಜವನ್ನಾಗಿ ರೂಪಿಸಲಿದೆ" ಎಂದು ಹೇಳಿದರು.
ಸರ್ಕಾರದ ಪ್ರಭಾವ ಕಡಿಮೆ ಇರಬೇಕು
"ಶಿಕ್ಷಣ ನೀತಿಯಲ್ಲಿ ಸರ್ಕಾರದ ಪ್ರಭಾವ ಕಡಿಮೆ ಇರಬೇಕು. ಇದು ಸರ್ಕಾರದ ಶಿಕ್ಷಣ ನೀತಿಯಲ್ಲ, ದೇಶದ ಶಿಕ್ಷಣ ನೀತಿಯಾಗಿದೆ. ವಿದೇಶ, ರಕ್ಷಣಾ ನೀತಿ ಹೇಗೆ ದೇಶದ್ದು ಆಗುತ್ತದೆಯೋ ಹಾಗೆಯೇ ಶಿಕ್ಷಣ ನೀತಿ ದೇಶದ್ದು. ಆಗ ಇಲ್ಲಿ ಯಾವ ಸರ್ಕಾರವಿದೆ, ಹಿಂದೆ ಯಾವ ಸರ್ಕಾರವಿತ್ತು? ಎಂಬುದು ಮುಖ್ಯವಾಗುವುದಿಲ್ಲ" ಎಂದು ಮೋದಿ ಹೇಳಿದರು.
2 ಲಕ್ಷಕ್ಕೂ ಹೆಚ್ಚು ಅಭಿಪ್ರಾಯ ಸಂಗ್ರಹ
"ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ದೇಶದ ತುಂಬಾ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಈ ಸಮಾವೇಶ ಆಯೋಜನೆ ಮಾಡಲಾಗಿದೆ. ಅದಕ್ಕಾಗಿ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಗರ, ಗ್ರಾಮಗಳಲ್ಲಿ ನೆಲೆಸಿರುವ ಜನರು ತಮ್ಮ ಅಭಿಪ್ರಾಯಗಳನ್ನು ಶಿಕ್ಷಣ ನೀತಿಯ ಕುರಿತು ವ್ಯಕ್ತಪಡಿಸಿದ್ದರು. 2 ಲಕ್ಷಕ್ಕೂ ಅಧಿಕ ಅಭಿಪ್ರಾಯಗಳನ್ನು ಸಂಗ್ರಹ ಮಾಡಲಾಗಿದೆ" ಎಂದು ನರೇಂದ್ರ ಮೋದಿ ಹೇಳಿದರು.
ಇದು ದೇಶದ ಮೇಲೆ ಪ್ರಭಾವ ಬೀರಲಿದೆ
"ಎಲ್ಲಾ ಕ್ಷೇತ್ರಗಳ ಗಣ್ಯರು, ವಿದ್ಯಾರ್ಥಿಗಳು, ಶಿಕ್ಷಕರು ಮುಂತಾದವರ ದೃಷ್ಟಿಕೋನದ ಫಲವಾಗಿ ರಾಷ್ಟ್ರೀಯ ಶಿಕ್ಷಣ ನೀತಿ ತಯಾರಾಗಿದೆ, ಅದನ್ನು ಇಂದು ಎಲ್ಲರೂ ಸ್ವಾಗತಿಸುತ್ತಿದ್ದಾರೆ. ಶಿಕ್ಷಣ ನೀತಿ ಕೇವಲ ಓದು, ಬರೆಯುವುದರ ಮೇಲೆ ನಿಂತಿಲ್ಲ. ಇದು ದೇಶದ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಯ ಮೇಲೆ ಪ್ರಭಾವ ಬೀರಲಿದೆ" ಎಂದು ಮೋದಿ ಬಣ್ಣಿಸಿದರು.
ಜ್ಞಾನದ ಜೊತೆ ಕೌಶಲ್ಯ ಬೇಕಿದೆ
"ನಮ್ಮ ಘೋಷಣೆಯಾದ ಆತ್ಮ ನಿರ್ಭರ ಭಾರತಕ್ಕೂ ರಾಷ್ಟ್ರೀಯ ಶಿಕ್ಷಣ ನೀತಿ ಸಹಾಯಕವಾಗಲಿದೆ. ಯುವಕರಿಗೆ ಜ್ಞಾನ, ಕೌಶಲ್ಯವನ್ನು ಒದಗಿಸಲಿದೆ. ಪ್ರತಿ ವಿದ್ಯಾರ್ಥಿಗೂ ಗಮನ ಕೊಡುವ ಮೂಲಕ ಅವರಿಗೆ ಕೌಶಲ್ಯ ಒದಗಿಸುವ ಕುರಿತು ಅಂಶಗಳನ್ನು ಸೇರಿಸಲಾಗಿದೆ. ಇಂತಹ ನೀತಿ ತಯಾರು ಮಾಡುವುದು ಸುಲಭದ ಕೆಲಸವಾಗಿರಲಿಲ್ಲ" ಎಂದು ಮೋದಿ ಹೇಳಿದರು.
ಪುಸ್ತಕಕ್ಕೆ ಮಾತ್ರ ಸೀಮಿತವಾಗಬಾರದು
"ವಿದ್ಯಾರ್ಥಿಗಳ ಕಲಿಕೆ ಪುಸ್ತಕಕ್ಕೆ ಮಾತ್ರ ಸೀಮಿತವಾರಬಾರದು ಎಂಬುದು ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯ.ಹಲವಾರು ವರ್ಷಗಳಿಂದ ನಮ್ಮ ಶಿಕ್ಷಣ ನೀತಿಯ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದಿದ್ದವು. ಅವುಗಳಿಗೆ ಇಲ್ಲಿ ಉತ್ತರ ನೀಡುವ ಪ್ರಯತ್ನ ಮಾಡಲಾಗಿದೆ. ಕೇವಲ ಬ್ಯಾಗ್, ಪುಸ್ತಕ, ಬೋರ್ಡ್ ಪರೀಕ್ಷೆಗಳಿಗೆ ಈ ಶಿಕ್ಷಣ ನೀತಿ ಅಂಟಿಕೊಂಡಿಲ್ಲ" ಎಂದು ಮೋದಿ ಹೇಳಿದರು.
ಜಾರಿಗೊಳಿಸುವುದು ಹೇಗೆ?
"ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಹಲವಾರು ಪ್ರಶ್ನೆ ಎದ್ದಿವೆ. ಪಠ್ಯ ಹೇಗಿರುತ್ತದೆ?, ಶಿಕ್ಷಕರು ಹೇಗೆ ಪಾಠ ಮಾಡಲಿದ್ದಾರೆ? ಎಂಬ ಚರ್ಚೆಗಳು ಸಾಗಿವೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಲು ನಾವೆಲ್ಲರೂ ಸೇರಿ ಕಾರ್ಯ ನಿರ್ವಹಣೆ ಮಾಡಬೇಕು. ಶಿಕ್ಷಣ ಸಚಿವಾಲಯದ ಕಡೆಯಿಂದ ಸಮಾವೇಶಗಳು ನಡೆಯುತ್ತಿವೆ. ಸಮಾವೇಶಗಳಲ್ಲಿ ಬರುತ್ತಿರುವ ಸಲಹೆಗಳನ್ನು ಮುಕ್ತ ಮನಸ್ಸಿನಿಂದ ಆಲಿಸಲಾಗುತ್ತಿದೆ" ಎಂದು ಮೋದಿ ಹೇಳಿದರು.
ತಂತ್ರಜ್ಞಾನ ಬಳಕೆಗೆ ಒತ್ತು
"ದೇಶದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ ನೀತಿ ರೂಪಿಸಲಾಗಿದೆ. ಗ್ರಾಮ ಮಟ್ಟಕ್ಕೆ ತಂತ್ರಜ್ಞಾನ ತಲುಪುತ್ತಿರುವುದನ್ನು ಗಮನಿಸಲಾಗಿದೆ. ಶಾಲೆ, ಕಾಲೇಜು, ವಿಶ್ವವಿದ್ಯಾಲಯದ ಮಟ್ಟದಲ್ಲಿ ತಂತ್ರಜ್ಞಾನ ಆಧಾರಿತ ಶಿಕ್ಷಣ ನೀತಿಯನ್ನು ಪರಿಚಯ ಮಾಡಿಸುವುದು ಶಿಕ್ಷಣ ನೀತಿಯ ಉದ್ದೇಶವಾಗಿದೆ" ಎಂದು ಮೋದಿ ಹೇಳಿದರು.
ಎನ್ಇಪಿ 2020 ಬಗ್ಗೆ ನಿಮ್ಮ ರಾಜ್ಯ, ಕೇಂದ್ರಾಡಳಿತ ಪ್ರದೇಶದ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಸಮಾವೇಶ ಆಯೋಜನೆ ಮಾಡಿ, ನಿರಂತರವಾಗಿ ಚರ್ಚೆಗಳು ನಡೆಯಲಿ ಎಂದು ನರೇಂದ್ರ ಮೋದಿ ಕರೆ ನೀಡಿದರು.